ಹಿಜಾಬ್ ವಿವಾದ; ಕಳೆದ ವರ್ಷವೇ ವ್ಯೂಹ ರಚನೆ, ಎನ್ಐಎ ತನಿಖೆಗೆ ಒತ್ತಾಯ: ಶಾಸಕ ರಘುಪತಿ ಭಟ್
![ಹಿಜಾಬ್ ವಿವಾದ; ಕಳೆದ ವರ್ಷವೇ ವ್ಯೂಹ ರಚನೆ, ಎನ್ಐಎ ತನಿಖೆಗೆ ಒತ್ತಾಯ: ಶಾಸಕ ರಘುಪತಿ ಭಟ್ ಹಿಜಾಬ್ ವಿವಾದ; ಕಳೆದ ವರ್ಷವೇ ವ್ಯೂಹ ರಚನೆ, ಎನ್ಐಎ ತನಿಖೆಗೆ ಒತ್ತಾಯ: ಶಾಸಕ ರಘುಪತಿ ಭಟ್](https://www.varthabharati.in/sites/default/files/images/articles/2022/02/11/324706-1644589202.jpg)
ಉಡುಪಿ, ಫೆ.11: ಹಿಜಾಬ್ ವಿವಾದಕ್ಕೆ ಸಂಬಂಧಿಸಿ 2021 ನವೆಂಬರ್ನಲ್ಲಿ ವ್ಯೂಹ ರಚನೆ ಮಾಡಲಾಗಿದೆ. ಎಲ್ಲ ಯೋಜನೆ ಮಾಡಿ ಹೋರಾಟ ಗಲಭೆ ಎಬ್ಬಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಈ ಪ್ರಕರಣ ವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿಯಲ್ಲಿ ಆರಂಭವಾದ ವಿವಾದ ಇಡೀ ರಾಷ್ಟ್ರಕ್ಕೆ ವ್ಯಾಪಿಸಿದೆ. ಇದರ ಹಿಂದೆ ಅಂತರಾಷ್ಟ್ರೀಯ ಸಂಚು ಇರುವ ಬಗ್ಗೆ ಗುಮಾನಿ ಇದೆ. ಈ ಬಗ್ಗೆ ಗೃಹಸಚಿವ ಅರಗ ಜ್ಞಾನೆಂದ್ರ ಅವರಿಗೆ ಪತ್ರ ಬರೆದು ದೂರು ನೀಡಲಾಗುವುದು. ಈ ವಿಚಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ತಿಳಿಸಿದರು.
ಹೈದರಾಬಾದ್ನಿಂದ ಕೆಲವರು ಇಲ್ಲಿಗೆ ಬಂದು ಮಾಡಲು ಏನಿದೆ. ಹೊರರಾಜ್ಯಗಳಿಂದ ತರಬೇತುದಾರರು ಬಂದಿರುವ ಬಗ್ಗೆ ಮಾಹಿತಿ ಇದೆ. ಉಡುಪಿಗೆ ಹೈದರಾಬಾದ್ನಿಂದ ಕೆಲವರು ಬಂದು ಇಲ್ಲಿ ಓಡಾಡಿದ್ದಾರೆ. ರಾಜ್ಯ ಸರಕಾರಕ್ಕೆ ನಾನು ಈಗಾಗಲೇ ಪತ್ರವನ್ನು ಕೊಟ್ಟಿದ್ದೇನೆ. ಹಿಜಾಬ್ ವಿವಾದವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದರು.
ಉಡುಪಿ ಜಿಲ್ಲೆಯ ಮುಸ್ಲಿಮ್ ಮುಖಂಡರು ನಮ್ಮ ಜೊತೆ ಉತ್ತಮ ಬಾಂಧ್ಯವದಲ್ಲಿ ಇದ್ದಾರೆ. ಜಿಲ್ಲಾ ಮುಸ್ಲಿಂ ಮುಖಂಡರ ಜೊತೆ ಹಲವಾರು ಸಭೆಗಳು ನಡೆದಿವೆ. ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರ ಇರೋದು ಗೊತ್ತಾಗಿದೆ, ಈ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ. ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿನಿಯರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ಹೀಗೆ ಇವರು ಕೂಡ ಸುಪ್ರೀಂ ಕೋರ್ಟ್ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣ ಕಾನೂನು ಬಾಹಿರ ಎಂದು ಬರೆದು ಕೊಂಡಿದ್ದಾರೆ. ಸಿಎಫ್ಐ ಪಿಎಫ್ಐ ಸಂಘಟನೆ ವಿದ್ಯಾರ್ಥಿಗಳನ್ನು ದಾಳ ಮಾಡಲಾಗಿದೆ. ತುಕಡೆ ಗ್ಯಾಂಗ್ ದೇಶ ಒಡೆಯುವಂತಹ ಗ್ಯಾಂಗ್. ತುಕಡೆ ಗ್ಯಾಂಗ್ ಇಷ್ಟೆಲ್ಲಾ ರಾದ್ಧಾಂತ ಸೃಷ್ಟಿ ಮಾಡಿದೆ ಎಂದು ಅವರು ರಘುಪತಿ ಭಟ್ ಆರೋಪಿಸಿದ್ದಾರೆ.
ಹಿಜಾಬ್ ಹೋರಾಟಕ್ಕೆ ಇಷ್ಟು ದಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಬಲ ನೀಡಿತ್ತು. ಪ್ರಕರಣಕ್ಕೆ ಸಿದ್ದರಾಮಯ್ಯ ಎಂಟ್ರಿಯಾಗುವ ಮೂಲಕ ಕಾಂಗ್ರೆಸ್ ಬೆಂಬಲ ನೀಡಿದೆ. ಈಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಬಿ.ವಿ.ಶ್ರೀನಿವಾಸ್ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕಾಂಗ್ರೆಸ್ನ ನಿಲುವು ಏನು ಎಂಬುದು ಗೊತ್ತಾಗಿದೆ. ನಾವು ಹಿಜಾಬ್ ಸಂಪೂರ್ಣ ಬ್ಯಾನ್ ಮಾಡಲು ಮುಂದಾಗಿಲ್ಲ. ತರಗತಿಗೆ ಹಿಜಾಬ್ ಧರಿಸಿ ಬರುವುದು ಬೇಡ ಎಂಬುದು ಮಾತ್ರ ನಮ್ಮ ನಿಲುವು ಎಂದು ರಘುಪತಿ ಭಟ್ ತಿಳಿಸಿದ್ದಾರೆ.