ಮಡಿಕೇರಿ: ನಂಜರಾಯಪಟ್ಟಣ ತೋಟದಲ್ಲಿ ಅಸ್ವಸ್ಥಗೊಂಡ ಕಾಡಾನೆ ಪತ್ತೆ

ಮಡಿಕೇರಿ ಫೆ.11 : ತೀವ್ರ ಅಸ್ವಸ್ಥಗೊಂಡು ಆಹಾರ, ನೀರು ತ್ಯಜಿಸಿರುವ ಕಾಡಾನೆಯೊಂದು ನಂಜರಾಯಪಟ್ಟಣದ ದಾಸಾವಾಳ ಗ್ರಾಮದ ತೋಟವೊಂದರಲ್ಲಿ ಪತ್ತೆಯಾಗಿದೆ.
ಸಿ.ಪಿ.ಪಾಪಯ್ಯ ಎಂಬುವವರ ಪುತ್ರಿಗೆ ಸೇರಿದ ತೋಟದ ಹೊಂಡದಲ್ಲಿ ಆನೆ ಬಿದ್ದಿದ್ದು, ಆಹಾರ ಸ್ವೀಕರಿಸುತ್ತಿಲ್ಲ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪಶುವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ. ಆದರೆ ಮೇಲೇಳಾಗದ ಸ್ಥಿತಿಯಲ್ಲೇ ಇರುವುದರಿಂದ ದುಬಾರೆ ಶಿಬಿರದಿಂದ ಮೂರು ಸಾಕಾನೆಗಳನ್ನು ತಂದು ಸ್ಥಳಾಂತರಿಸುವ ಪ್ರಯತ್ನ ನಡೆಯಿತು. ಅನಾರೋಗ್ಯ ಅಥವಾ ಗುಂಡೇಟಿನಿಂದ ಆನೆ ಅಸ್ವಸ್ಥಗೊಂಡಿರಬಹುದೆಂದು ಶಂಕಿಸಲಾಗಿದೆ.
ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಸೇರಿದಂತೆ ಕುಶಾಲನಗರ ವಲಯದ ಅಧಿಕಾರಿಗಳು ಭೇಟಿ ನೀಡಿದ್ದರು.
ಬೇಲಿ ನೆಲಸಮ
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ನಿರಂತರ ದಾಳಿಯಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಕಳೆದ ಮೂರು ತಿಂಗಳಿನಲ್ಲಿ ಮೂರು ಜೀವಹಾನಿಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಬರುವುದನ್ನು ತಡೆಯಲು ರೈಲ್ವೆ ಕಂಬಿಗಳ ಬೇಲಿ ಮತ್ತು ಕಾಂಕ್ರಿಟ್ ಕಂಬಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳು ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ನೆಲಸಮಗೊಂಡಿವೆ. ಬೇಲಿ ಮತ್ತು ಕಂಬಗಳನ್ನು ಮುರಿದು ಕಾಡಾನೆಗಳು ಗ್ರಾಮಗಳನ್ನು ಪ್ರವೇಶಿಸುತ್ತಿವೆ. ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.









