‘ಟ್ಯಾಕ್ಸೋನೊಮಿ ಭಟ್ಟರ ಯಾನ’ ಫೆ.13ರಂದು ಅನಾವರಣ
ಉಡುಪಿ, ಫೆ.11: ಉಡುಪಿಯ ಸಸ್ಯವಿಜ್ಞಾನಿ ಡಾ. ಗೋಪಾಲಕೃಷ್ಣ ಭಟ್ ಅವರ ಬದುಕು, ಸಾಧನೆಗಳ ಪರಿಚಯಾತ್ಮಕ ಬರವಣಿಗೆ ‘ಟ್ಯಾಕ್ಸೋನೊಮಿ ಭಟ್ಟರ ಯಾನ’ ಪುಸ್ತಕದ ಅನಾವರಣ ಕಾರ್ಯಕ್ರಮ ಫೆ.13ರ ರವಿವಾರ ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಅವರ ಉಪಸ್ಥಿತಿಯಲ್ಲಿ ಪುಸ್ತಕ ಅನಾವರಣಗೊಳ್ಳಲಿದೆ. ಡಾ.ಭಟ್ ಅವರ ಪಿಎಚ್ಡಿ ಗೈಡ್ ಆಗಿದ್ದ ಮೈಸೂರಿನ ಡಾ.ಸಿ.ಆರ್.ನಾಗೇಂದ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಪ್ರೊ.ಡಾ.ಎನ್.ಎ. ಮಧ್ಯಸ್ಥ ಉಪಸ್ಥಿತರಿರುವರು.
ನಿವೃತ್ತ ಸಸ್ಯ ವಿಜ್ಞಾನಿ ಪ್ರೊ.ವಿ.ಅರವಿಂದ ಹೆಬ್ಬಾರ್ ಸಂಪಾದಕತ್ವದಲ್ಲಿ ಮತ್ತು ಬೆಂಗಳೂರಿನ ತೇಜು ಪಬ್ಲಿಕೇಶನ್ ಪ್ರಕಾಶನದಲ್ಲಿ ರಂಜನಿ ಮೆಮೊರಿಯಲ್ ಟ್ರಸ್ಟ್ ವುೂಲಕ ಈ ಪುಸ್ತಕ ಹೊರಬರುತ್ತಿದೆ.
ಸಸ್ಯ ವರ್ಗೀಕರಣ ಶಾಸ್ತ್ರದಲ್ಲಿ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಯನ್ನು ಹೊಂದಿರುವ ಡಾ.ಕಾಕುಂಜೆ ಗೋಪಾಲಕೃಷ್ಣ ಭಟ್ ಅವರು 1971ರಿಂದ 2005 ರವರೆಗೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ, ವಿಭಾಗ ಮುಖ್ಯಸ್ಥರಾಗಿ ದುಡಿದಿದ್ದಾರೆ. ಪ್ಲೋರಾ ಆಫ್ ಉಡುಪಿ ಮತ್ತು ಪ್ಲೋರಾ ಆಫ್ ಸೌತ್ ಕೆನರಾ ಎಂಬ ಎರಡು ಬೃಹತ್ ಹೊತ್ತಗೆಗಳನ್ನು ಪ್ರಕಟಿಸಿರುವ ಡಾ. ಭಟ್ ಸುಮಾರು 55 ಸಂಶೋಧನಾ ಲೇಖನಗಳನ್ನೂ ಬರೆದಿದ್ದಾರೆ.