ಉ.ಪ್ರ.: ನಾಪತ್ತೆಯಾಗಿದ್ದ ದಲಿತ ಯುವತಿಯ ಮೃತದೇಹ ಎಸ್ಪಿ ಮಾಜಿ ಶಾಸಕನ ಅಶ್ರಮದ ಸಮೀಪ ಪತ್ತೆ

ಉನ್ನಾವೊ (ಉತ್ತರಪ್ರದೇಶ), ಫೆ. 10: ಉತ್ತರಪ್ರದೇಶದ ಉನ್ನಾವೊದಿಂದ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ 22 ವರ್ಷದ ದಲಿತ ಯುವತಿಯ ಕೊಳೆತ ಮೃತದೇಹ ಸಮಾಜವಾದಿ ಪಕ್ಷದ ಸರಕಾರದ ಮಾಜಿ ಸಚಿವರಾಗಿದ್ದ ಫತೇಹ್ ಬಹಾದ್ದೂರ್ ಸಿಂಗ್ ಅವರು ನಿರ್ಮಾಣ ಮಾಡಿದ್ದ ಆಶ್ರಮದ ಸಮೀಪ ಖಾಲಿ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಪ್ರಧಾನ ಆರೋಪಿ ಫತೇಹ್ ಬಹಾದ್ದೂರ್ ಅವರ ಪುತ್ರ ರಾಜೋಲ್ ಸಿಂಗ್ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
‘‘ರಿಮಾಂಡ್ನಲ್ಲಿರುವ ಆರೋಪಿ ರಾಜೋಲ್ ಸಿಂಗ್ನನ್ನು ನಾವು ವಿಚಾರಣೆ ನಡೆಸಿದ್ದೇವೆ. ಅನಂತರ ಎಸ್ಒಜಿ ತಂಡ ಯುವತಿಯ ಮೃತದೇಹವನ್ನು ಗುರುವಾರ ಹೊರಗೆ ತೆಗೆದಿದೆ. ಆಶ್ರಮದ ಸಮೀಪ ಯುವತಿಯ ಮೃತದೇಹವನ್ನು ದಫನ ಮಾಡಲಾಗಿತ್ತು. ಮೃತದೇಹ ದಫನ ಮಾಡಿದ ಸ್ಥಳವನ್ನು ಗುರುತಿಸಲು ನಾವು ಸ್ಥಳೀಯ ಬೇಹುಗಾರಿಕೆ ಹಾಗೂ ಮೊಬೈಲ್ ಕಣ್ಗಾವಲನ್ನು ಬಳಸಿದೆವು’’ ಎಂದು ಉನ್ನಾವೊದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಿಶೇಖರ್ ಸಿಂಗ್ ಹೇಳಿದ್ದಾರೆ. ಅಕ್ರಮ ಸಂಬಂಧ ವಿಕೋಪಕ್ಕೆ ತಿರುಗಿದಾಗ ಸಂಭವಿಸಿದ ದುರಂತ ಇದಾಗಿರಬಹುದು. ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.





