ಈ ವರೆಗೆ ರಾಜ್ಯದಲ್ಲಿ ಮ್ಯಾನ್ ಹೋಲ್ಗೆ ಇಳಿದ 90 ಮಂದಿ ಪೌರ ಕಾರ್ಮಿಕರ ಸಾವು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಬೆಂಗಳೂರು, ಫೆ. 11: ‘ಶೌಚ ಗುಂಡಿ(ಮ್ಯಾನ್ ಹೋಲ್) ಸ್ವಚ್ಛತೆಗೆ 1995ರಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 90 ಮಂದಿ ಪೌರ ಕಾರ್ಮಿಕರು ಸಾವನ್ನಪ್ಪಿದ್ದು, ಗುತ್ತಿಗೆದಾರ ಸೇರಿದಂತೆ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ' ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮ್ಯಾನ್ಹೋಲ್ ಸ್ವಚ್ಛತೆಗೆ ಯಂತ್ರೋಪಕರಣ ಬಳಕೆ ಮಾಡಿಕೊಳ್ಳಬೇಕೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲಿ ಯಂತ್ರಗಳನ್ನು ಖರೀದಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಶೌಚ ಗುಂಡಿ ಸ್ವಚ್ಛತೆಗೆ ಜಟ್ಟಿಂಗ್ ಯಂತ್ರ ಖರೀದಿಗೆ ಸಾಲ ಸೌಲಭ್ಯ ಕಲ್ಪಿಸುವ ಸಂಬಂಧವೂ ಚರ್ಚಿಸಲಾಗಿದೆ' ಎಂದರು.
‘ಮ್ಯಾನ್ಹೋಲ್ಗೆ ಇಳಿದು ಬೆಂಗಳೂರು ನಗರದಲ್ಲೇ ಅತ್ಯಂತ ಹೆಚ್ಚು ಮಂದಿ ಪೌರ ಕಾರ್ಮಿಕರ ಸಾವನ್ನಪ್ಪಿದ್ದು, ಒಟ್ಟು 40 ಮಂದಿ ಪೌರ ಕಾರ್ಮಿಕರು ಅಸುನೀಗಿದ್ದಾರೆ. ಉಳಿದಂತೆ ಧಾರವಾಡ-9, ಮೈಸೂರು-6, ಹಾಸನ-5, ಕೋಲಾರ-5, ಬೆಂ.ಗ್ರಾಮಾಂತರ-4, ತುಮಕೂರು-4, ಶಿವಮೊಗ್ಗ-4, ವಿಜಯಪುರ-3, ಕಲಬುರಗಿ 2, ರಾಮನಗರ–3, ಉತ್ತರ ಕನ್ನಡ, ಮಂಡ್ಯ,ಚಾಮರಾಜನಗರ,ರಾಯಚೂರುಹಾಗೂ ಉಡುಪಿಯಲ್ಲಿ ತಲಾ ಒಂದೊಂದು ಸೇರಿ ಒಟ್ಟು 90 ಮಂದಿ ಪೌರ ಕಾರ್ಮಿಕರ ಸಾವನ್ನಪ್ಪಿದ್ದಾರೆ' ಎಂದು ಮಾಹಿತಿ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಸಿಟ್ಟು: ‘ಮ್ಯಾನ್ಹೋಲ್ಗೆ ಪೌರ ಕಾರ್ಮಿಕರನ್ನು ಇಳಿಸುವುದು ಅಪರಾಧ' ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಗರಂ ಆದ ಸಚಿವ ನಾರಾಯಣಸ್ವಾಮಿ, ‘ನೀವು ಹೀಗೆ ಉತ್ತರ ನೀಡಬೇಕು ಎಂದು ನೀವು ನನಗೆ ನಿರ್ದೇಶನ(ಡಿಕ್ಟೇಟ್) ನೀಡಲು ಸಾಧ್ಯವಿಲ್ಲ. ನಾನು ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಆ ಮಾಹಿತಿ ತಮಗೆ ನೀಡುತ್ತಿದ್ದೇನೆ' ಎಂದರು.
ಎಷ್ಟು ಮಂದಿ ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ, ಎಷ್ಟು ಮಂದಿ ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂಬ ಅಂಕಿ-ಸಂಖ್ಯೆಗಳನ್ನು ಕೊಡಿ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲು ಕ್ಷಣಕಾಲ ತಡಬಡಾಯಿಸಿದ ಅವರು, ‘ನಾನು ಹೇಳುವುದನ್ನು ಮೊದಲು ಕೇಳಿ, ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ' ಎಂದು ಏರುಧ್ವನಿಯಲ್ಲಿ ಹೇಳಿದರು.
‘ಕೇಂದ್ರ ಸಚಿವರಾದ ನಿಮಗೆ ನಿಮಗೆ ಸರಿಯಾದ ಮಾಹಿತಿ ಇಲ್ಲವೇ? ಅಥವಾ ನಿಮ್ಮ ಅಧಿಕಾರಿಗಳು ನಿಮಗೆ ಮಾಹಿತಿ ನೀಡುತ್ತಿಲ್ಲವೇ?' ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಇದರಿಂದ ಕೆರಳಿದ ನಾರಾಯಣ ಸ್ವಾಮಿ, ‘ಅಧಿಕಾರಿಗಳ ತಪ್ಪುಗಳನ್ನು ಹೇಳಲು ನನಗೆ ಯಾವುದೇ ಮುಜುಗರವಿಲ್ಲ. ಈಗಾಗಲೇ ಪೌರ ಕಾರ್ಮಿಕರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದು ಸ್ಪಷ್ಟಣೆ ನೀಡಿದರು.
‘ರಾಜ್ಯದಲ್ಲಿ 1995ರಿಂದ 2022ರ ವರೆಗೆ ಪರಿಶಿಷ್ಟ ಜಾತಿಯ 41 ಮಂದಿ, ಪರಿಶಿಷ್ಟ ಪಂಗಡದ 6 ಹಾಗೂ ಹಿಂದುಳಿದ ವರ್ಗಗಳ ಒಟ್ಟು 36 ಮಂದಿ ಸೇರಿ ಒಟ್ಟು 90 ಮಂದಿ ಪೌರ ಕಾರ್ಮಿಕರು ಮ್ಯಾನ್ಹೋಲ್ಗೆ ಇಳಿದು ಸಾವನ್ನಪ್ಪಿದ್ದಾರೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಕಾರ್ಮಿಕರನ್ನು ಮ್ಯಾನ್ಹೋಲ್ಗೆ ಇಳಿಸದಂತೆ ಸೂಚನೆ ನೀಡಿದ್ದು, ಯಂತ್ರಗಳನ್ನು ಖರೀಸಲು ಹಣಕಾಸಿನ ನೆರವು ನೀಡಲು ಯೋಜನೆ ರೂಪಿಸಲು ಸೂಚಿಸಲಾಗಿದೆ' ಎಂದು ತಿಳಿಸಿದರು.
ಶಿಕ್ಷೆ ಪ್ರಮಾಣ ಕಡಿಮೆ: ‘ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶೇ.3ರಷ್ಟು ಮಾತ್ರ ಶಿಕ್ಷೆಯಾಗಿದೆ. ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದಕ್ಕಾಗಿ ವಿಶೇಷ ನ್ಯಾಯಾಲಯವೂ ಇಲ್ಲ. ಜಾತಿ ದೌರ್ಜನ್ಯ ಮತ್ತು ಮಾರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಶೀಘ್ರವಾಗಿ ಇತ್ಯರ್ಥ ಆಗಬೇಕು' ಎಂದು ಅವರು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಅನುದಾನ ಕೊರತೆಯ ಬಗ್ಗೆಯೂ ಪರಿಶೀಲನೆ ನಡೆಸಿದ್ದು, ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಜೊತೆಗೆ ಭೂ ಒಡೆತನ ಯೋಜನೆಗೂ ನೆರವು ನೀಡಲು ಸರಕಾರದೊಂದಿಗೆ ಚರ್ಚಿಸಲಾಗಿದೆ ಎಂದು ನಾರಾಯಣಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಸಭೆಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೈರಾಗಿದ್ದರು. ಸಮಾಜ ಕಲ್ಯಾಣ ಇಲಾಖೆ, ವಿವಿಧ ನಿಗಮಗಳ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.







