ಆರನೇ ದಿನಕ್ಕೆ ಕಾಲಿರಿಸಿದ 'ಅಕ್ರಮ ಟೋಲ್ ಗೇಟ್ ವಿರುದ್ಧದ ಧರಣಿ'
ಗುಂಡಿ ತೋಡಿ ಮಣ್ಣಿನಡಿಯಲ್ಲಿ ಮಲಗಿ ಪ್ರತಿಭಟನೆ

ಮಂಗಳೂರು, ಫೆ.12: ಸುರತ್ಕಲ್ ಎನ್ಐಟಿಕೆ ಅಕ್ರಮ ಟೋಲ್ ಗೇಟು ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯು ಶನಿವಾರ ಆರನೇ ದಿನಕ್ಕೆ ಕಾಲಿರಿಸಿದೆ.
ಕಳೆದ ಹಲವಾರು ವರ್ಷಗಳಿಂದ ಎನ್ಐಟಿಕೆ ಅಕ್ರಮ ಅವೈಜ್ಞಾನಿಕ ಟೋಲ್ ಗೇಟ್ ವಿರುದ್ಧ ವಿವಿಧ ಸಂಘಟಿತ ಹೋರಾಟ ನಡೆಯುತ್ತಿದೆ. ಆದರೆ ರಾಜಕೀಯ ಪ್ರಭಾವದಿಂದಾಗಿ ಸರಕಾರದ ಕಾನೂನುಗಳನ್ನು ಮೀರಿ ಇಲ್ಲಿ ಅಕ್ರಮವಾಗಿ ಶುಲ್ಕ ವಸೂಲು ಮಾಡಲಾಗುತ್ತಿದೆ. ಈ ಟೋಲ್ ಗೇಟ್ ಮುಚ್ಚುವವರೆಗೆ ನಮ್ಮ ಹೋರಾಟಕ್ಕೆ ಅಂತ್ಯವಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಆಶಿಫ್ ಆಪತ್ಬಾಂಧವ ತಿಳಿಸಿದರು.
ಪ್ರತಿಭಟನೆಯ ನಡುವೆ ವಿಶೇಷವಾಗಿ ಧರಣಿ ವೇದಿಕೆಯ ಮುಂದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗುಂಡಿ ತೋಡಿ ಮಣ್ಣಿನೊಳಗೆ ಮಲಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಸಾರ್ವಜನಿಕರ ಗಮನ ಸೆಳೆದರು.
ಸುರತ್ಕಲ್, ಕಾಟಿಪಳ್ಳ ವಲಯ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರಾದ ಹುಸೇನ್ ಕಾಟಿಪಲ್ಲ, ಸಲೀಂ ರಝಾಕ್, ಅಬ್ದುಲ್ ಖಯ್ಯೆಮ್, ವಾಸೀಂ, ಅಬ್ದುಲ್ ಸಮದ್, ಅಬ್ದುಲ್ ಲತೀಫ್, ಜಮಿಶೀದ್, ಅಶ್ರಫ್, ಸುರತ್ಕಲ್ ವಲಯ ಬಂಟ ಸಮುದಾಯದ ಪುಷ್ಪರಾಜ್ ಶೆಟ್ಟಿ, ಧನಂಜಯ ಶೆಟ್ಟಿಸ ರಾಜ್ಯ ಡಿಜೆ-ಟ್ರಕ್ ಚಾಲಕ ಮಾಲಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಸುನಿಲ್ ಡಿಸೋಜ ಕಾರ್ಯದರ್ಶಿ ಸುಶಾಂತ್ ಶೆಟ್ಟಿ. ಹಿರಿಯ ಹೋರಾಟಗಾರ ಹರ್ಷರಾಜ್ ಮುಲ್ಕಿ, ಪ್ರಸಿದ್ಯ ಮಂಗಳೂರು, ಎಸ್. ಮುಹಮ್ಮದ್ ತಡಂಬೈಲ್, ರಾಘವ ಇಡ್ಯಾ ಇನ್ನಿತರರು ಆಶಿಫ್ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.






.jpeg)

.jpeg)


