ಅಂಗಾಂಗ ದಾನಿಗಳನ್ನು ಗೌರವಿಸುವ ವಾತಾವರಣ ಸೃಷ್ಟಿ ಅಗತ್ಯ: ಆರೋಗ್ಯ ಸಚಿವ ಡಾ.ಸುಧಾಕರ್

ಬೆಂಗಳೂರು, ಫೆ. 12: ‘ಅಂಗಾಂಗಗಳ ದಾನದಲ್ಲಿ ಅಮೆರಿಕ ಹಾಗೂ ಚೀನಾ ಬಳಿಕ, ಭಾರತ ಮೂರನೆ ಸ್ಥಾನದಲ್ಲಿದೆ. 2012-13ನೆ ಸಾಲಿಗೆ ಹೋಲಿಸಿದರೆ, ಅಂಗಾಂಗ ದಾನದ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ವಾರ್ಷಿಕ ಅಂಗಾಂಗ ದಾನಗಳ ಸಂಖ್ಯೆ 2013ರಲ್ಲಿ 4,990 ಆಗಿದ್ದು, 2019ರಲ್ಲಿ 12,746ಕ್ಕೆ ಏರಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಅಂಗಾಂಗ ದಾನದ ಪ್ರಮಾಣದಲ್ಲಿ ನಾಲ್ಕು ಪಟ್ಟು ಏರಿಕೆ ಕಂಡಿದ್ದರೂ, ಅಂಗಾಂಗಗಳ ಬೇಡಿಕೆಯನ್ನು ಪೂರೈಸಲು ಇನ್ನಷ್ಟು ಹಾದಿಯನ್ನು ಸವೆಸಬೇಕಾಗಿದೆ. ದೇಶದಲ್ಲಿ ಕೇವಲ ಶೇ.3ರಷ್ಟು ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ 10ಲಕ್ಷ ಜನರಲ್ಲಿ, 0.65 ಮಂದಿ ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ.
ಸ್ಪೇನ್ನಲ್ಲಿ ಈ ಪ್ರಮಾಣ 35 ಹಾಗೂ ಅಮೆರಿಕದಲ್ಲಿ 26ರಷ್ಟಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಅಂಗಾಂಗ ದಾನದ ಪ್ರಮಾಣ ಇಳಿಕೆಯಾಗಿದೆ. ಆದರೂ ಸಾಂಕ್ರಾಮಿಕಕ್ಕಿಂತ ಹಿಂದೆಯೂ ಅಂಗಾಂಗ ದಾನ ಹೆಚ್ಚಿನ ಪ್ರಮಾಣದಲ್ಲೇನೂ ನಡೆಯುತ್ತಿರಲಿಲ್ಲ. ಏಮ್ಸ್ನ 2019ರ ಅಂಕಿ ಅಂಶದ ಪ್ರಕಾರ, ವಾರ್ಷಿಕವಾಗಿ 1.5 ರಿಂದ 2 ಲಕ್ಷ ಜನರಿಗೆ ಮೂತ್ರಪಿಂಡ ಕಸಿಯ ಅಗತ್ಯವಿದೆ. ಆದರೆ ಈ ಪೈಕಿ 8ಸಾವಿರ ಜನರು ಅಂದರೆ ಶೇ.4ರಷ್ಟು ಮಂದಿ ಮಾತ್ರ ಮೂತ್ರಪಿಂಡ ಪಡೆಯುತ್ತಿದ್ದಾರೆ.
ಇದೇ ರೀತಿ ಪ್ರತಿವರ್ಷ 80ಸಾವಿರ ರೋಗಿಗಳಿಗೆ ಯಕೃತ್ತು(ಲಿವರ್) ಕಸಿ ಅಗತ್ಯವಿದ್ದು, 1,800 ಮಂದಿ ಮಾತ್ರ ಕಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ವಾರ್ಷಿಕ ಸುಮಾರು 1ಲಕ್ಷ ರೋಗಿಗಳಿಗೆ ಕಾರ್ನಿಯಾ ಅಥವಾ ಕಣ್ಣು ಸಂಬಂಧಿತ ಕಸಿ ಅಗತ್ಯವಿದ್ದು, ಅರ್ಧಕ್ಕಿಂತಲೂ ಕಡಿಮೆ ಮಂದಿಗೆ ಇದು ಲಭ್ಯವಾಗುತ್ತಿದೆ. ಹೃದಯ ಕಸಿ ಅಗತ್ಯವಿರುವ 10 ಸಾವಿರ ರೋಗಿಗಳಲ್ಲಿ 200 ಮಂದಿಗೆ ಮಾತ್ರ ಸರಿಯಾದ ಹೊಂದಾಣಿಕೆಯಾಗಿ ದಾನ ದೊರೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
‘ಜನರಲ್ಲಿ ಜಾಗೃತಿಯ ಕೊರತೆಯಿಂದಾಗಿ ಅಂಗಾಂಗ ದಾನ ಕಡಿಮೆಯಾಗಿದೆ. ಅಂಗಾಂಗ ದಾನ ಹೆಚ್ಚಿಸಲು ಇಡೀ ಸಮಾಜ, ಜಾಗೃತ ನಾಗರಿಕರು, ವೈದ್ಯರು ಹಾಗೂ ಮಾಧ್ಯಮಗಳು ತಮ್ಮ ಪಾತ್ರ ವಹಿಸಬೇಕಿದೆ. ಈ ಮೂಲಕ ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಬೇಕಿದೆ. ಬೆವರು ಸುರಿಸಿ ಸಂಪಾದಿಸಿದ ಆಸ್ತಿ, ಹಣವನ್ನು ಕಲ್ಯಾಣ ಕಾರ್ಯಗಳಿಗೆ ದಾನ ಮಾಡುವ ವ್ಯಕ್ತಿಗಳನ್ನು ಗೌರವಿಸುವ ರೀತಿಯಲ್ಲಿ ಅಂಗಾಂಗ ದಾನಿಗಳನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಅಂಗಾಂಗ ದಾನವನ್ನು ವೈದ್ಯಕೀಯ ಪ್ರಕ್ರಿಯೆಯಂತೆ ನೋಡುವ ಬದಲು, ಅಂಗಾಂಗ ಪಡೆಯುವವರಿಗೆ ದಾನಿಯು ಜೀವದ ಕೊಡುಗೆಯನ್ನು ನೀಡುವ ಮಹತ್ಕಾರ್ಯವಾಗಿ ಪರಿಗಣಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
‘ಕೋಲಾರ ಜಿಲ್ಲೆಯ 26 ವರ್ಷ ವಯಸ್ಸಿನ ಚೈತ್ರಾ ಅವರ ಅಂಗಾಂಗಗಳನ್ನು ದಾನ ಮಾಡಿರುವುದು ಬಹಳ ಸ್ಫೂರ್ತಿ ನೀಡುವ ಘಟನೆಯಾಗಿದ್ದು, ಇದು ಇಡೀ ಸಮಾಜಕ್ಕೆ ಉತ್ತಮ ನಿದರ್ಶನ. ಆಕೆಯು ವೈವಾಹಿಕ ಜೀವನದ ಸಂಭ್ರಮದ ಹೊಸ ಹೆಜ್ಜೆಯನ್ನು ಇರಿಸುವ ವೇಳೆಯಲ್ಲೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿರುವುದು ವಿಧಿಯ ಅನ್ಯಾಯ ಹಾಗೂ ಕ್ರೂರತನ. ಇಂತಹ ಹೃದಯವಿದ್ರಾವಕ ಘಟನೆ ನಡೆದು ಕುಟುಂಬದವರು ಸಹಿಸಲಾರದ ಅಪಾರ ನೋವಿನಲ್ಲಿದ್ದರೂ, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿರುವುದಕ್ಕೆ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಮರಣದ ನಂತರ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುವ ಅಂಗಾಂಗ ದಾನವನ್ನು ಮಾಡಲು ಎಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಜೀವಸಾರ್ಥಕತೆ' ತಂಡವು ಅಂಗಾಂಗ ದಾನಕ್ಕೆ ಉತ್ತೇಜನ ಮತ್ತು ದಾನದ ಪ್ರಕ್ರಿಯೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಇದಕ್ಕಾಗಿ ಇಡೀ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







