ಉದ್ಯಮಿ ಸುರೇಶ್ ಪಡುಕೋಣೆ ನಿಧನ

ಕುಂದಾಪುರ, ಫೆ.14: ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿ ಗ್ರಾಮದ ಪಡುಕೋಣೆಯ ಉದ್ಯಮಿ ಹಾಗೂ ಧಾರ್ಮಿಕ ಮುಖಂಡ ಸುರೇಶ್ ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಚಿಕ್ಕ ವಯಸ್ಸಿನಲ್ಲೇ ಮುಂಬಯಿಗೆ ತೆರಳಿದ ಇವರು ವಿವಿಧ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿ ನಂತರ ಹೋಟೆಲ್ ಉದ್ಯಮಕ್ಕೂ ಕಾಲಿಟ್ಟರು. ಧಾರ್ಮಿಕ ಕ್ಷೇತ್ರದಲ್ಲಿ ಅತೀ ಆಸಕ್ತಿಯಿಂದ ತೊಡಗಿಸಿ ಕೊಂಡ ಸುರೇಶ್ ಪಡುಕೋಣೆ ಊರ ಹಾಗೂ ಪರಊರ ಧಾರ್ಮಿಕ ಕ್ಷೇತ್ರಗಳಿಗೆ ಅತಿ ಹೆಚ್ಚು ದೇಣಿಗೆ ನೀಡುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
1968ರಲ್ಲಿ ಮುಂಬಯಿಯಲ್ಲಿ ಅಪೋಲೋ ಬೊರಿಂಗ್ ಪ್ರಾರಂಭಿಸಿದ್ದ ಇವರು ನಂತರ ಉಡುಪಿ ಸಹಿತ ಮೂರು ಕಡೆ ಘಟಕ ವಿಸ್ತರಿಸಿದ್ದರು. ಮುಂಬೈಯಲ್ಲಿ ಸಸ್ಯಾಹಾರಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.
ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿಗಳಾಗಿ, ಕುಂದಾಪುರ ತಾಲೂಕು ದೇವಾಡಿಗರ ಸಂಘದ ಮಹಾಪೋಷಕರಾಗಿ ಸೇವೆ ಸಲ್ಲಿಸಿದ್ದರು.
ಸುರೇಶ್ ಪಡುಕೋಣೆ ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story