ಕೋಳ್ಯೂರು ರಾಮಚಂದ್ರರಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

ರಾಮಚಂದ್ರ ರಾವ್
ಉಡುಪಿ: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯ ಅವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಈ ಬಾರಿ ಪ್ರಸಿದ್ಧ ಯಕ್ಷಗಾನ ಕಲಾಸಾಧಕ, ತೆಂಕುತಿಟ್ಟಿನ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆಯಾಗಿದ್ದಾರೆ.
ತಜ್ಞರ ಆಯ್ಕೆ ಸಮಿತಿ ಈ ಬಾರಿಯ ಪ್ರಶಸ್ತಿಗೆ ಕೋಳ್ಯೂರು ಅವರನ್ನು ಆಯ್ಕೆ ಮಾಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ ತಿಂಗಳಲ್ಲಿ ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗಾನದ ರಾಣಿಯೆಂದೇ ಪ್ರಖ್ಯಾತರಾದ ಕೋಳ್ಯೂರು ರಾಮಚಂದ್ರ ರಾಯರು ಹುಟ್ಟಿದ್ದು ಬಂಟ್ವಾಳ-ಕಾಸರಗೋಡು ಗಡಿಭಾಗದ ಕರೋಪಾಡಿ - ಕೋಡ್ಲದಲ್ಲಿ 1932ರ ನ.9ರಂದು. ಶಾಲೆಯೋದಿದ್ದು ಕೋಳ್ಯೂರಿ ನಲ್ಲಿ. ಧರ್ಮಸ್ಥಳ ಮೇಳದಲ್ಲಿ ಗೆಜ್ಜೆಕಟ್ಟಿದ್ದು ಕುರಿಯ ವಿಠಲಶಾಸಿಗಳ ಪರಮ ಗುರುತ್ವದಲ್ಲಿ. ಕುಂಬ್ಳೆ ರಾಮಚಂದ್ರರಿಂದ ಹೆಜ್ಜೆ ಕಲಿತು, ಅದೇ ಮೇಳದಲ್ಲಿ ಪ್ರಸಿದ್ಧರಾಗಿ, ಕಟೀಲು, ಕೂಡ್ಲು, ಸುರತ್ಕಲ್, ಕದ್ರಿ, ಕರ್ನಾಟಕ ಬಪ್ಪನಾಡು ಮೇಳಗಳಲ್ಲಿ ನಿರಂತರವಾಗಿ 7 ದಶಕಗಳ ತಿರುಗಾಟ ನಡೆಸಿದ್ದರು.
ಯಕ್ಷಗಾನದ ಮಟ್ಟಿಗೆ ಕರ್ನಾಟಕದ ಕನ್ನಡ ಜನತೆಯ ಮನೆಮಾತಾದರು. ತುಳುವರ ಪ್ರೀತಿಗೆ ಪಾತ್ರರಾದರು. ಕೋಳ್ಯೂರು ರಾಮಚಂದ್ರ ರಾಯರ ಸಾಧನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ರಾಷ್ಟ್ರಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿ ಸಂಮಾನಗಳಿಗೆ ಭಾಜನರಾಗಿದ್ದಾರೆ.