ಬೆಂಗಳೂರು: ಐಟಿ ಕಂಪೆನಿಗಳಲ್ಲಿ ಉದ್ಯೋಗದ ಆಮಿಷ ಆರೋಪ; ಹಲವರ ಬಂಧನ

ಬೆಂಗಳೂರು, ಫೆ.15: ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಉದ್ಯೋಗದ ಆಮಿಷವೊಡ್ಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪದಡಿ ಹಲವರನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಭುವನೇಶ್ವರದ ಕಾಳಿಪ್ರಸಾದ್ ರಾತ್(38), ಪುಣೆಯ ವಾಗೋಲಿಯ ಅಭಿಜಿತ್ ಅರುಣ್ ನಟಕೆ(34) ಹಾಗೂ ಒಡಿಶಾದ ಭಗಸಿಂಗ್ ಪುರದ ಅಭಿಷೇಕ್ ಮೊಹಂತಿ(21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಆರೋಪಿಗಳು ಒಎಲ್ಎಕ್ಸ್, ನೌಕರಿ ಡಾಟ್ಕಾಂ ಸೇರಿದಂತೆ ಆನ್ಲೈನ್ ಜಾಲತಾಣಗಳ ಮೂಲಕ ಐಬಿಎಂ, ಕಾಗ್ನಿಜೆಂಟ್ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಸಂಪರ್ಕಿಸಿ ಎಂದು ಜಾಹೀರಾತು ನೀಡುತ್ತಿದ್ದರು. ನಂತರ ಸಂಪರ್ಕಿಸಿದ ಉದ್ಯೋಗಾಕಾಂಕ್ಷಿಗಳ ಮೊಬೈಲ್ ಸಂಖ್ಯೆ ಪಡೆದು ಆನ್ಲೈನ್ನಲ್ಲಿ ನಕಲಿ ಸಂದರ್ಶನ ನಡೆಸುತ್ತಿದ್ದ ಆರೋಪಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ಅಭ್ಯರ್ಥಿಗಳಿಂದ ಸಾವಿರಾರು ರೂಪಾಯಿ ಹಣ ಪಡೆಯುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಳಿಕ ಐಬಿಎಂ ಕಂಪೆನಿಯ ಹೆಸರಿನ ನಕಲಿ ಗುರುತು, ನೇಮಕಾತಿ ಆದೇಶ ಪತ್ರ ಸೃಷ್ಟಿಸಿ, ಅಭ್ಯರ್ಥಿಗಳಿಗೆ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಐಬಿಎಂ ಕಂಪೆನಿಯ ಎಚ್.ಆರ್(ಮಾನವ ಸಂಪನ್ಮೂಲ ಅಧಿಕಾರಿ) ಪ್ರದೀಪ್ನನ್ನು ಸಂಪರ್ಕಿಸಿ ಎಂದು ಸುಳ್ಳು ಹೇಳಿ ಕಳುಹಿಸುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇದುವರೆಗೂ 40ಕ್ಕಿಂತ ಹೆಚ್ಚು ಮಂದಿಗೆ ಮೋಸ ಮಾಡಿರುವುದು ಪತ್ತೆಯಾಗಿದೆ. ಅಲ್ಲದೇ, ವಿವಿಧ ಬ್ಯಾಂಕ್ಗಳಲ್ಲಿ ಒಟ್ಟು 8 ಬ್ಯಾಂಕ್ ಅಕೌಂಟ್ಗಳನ್ನು ಹೊಂದಿರುವುದು ಗೊತ್ತಾಗಿದೆ ಎಂದು ಡಿಸಿಪಿ ತಿಳಿಸಿದರು.







