ಆಧುನಿಕ ತಂತ್ರಜ್ಞಾನದ ದುರುಪಯೋಗದಿಂದ ಮಕ್ಕಳನ್ನು ರಕ್ಷಿಸಿ: ಕೇಮಾರುಶ್ರೀ

ಕಾರ್ಕಳ: ಈಗಿನ ಆಧುನಿಕ ತಂತ್ರಜ್ಞಾನವನ್ನು ಮಕ್ಕಳು ದುರುಪಯೋಗಪಡಿಸದಂತೆ ಪೋಷಕರು ಗಮನಹರಿಸಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿಸಿ, ಒಳ್ಳೆಯ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಬೇಕು ಎಂದು ಕೇಮಾರು ಸಾಂದೀಪನಿ ಸಾದನಾಶ್ರಮದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.
ಅವರು ಸಚ್ಚೇರಿಪೇಟೆಯ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಸೇವಾ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಚ್ಚೇರಿಪೇಟೆ ಘಟಕದ ಸಂಯೋಜನೆಯಲ್ಲಿ ನಡೆದ ಹದಿನೆಂಟನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಯುಗಪುರುಷದ ಸಂಪಾದಕರಾದ ಕೊಡತ್ತೂರು ಭುವನಾಭಿರಾಮ ಉಡುಪ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಡ್ಕೂರು ದೇವಳದ ಅರ್ಚಕ ಹರಿಪ್ರಸಾದ್ ಭಟ್, ಉದ್ಯಮಿ ಬೋಜ ಸುವರ್ಣ ಸೂರತ್, ಪ್ರೈಮ್ ಟಿವಿ ನಿರ್ದೇಶಕ ರೂಪೇಶ್ ಕಲ್ಮಾಡಿ, ಮುಂಡ್ಕೂರು ದೊಡ್ಡಮನೆ ಭಾಸ್ಕರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಪೂಜಾರಿ, ಭಜರಂಗದಳ ಸಂಚಾಲಕ ವಿಶ್ವನಾಥ ಪೊಸ್ರಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರೀಶ ಸಚ್ಚೇರಿಪೇಟೆ ಸ್ವಾಗತಿಸಿದರು. ಶಿಕ್ಷಕ ಸುಧೀರ್ ನಾಯಕ್ ಮತ್ತು ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.
