ಸುರತ್ಕಲ್: ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಸಿಫ್ ಆಪತ್ಬಾಂಧವ ಮೇಲೆ ಹಲ್ಲೆ ಯತ್ನ

ಮಂಗಳೂರು, ಫೆ.16: ಸುರತ್ಕಲ್ ಎನ್.ಐ.ಟಿ.ಕೆ. ಬಳಿಯಿರುವ ಟೋಲ್ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ಮೇಲೆ ಮಂಗಳಮುಖಿಯರಿಂದ ಹಲ್ಲೆ ನಡೆದಿರುವುದು ವರದಿಯಾಗಿದೆ.
ಕಳೆದ ರಾತ್ರಿ 12:30ರ ಸುಮಾರಿಗೆ ಮೊದಲಿಗೆ ಇಬ್ಬರು ಮಂಗಳಮುಖಿಯರು ಆಗಮಿಸಿ ಹಲ್ಲೆಗೆ ಯತ್ನಿಸಿದ್ದರು. ಬಳಿಕ ಸುಮಾರು 10 ಮಂದಿಯಷ್ಟಿದ್ದ ಮಂಗಳಮುಖಿಯರ ತಂಡ ಆಗಮಿಸಿ ಧರಣಿನಿರತರನ್ನು ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದೆ ಎಂದು ಆರೋಪಿಸಲಾಗಿದೆ.
ಕೂಡಲೇ ಆಸಿಫ್ ಆಪತ್ಬಾಂಧವ ಮಂಗಳಮುಖಿಯರ ದುರ್ವರ್ತನೆಯನ್ನು ಫೇಸ್ ಬುಕ್ ಲೈವ್ ವೀಡಿಯೋ ಮಾಡಿದ್ದಾರೆ. ತಂಡದಲ್ಲಿದ್ದ ಹಲವು ಮಂಗಳಮುಖಿಯರು ಬಟ್ಟೆ ಎತ್ತಿ ನರ್ತಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರತಿಭಟನಾ ವೇದಿಕೆಯನ್ನು ಉರುಳಿಸುತ್ತೇವೆ, ನಿಮ್ಮನ್ನು ಇಲ್ಲಿಂದ ಓಡಿಸುತ್ತೇವೆ, ಪೊಲೀಸ್ ಠಾಣೆಯಲ್ಲಿ ಕೂರುವಂತೆ ಮಾಡುತ್ತೇವೆ ಎಂದೆಲ್ಲ ಪೊಲೀಸರ ಸಮ್ಮುಖದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ತಮ್ಮ ಹೋರಾಟವನ್ನು ಹತ್ತಿಕ್ಕಲು ಮಂಗಳಮುಖಿಯರನ್ನು ಛೂ ಬಿಡಲಾಗಿದೆ ಎಂದು ಆಸಿಫ್ ಆಪತ್ಬಾಂಧವ ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.