ಉಡುಪಿ; ಹಿಜಾಬ್ ಹಾಕಿದವರಿಗೆ ತರಗತಿ ಪ್ರವೇಶ ನಿರಾಕರಣೆ: ಹಲವು ಮಂದಿ ಗೈರು
![ಉಡುಪಿ; ಹಿಜಾಬ್ ಹಾಕಿದವರಿಗೆ ತರಗತಿ ಪ್ರವೇಶ ನಿರಾಕರಣೆ: ಹಲವು ಮಂದಿ ಗೈರು ಉಡುಪಿ; ಹಿಜಾಬ್ ಹಾಕಿದವರಿಗೆ ತರಗತಿ ಪ್ರವೇಶ ನಿರಾಕರಣೆ: ಹಲವು ಮಂದಿ ಗೈರು](https://www.varthabharati.in/sites/default/files/images/articles/2022/02/16/325246-1645022154.jpg)
ಉಡುಪಿ, ಫೆ.16: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಏಳು ದಿನಗಳ ರಜೆಯ ಬಳಿಕ ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಬುಧವಾರ ಪುನಾರಂಭಗೊಂಡಿವೆ. ಈ ಮಧ್ಯೆ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸದೆ ಗೈರು ಹಾಜರಾಗಿದ್ದು, ಕೆಲವು ಕಡೆ ವಿದ್ಯಾರ್ಥಿನಿಯರು ವಾಪಾಸ್ಸು ಮನೆಗೆ ತೆರಳಿದರು.
ಹಿಜಾಬ್ ವಿವಾದದ ಕೇಂದ್ರ ಬಿಂದುವಾಗಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪುನಾರರಂಭಗೊಂಡಿದ್ದು, ಹೈಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ವಿದ್ಯಾರ್ಥಿನಿಯರು ಕೂಡ ಗೈರು ಹಾಜರಾಗಿದ್ದಾರೆ. ಹೈಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಕಾಲೇಜಿಗೆ ಬರುವುದಿಲ್ಲ ಎಂಬುದಾಗಿ ಇವರು ಈ ಹಿಂದೆಯೇ ಹೇಳಿದ್ದರು. ಉಳಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿ ತೆರಳಿದರು.
ತರಗತಿ ಪ್ರವೇಶ ನಿರಾಕರಣೆ
ಹಿಜಾಬ್ ಹಾಕಿದ ಕಾರಣಕ್ಕೆ ತರಗತಿ ಪ್ರವೇಶ ಕಲ್ಪಿಸದ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸುಮಾರು 15-20 ವಿದ್ಯಾರ್ಥಿನಿಯರು ಮನೆಗೆ ತೆರಳಿದರೆ, ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ 10 ಮಂದಿ ಹಿಜಾಬ್ ಹಾಕಲು ಅವಕಾಶ ನೀಡದಕ್ಕೆ ತರಗತಿಗೆ ಹೋಗದೆ ಮನೆಗೆ ಮರಳಿದ್ದರೆ, ಒಬ್ಬರು ವಿದ್ಯಾರ್ಥಿನಿ ಹಿಬಾಜ್ ತೆಗೆದಿಟ್ಟು ತರಗತಿಗೆ ತೆರಳಿದ್ದಾರೆ. ಅದೇ ರೀತಿ ನಗರದ ಕೆಲವು ಕಾಲೇಜುಗಳಲ್ಲಿಯೂ ಗೊಂದಲ ವಾತಾವರಣಗಳು ಉಂಟಾಗಿ ಹಿಜಾಬ್ ಹಾಕಿದ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 16 ವಿದ್ಯಾರ್ಥಿನಿಯರ ಪೈಕಿ 10 ಮಂದಿ ಹಿಜಾಬ್ ಹಾಕಲು ಅವಕಾಶ ನೀಡದ ಕಾರಣ್ಕೆ ವಾಪಾಸ್ಸು ಮನೆಗೆ ತೆರಳಿದ್ದಾರೆ. ಮೂವರು ಹಿಂದಿನಿಂದಲೂ ಹಿಜಾಬ್ ಹಾಕದೆಯೇ ತರಗತಿಗೆ ತೆರಳುತ್ತಿದ್ದರು. ಮತ್ತೆ ಮೂವರು ಇಂದು ಹಿಜಾಬ್ ತೆಗೆದಿಟ್ಟು ತರಗತಿ ಹೋದರು ಎಂದು ತಿಳಿದುಬಂದಿದೆ.
ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರು ಇಂದು ಗೈರು ಹಾಜರಾಗಿದ್ದರು. ಉಳಿದಂತೆ ಹಿಜಾಬ್ ಹಾಕಿ ಕಾಲೇಜಿಗೆ ಆಗಮಿಸಿದ ನಾಲ್ಕು ಮಂದಿ ವಿದ್ಯಾರ್ಥಿನಿಯರ ಮನವೊಲಿಕೆಗೆ ಪ್ರಯತ್ನಿಸಲಾಯಿತು. ಆದರೆ ಹಿಜಾಬ್ ಹಾಕದೆ ತರಗತಿ ಹೋಗಲು ಒಪ್ಪದ ಇವರು ವಾಪಾಸ್ಸು ಮನೆಗೆ ತೆರಳಿದರು.
ಕುಂದಾಪುರದಲ್ಲಿ ಹಲವರು ಗೈರು
ಆರಂಭದಲ್ಲಿ ಕೇಸರಿ ಶಾಲು ವಿವಾದ ಸೃಷ್ಠಿಸಿದ್ದ ಕುಂದಾಪುರ ಸರಕಾರಿ ಜ್ಯೂನಿ ಯರ್ ಕಾಲೇಜಿನ ಹಿಜಾಬ್ ಧರಿಸುವ 26 ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾಲೇಜಿಗೆ ಆಗಮಿಸದೆ ಗೈರು ಹಾಜರಾಗಿದ್ದರು. ಇಲ್ಲಿನ ವಿಜ್ಞಾನ ವಿಭಾಗದ ಓರ್ವ ವಿದ್ಯಾರ್ಥಿನಿ ಎಂದಿನಂತೆ ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಿದ್ದಾರೆ.
ಇದೇ ಕಾಲೇಜಿನ ಪ್ರೌಢಶಾಲಾ ವಿಭಾಗದ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ತೆರಳಿದರು. ಅದೇ ರೀತಿ ತಾಲೂಕಿನ ನಾವುಂದ ಸರಕಾರಿ ಕಾಲೇಜಿಗೆ ಇಂದು ರಜೆ ನೀಡಲಾಗಿದೆ. ಉಳಿದಂತೆ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ಬಹುತೇಕ ಮಂದಿ ಗೈರು ಹಾಜಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿಎಸ್.ಟಿ.ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ವೃತ್ತ ನಿರೀಕ್ಷಕ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲಾ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಉಡುಪಿ ಎಂಜಿಎಂ ಕಾಲೇಜಿಗೆ ರಜೆ
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಬಳಿಕ ರಜೆ ನೀಡಲಾಗಿದ್ದ ಉಡುಪಿ ಎಂಜಿಎಂ ಕಾಲೇಜಿಗೆ ಇಂದು ರಜೆ ನೀಡಲಾಗಿದೆ.
ಪದವಿ ಕಾಲೇಜಿಗೆ ಫೆ.16 ಮತ್ತು 17ರಂದು ರಿವಿಜನಲ್ ರಜೆ ನೀಡಲಾಗಿದೆ. ಫೆ.14ರಿಂದ ನಡೆಯಬೇಕಾಗಿದ್ದ ಪರೀಕ್ಷೆಗಳು ಫೆ.18ರಿಂದ ಆರಂಭಗೊಳ್ಳಲಿವೆ. ಪದವಿ ಪೂರ್ವ ಕಾಲೇಜಿಗೆ ಇಂದು ರಜೆ ನೀಡಲಾಗಿದ್ದು, 17ರಂದು ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
''ಉಡುಪಿ ಜಿಲ್ಲೆಯ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಉಡುಪಿ ಎಂಜಿಎಂ ಕಾಲೇಜು ಹೊರತು ಪಡಿಸಿದರೆ ಉಳಿದ ಎಲ್ಲ ಕಾಲೇಜು ಗಳು ಇಂದು ಪುನಾರಂಭಗೊಂಡಿದ್ದವು. ಈ ಎರಡು ಕಾಲೇಜುಗಳು ನಾಳೆ ಆರಂಭವಾಗಲಿದೆ. ಎಲ್ಲೂ ಯಾವುದೇ ಗೊಂದಲ, ಸಮಸ್ಯೆಗಳು ಉಂಟಾಗಿಲ್ಲ. ಹಿಜಾಬ್ ಕಾರಣಕ್ಕೆ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಗೈರು ಹಾಜರಾಗಿದ್ದರು ಎಂಬ ಮಾಹಿತಿ ಇಲ್ಲ''.
-ಮಾರುತಿ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ
''ಹಿಜಾಬ್ ಸಂಬಂಧ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಶಾಲಾ ಕಾಲೇಜು ಗಳಲ್ಲಿ ಸಮಸ್ಯೆಗಳು ಆಗಿಲ್ಲ. ಎಲ್ಲ ಕಡೆ ಶಾಂತಿಯುತವಾಗಿ ಮಕ್ಕಳು ತರಗತಿಗೆ ಆಗಮಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಯನ್ನು ಮುಂದುವರೆಸಲಾಗುವುದು. ಉಡುಪಿ ಮಲ್ಪೆ, ಕಾಪು, ಕುಂದಾಪುರ, ಕೋಟೇಶ್ವರ ಕಾಲೇಜಿಗಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದೇನೆ''.
-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ
''ಹೈಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಆಗಮಿಸದೆ ಗೈರು ಹಾಜರಾಗಿದ್ದರು. ಉಳಿದ ವಿದ್ಯಾರ್ಥಿನಿಯರು ಕ್ಯಾಂಪಸ್ ಒಳಗಡೆ ಬುರ್ಕಾ, ಹಿಜಾಬ್ ಹಾಕಿಕೊಂಡು ಬಂದು, ತರಗತಿ ಒಳಗೆ ತೆಗೆದರು. ನಮ್ಮಲ್ಲಿ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡ ಲಾಗಿದೆ. ಯಾವುದೇ ಸಮಸ್ಯೆ ಆಗಿಲ್ಲ''.
-ರುದ್ರೇಗೌಡ, ಪ್ರಾಂಶುಪಾಲರು, ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ.