ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಫೆ. 16: ‘ರಾಷ್ಟ್ರ ಧ್ವಜಕ್ಕೆ ಅಪಚಾರ ಎಸಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಂಡಿಸಿ ಮಾತನಾಡಿದ ಅವರು, ‘ಈಶ್ವರಪ್ಪನವರು ಫೆ.9ರಂದು ರಾಷ್ಟ್ರಧ್ವಜದ ಬಗ್ಗೆ ನೀಡಿದ್ದು, ಮರುದಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 2006ರಿಂದಲೂ ಸಚಿವರಾಗಿರುವ ಅವರು ಅನುಭವಿಗಳು, ಹಿರಿಯರು. ಗೌರವದಿಂದ ಮಾತನಾಡುತ್ತಾರೆಂದು ಭಾವಿಸಿದ್ದೆ. ಆದರೆ, ಅವರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ' ಎಂದು ದೂರಿದರು.
‘ಸಂವಿಧಾನದ ಕಲಂ 51(1)ರಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅದರಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು. ಇಂಹತ ರಾಷ್ಟ್ರ ಧ್ವಜವನ್ನು ನೋಡಿದಾಗ ನಮಗೆಲ್ಲ ರೋಮಾಂಚನವಾಗುತ್ತೆ, ಹೋರಾಟದ ಕಿಚ್ಚು ಬರುತ್ತೆ, ಎದ್ದು ನಿಂತು ಗೌರವ ಕೊಡುತ್ತೇವೆ. ಇದು ನಮಗೆ ಸಂವಿಧಾನ ಕಲಿಸಿದೆ' ಎಂದು ಅವರು ತಿಳಿಸಿದರು.
‘ಸಚಿವ ಈಶ್ವರಪ್ಪ ‘ದಿಲ್ಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ' ಎಂದು ಹೇಳಿಕೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ ಸದಾ ಕಾಲ ರಾಷ್ಟ್ರಧ್ವಜ ಮಾತ್ರ ಹಾರಾಡುತ್ತದೆ, ಅದು ದೇಶದ ಗೌರವದ ಸಂಕೇತ. ಅದರ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವುದು ಸಂವಿಧಾನ ಮತ್ತು ದೇಶಕ್ಕೆ ಮಾಡಿದ ಅಪಮಾನ. ಈ ಬಗ್ಗೆ ಕಾನೂನುಗಳಿವೆ, ರಾಷ್ಟ್ರ ಗೌರವದ ಸಂಕೇತಗಳಿಗೆ ಅಗೌರವ ನಿರ್ಬಂಧಿಸುವ ಕಾಯ್ದೆ 1971ರ ಸೆಕ್ಷನ್ ಎರಡರ ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಯಾವುದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಸುಟ್ಟರೆ, ಹಾಳು ಮಾಡಿದರೆ, ಅಗೌರವ ತೋರಿದರೆ ಅಥವಾ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತ ಹೇಳಿಕೆ ಅಥವಾ ಬರಹ ಅಥವಾ ಕೃತ್ಯ ಎಸಗಿದರೆ ಅಂಥವರಿಗೆ 3ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅಥವಾ ದಂಡ ವಿಧಿಸಬಹುದು. ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಲಾಂಛನಕ್ಕೆ ತೋರುವ ಅಗೌರವವು ದೇಶದ್ರೋಹ ಪ್ರಕರಣದಡಿ ಬರಲಿದೆ' ಎಂದು ಐಪಿಸಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
‘ಈಶ್ವರಪ್ಪ ದೇಶದ್ರೋಹದ ಹೇಳಿಕೆ ನೀಡಿ ವಾರ ಕಳೆದರೂ ಅವರ ಮೇಲೆ ಸರಕಾರ ಯಾವ ರೀತಿಯ ಕ್ರಮ ಕೈಗೊಂಡಿಲ್ಲ. ನನ್ನ ಪ್ರಕಾರ ಸಿಎಂ ಅವರನ್ನು ಸ್ವಯಂ ಪ್ರೇರಿತರಾಗಿ ಸಂಪುಟದಿಂದ ವಜಾ ಮಾಡಬೇಕಿತ್ತು, ಆದರೆ ಮಾಡಿಲ್ಲ. ದಿಲ್ಲಿಯಲ್ಲಿ ನಡೆಯುತ್ತಿದ್ದ ರೈತ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರಧ್ವಜದ ಕೆಳಗೆ ರೈತ ಧ್ವಜ ಹಾರಿಸಿದ ಕಾರಣಕ್ಕೆ ಅಲ್ಲಿದ್ದ ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಅದೇ ಕೆಲಸವನ್ನು ಈಶ್ವರಪ್ಪ ಅವರ ಮೇಲೂ ಮಾಡಬೇಕಲ್ಲವೇ? ಒಬ್ಬ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಲ್ಲ ಎಂದರೆ ನಿಜಕ್ಕೂ ನಾಚಿಕೆಗೇಡಿನ ವಿಚಾರ, ಇಂತಹವರಿಗೆ ಒಂದು ಕ್ಷಣವೂ ಆ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘22ರ ಜುಲೈ 1947ರಲ್ಲಿ ಸ್ವಾತಂತ್ರ್ಯ ಬರುವ ಮೊದಲೇ ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಗಿತ್ತು. ಈ ಧ್ವಜಕ್ಕೆ ದೊಡ್ಡ ಇತಿಹಾಸವೇ ಇದೆ. ಇದಕ್ಕೂ ಮೊದಲು ಕೇಸರಿ, ಬಿಳಿ, ಹಸಿರು ಮಧ್ಯದಲ್ಲಿ ಚರಕ ಹೊಂದಿರುವ ಧ್ವಜ ರಾಷ್ಟ್ರ ಧ್ವಜವಿತ್ತು. ಆ ನಂತರ ತ್ರಿವರ್ಣ ಧ್ವಜದ ಮಧ್ಯಭಾಗದಲ್ಲಿ ಅಶೋಕ ಚಕ್ರ ಹೊಂದಿರುವ ಧ್ವಜವನ್ನು ರಾಷ್ಟ್ರ ಧ್ವಜವಾಗಿ ಅಂಗೀಕಾರ ಮಾಡಲಾಯಿತು' ಎಂದು ಸಿದ್ದರಾಮಯ್ಯ, ರಾಷ್ಟ್ರಧ್ವಜದ ಮಹತ್ವವನ್ನು ಸದನಕ್ಕೆ ತಿಳಿಸಿದರು.







