ಮಣಿಪಾಲದಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ
ಮಣಿಪಾಲ, ಫೆ.16: ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಶಂಕರ್ ಮಹಾದೇವನ್ ಅಕಾಡೆಮಿಯ ‘ನಿರ್ವಾಣ’ದ ಸಹಯೋಗದಲ್ಲಿ ಆಚರಿಸಲಾಯಿತು.
ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳು, ಅವರ ಆರೈಕೆ ಮಾಡುವವರು ಮತ್ತು ಕ್ಯಾನ್ಸರ್ನಿಂದ ಬದುಕುಳಿದವ ರಿಗೆ ಬೆಂಬಲ ವ್ಯಕ್ತಪಡಿಸಲು ಜಾಗತಿಕವಾಗಿ ಪ್ರತಿ ವರ್ಷ ಫೆ.15ರಂದು ಅಂತಾ ರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.
ಈ ಬಾರಿ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ರಸಪ್ರಶ್ನೆ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ‘ನಿರ್ವಾಣ’ ಎಂಬುದು ಶಂಕರ್ ಮಹಾದೇವನ್ ಅಕಾಡೆಮಿ ಟ್ರಸ್ಟ್ನ ಉಪಕ್ರಮವಾಗಿದ್ದು, ಕ್ಯಾನ್ಸರ್ ರೋಗಿ ಗಳಂತೆ ತಮ್ಮ ಜೀವನದಲ್ಲಿ ಪ್ರತಿದಿನ ತೀವ್ರ ಸವಾಲುಗಳನ್ನು ಎದುರಿಸುತ್ತಿರುವ ಜನರಿಗೆ ಸಂಗೀತದ ಮೂಲಕ ಸಂತೋಷವನ್ನು ಹಂಚುವ ಪ್ರಯತ್ನ ಮಾಡುತ್ತಿದೆ.
ಮಣಿಪಾಲದಲ್ಲಿ ಮೋಕ್ಷಾ ಮತ್ತು ಆಕಾಂಕ್ಷಾ ಎಂಬ ಇಬ್ಬರು ಮಕ್ಕಳು ಅಕಾಡೆಮಿ ಕಲಾವಿದೆ ಸುಕೃತಿ ಅಜಯ್ ಕುಮಾರ್ ಅವರೊಂದಿಗೆ ಪ್ರದರ್ಶನ ನೀಡಿದರು. ಮಕ್ಕಳ ಮತ್ತು ಆರೈಕೆ ಮಾಡುವವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಮತ್ತು ಗುಣಪಡಿಸಲು ನಿಯತಕಾಲಿಕವಾಗಿ ಇಂತಹ ಮನರಂಜನಾ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ. ತಿಳಿಸಿದರು.
ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ ತಂಡವನ್ನು ಕೆಎಂಸಿಯ ಡೀನ್ ಡಾ.ಶರತ್ ಕುಮಾರ್ ರಾವ್ ಅಭಿನಂದಿಸಿದರು. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್ ಸಲಿನ್ಸ್ ಉಪಸ್ಥಿತರಿದ್ದರು. ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.