ಹೈಕೋರ್ಟ್ ಮಧ್ಯಂತರ ಆದೇಶದ ಗೊಂದಲ; ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಪ್ರಾಂಶುಪಾಲರು !
![ಹೈಕೋರ್ಟ್ ಮಧ್ಯಂತರ ಆದೇಶದ ಗೊಂದಲ; ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಪ್ರಾಂಶುಪಾಲರು ! ಹೈಕೋರ್ಟ್ ಮಧ್ಯಂತರ ಆದೇಶದ ಗೊಂದಲ; ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಪ್ರಾಂಶುಪಾಲರು !](https://www.varthabharati.in/sites/default/files/images/articles/2022/02/16/325283-1645030669.jpg)
ಉಡುಪಿ, ಫೆ.16: ಹಿಜಾಬ್ ಧರಿಸುವ ಕುರಿತ ಹೈಕೋರ್ಟ್ ಮಧ್ಯಂತರ ಆದೇಶದ ಗೊಂದಲದಿಂದಾಗಿ ಅಜ್ಜರಕಾಡು ಜಿ.ಶಂಕರ್ ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಘಟನೆ ನಡೆಯಿತು.
ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರಿಗೆ ಹೇಳಿಕೆ ನೀಡಿದ ಪ್ರಾಂಶುಪಾಲರು, ನಮ್ಮಲ್ಲಿ ಒಟ್ಟು 2,326 ವಿದ್ಯಾರ್ಥಿನಿಯರ ಪೈಕಿ 196 ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ. ಇಂದು ಬೆಳಗ್ಗೆ ಹಿಜಾಬ್ ಹಾಕಿ ಕೊಂಡು ತರಗತಿಗೆ ಬಂದ ಅವರಿಗೆ ಹೈಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿದ್ದೇವೆ. ಅದರಂತೆ ಬೆರಳಿಕೆಯ ಮಂದಿ ಹಿಜಾಬ್ ಧರಿಸದೆ ತರಗತಿಗೆ ಬರಲ್ಲ ಎಂದು ಹೇಳಿ ವಾಪಾಸ್ಸು ಮನೆಗೆ ತೆರಳಿದ್ದಾರೆ ಎಂದರು. ಉಳಿದಂತೆ ಬಹುತೇಕ ಮಂದಿ ಹಿಜಾಬ್ ತೆಗೆದುಕೊಂಡು ತರಗತಿಗೆ ಆಗಮಿಸಿದ್ದಾರೆ. ನಾವು ಫೋರ್ಸ್ ಮಾಡಿ ಯಾರನ್ನು ತೆಗೆಸಿಲ್ಲ. ಸ್ವಯಂ ಪ್ರೇರಿತರಾಗಿ ಅವರೇ ಒಪ್ಪಿ ತೆಗೆದಿದ್ದರೆ ಮತ್ತು ಮನೆಗೆ ಹೋಗಿದ್ದಾರೆ. ಈ ಮೂಲಕ ನಮ್ಮ ಕಾಲೇಜಿನಲ್ಲಿ ಹೈಕೋರ್ಟ್ ಆದೇಶವನ್ನು ಸಮಪರ್ಕವಾಗಿ ಅನುಷ್ಠಾನ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮಲ್ಲಿ 2009ರಿಂದ ಸಮವಸ್ತ್ರ ವ್ಯವಸ್ಥೆ ಇದೆ. ಅಲ್ಲಿಂದ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಈಗ ಹೈಕೋರ್ಟ್ ಆದೇಶದಿಂದ ಹಾಕಲು ಅವಕಾಶ ಇಲ್ಲ ಎಂದರು. ಇದಕ್ಕೆ ಮಾಧ್ಯಮದವರು, ಕಾಲೇಜು ಅಭಿವೃದ್ಧಿ ಸಮಿತಿ ತೆಗೆದುಕೊಂಡ ತೀರ್ಮಾನವನ್ನು ನೀವು ಬದಲಾಯಿಸಿ, ವಿದ್ಯಾರ್ಥಿನಿಯರನ್ನು ತರಗತಿಗೆ ತೆಗೆದುಕೊಳ್ಳದೆ ಯಾಕೆ ವಾಪಾಸ್ಸು ಕಳುಹಿಸಿದ್ದೀರಿ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದರು. ಇದಕ್ಕೆ ಅವರು ಹೈಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಅದಕ್ಕೆ ಮಾಧ್ಯಮದವರು, ನೀವು ಹೈಕೋರ್ಟ್ ಆದೇಶ ಸರಿಯಾಗಿ ಓದಿ. ಅದರಲ್ಲಿ ಈ ಹಿಂದೆ ಅಭಿವೃದ್ಧಿ ಸಮಿತಿ ತೆಗೆದುಕೊಂಡ ನಿರ್ಧಾರದಂತೆ ಹಿಜಾಬ್ ಹಾಕಲು ಅವಕಾಶ ಇದ್ದರೆ, ಅದನ್ನು ಮುಂದುವರಿಸಬಹುದಾಗಿದೆ. ನೀವು ಯಾಕೆ ಮಕ್ಕಳನ್ನು ಮನೆಗೆ ಕಳುಹಿಸಿದ್ದೀರಿ ಎಂದು ಪ್ರಶ್ನಿಸಿದರು.
ನಾವು ಹೈಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕಾಗಿದೆ ಎಂದು ಅದೇ ಉತ್ತರವನ್ನು ಹೇಳಿದರು.
ಮಕ್ಕಳು ಅಂತಿಮ ಆದೇಶ ಬರುವವರೆಗೆ ನಾವು ಕಾಯುತ್ತೇವೆ. ಅಲ್ಲಿಯವರೆಗೆ ನಮಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಕೆಲವರು ಹಿಜಾಬ್ ತೆಗೆದು ತರಗತಿಗೆ ಹೋಗಿದ್ದಾರೆ. ಅವರಿಗೆ ಆನ್ಲೈನ್ ತರಗತಿ ಮಾಡುವ ಬಗ್ಗೆ ಮುಂದೆ ಸಭೆ ಕರೆದು ನಿರ್ಧರಿಸುತ್ತೇವೆ ಎಂದು ಪ್ರಾಂಶುಪಾಲರು ಹೇಳಿದರು. ಇದಕ್ಕೆ ಮಾಧ್ಯಮದವರು, ಅವರು ತೆಗೆದದಲ್ಲ ನೀವು ತೆಗೆಸಿದ್ದು. ನಿಮ್ಮಲ್ಲಿದ್ದ ಡ್ರೆಸ್ ಕೋಡ್ನ್ನು ನೀವು ಯಾಕೆ ಬದಲಾಯಿಸಿದ್ದೀರಿ ಎಂದು ಮತ್ತೆ ಮತ್ತೆ ಪ್ರಶ್ನಿಸಿದರು.
ಹೈಕೋರ್ಟ್ ಆದೇಶವು ಅಭಿವೃದ್ಧಿ ಸಮಿತಿ ಈ ಹಿಂದೆ ಪಾಲಿಸಿಕೊಂಡು ಬಂದ ನಿಯಮವನ್ನು ಮುಂದುವರಿಸಬಹುದು ಹೇಳಿದೆ ಎಂದು ಮಾಧ್ಯಮದವರು ಮನವರಿಕೆ ಮಾಡಿದರು. ಆದರೆ ಪ್ರಾಂಶುಪಾಲರಲ್ಲಿ ಇದಕ್ಕೆ ಸರಿಯಾದ ಉತ್ತರ ಇರಲಿಲ್ಲ. ಹೀಗೆ ಗೊಂದಲ ಮುಂದುವರೆದಿತ್ತು...
''ನಮ್ಮ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ನಮ್ಮ ಸ್ವರಕ್ಷಣೆಗಾಗಿ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಹೆಮ್ಮೆ. ನಮಗೆ ಕಾಲೇಜಿನವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ಹೈಕೋರ್ಟ್ ಆದೇಶವನ್ನು ಅವರು ಪಾಲನೆ ಮಾಡಬೇಕಾಗಿದೆ. ನಮಗೆ ಆನ್ಲೈನ್ ತರಗತಿ ಮಾಡುವುದಾಗಿ ಹೇಳಿದ್ದಾರೆ. ಸಹಪಾಠಿಗಳೆಲ್ಲರು ನಮಗೆ ಬೆಂಬಲ ನೀಡಿದ್ದಾರೆ. ಮನೆಗೆ ಹೋಗುವಂತೆ ಯಾರು ಕೂಡ ನಮ್ಮನ್ನು ಬಲವಂತ ಮಾಡಿಲ್ಲ. ಕೋರ್ಟ್ ಅಂತಿಮ ಆದೇಶ ಬರುವವರೆಗೆ ನಾವು ಕಾಯುತ್ತೇವೆ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದುಕೊಂಡು ಹೋಗಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರವಾಗಿದೆ''
- ಅಂತಿಮ ಬಿಕಾಂ ವಿದ್ಯಾರ್ಥಿನಿಯರು.
''ನಮ್ಮ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರು ಮೊದಲಿನಿಂದಲೂ ತರಗತಿಗೆ ಹಿಜಾಬ್ ಹಾಕಿಕೊಂಡು ಬರುತ್ತಿದ್ದರು. ಇದರಿಂದ ನಮಗೆ ಏನು ಸಮಸ್ಯೆ ಇಲ್ಲ. ನಮ್ಮ ತರಗತಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಾರೆ. ನಾವೆಲ್ಲ ಒಳ್ಳೆಯ ಗೆಳೆತಿಯರಾಗಿದ್ದೇವೆ''
-ವಿದ್ಯಾರ್ಥಿನಿ, ಸರಕಾರಿ ಮಹಿಳಾ ಪದವಿ ಕಾಲೇಜು, ಅಜ್ಜರಕಾಡು,
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಖಂಡನೆ
ಉಡುಪಿಯ ಸರಕಾರಿ ಜಿ ಶಂಕರ್ ಮಹಿಳಾ ಪ್ರಧಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕಾದ ಹಿಜಾಬನ್ನು ನ್ಯಾಯಾಲಯದ ಮದ್ಯಂತರ ಆದೇಶವನ್ಮು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯಲು ಒತ್ತಾಯಿಸಿ, ನಿರಾಕರಿಸಿದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.