ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ
ಉಡುಪಿ, ಫೆ.17: ನಾಗರಿಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು, ಜನವರಿ 25ರಿಂದ ಮಾರ್ಚ್ 15ರವರೆಗೆ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ‘ನನ್ನ ಮತ ನನ್ನ ಭವಿಷ್ಯ, ಒಂದು ಮತದ ಶಕ್ತಿ’ ವಿಷಯದ ಕುರಿತು ರಸಪ್ರಶ್ನೆ, ವೀಡಿಯೋ ತಯಾರಿಕೆ, ಗಾಯನ, ಭಿತ್ತಿಚಿತ್ರ ವಿನ್ಯಾಸ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಹವ್ಯಾಸಿಗಳು, ವೃತ್ತಿಪರರು, ಸಾಂಸ್ಥಿಕ ಸಂಸ್ಥೆಗಳು ಎಂಬ ವರ್ಗ ಗಳಿದ್ದು, ಭಾಗವಹಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಇ-ಪ್ರಮಾಣ ಪತ್ರ ಮತ್ತು ಇ.ಸಿ.ಐ ಮರ್ಚಂಡೈಸ್ ಹಾಗೂ ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ಸ್ಪರ್ಧೆಯ ನಮೂದುಗಳನ್ನು voter-contest@eci.gov.in- ನಲ್ಲಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story