ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಲೋಪಗಳ ಪರಿಹಾರಕ್ಕೆ ಕಾನೂನು ಅಗತ್ಯ: ನ್ಯಾ.ಅಬ್ದುಲ್ ನಝೀರ್

ಉಡುಪಿ, ಫೆ.19: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೋರ್ಟ್ಗಳಲ್ಲಿರುವ ಕೇಸ್ಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕೆಲವೊಂದು ಮೂಲಭೂತ ಲೋಪದೋಷಗಳಿಗೆ ಪರಿಹಾರ ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾನೂನು ತರಬೇಕು ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡದ ಮೂರನೆ ಮಹಡಿ, ನೂತನ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಫ್ ಡೆಸ್ಕ್ ಮತ್ತು ವಿ.ಸಿ.ಕ್ಯಾಬಿನ್ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನ್ಯಾಯಾಲಯಗಳಲ್ಲಿರುವ ಬಾಕಿ ಪ್ರಕರಣಗಳು ಇತ್ಯರ್ಥ ಆಗುತ್ತಿಲ್ಲ. ದಾವೆ ಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಸರಕಾರ ಕೋರ್ಟ್, ರಸ್ತೆ, ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ ದಾವೆಗಳು ಇದ್ದರೆ ಸಮಾಜದಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಇದು ಒಂದು ರೀತಿಯ ಕ್ಯಾನ್ಸರ್. ಈ ಕ್ಯಾನ್ಸರ್ ಇಟ್ಟು ಕೊಂಡು ಇಷ್ಟೆಲ್ಲ ಸೌಲಭ್ಯಗಳನ್ನು ನೀಡಿ ಏನು ಪ್ರಯೋಜನ. ಆದುದರಿಂದ ಕೆಲವು ಅಗತ್ಯಗಳು ಬೇಕಾಗಿವೆ ಎಂದರು.
ಪ್ರತಿಯೊಂದು ಮೇಲ್ಮನವಿ ಹಾಕಿದರೆ ಕೇಸುಗಳನ್ನು ಶೀಘ್ರ ತೀರ್ಮಾನ ಮಾಡಲು ಆಗುವುದಿಲ್ಲ. ಆದುದರಿಂದ ಪ್ರಸ್ತುತ ವ್ಯವಸ್ಥೆಯ ಪ್ರಕಾರ ಎಲ್ಲರೂ ಸಹಕರಿಸಿ ಮೇಲ್ಮನವಿ ಕಡಿಮೆ ಹಾಕಬೇಕು. ಹೆಚ್ಚು ಹೆಚ್ಚು ಪೋಕ್ಸೊ ಕೋರ್ಟ್ ಸ್ಥಾಪನೆಯಾದರೆ ಸಂತೋಷ ಪಡಬೇಕಾಗಿಲ್ಲ. ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಎಲ್ಲೋ ಒಂದು ಕಡೆ ಹಾಗೂ ನಮ್ಮ ಯೋಚನೆಯಲ್ಲಿ ತಪ್ಪು ಆಗುತ್ತಿದೆ. ಎಲ್ಲರೂ ಸಹಕರಿಸಿ ಕಡಿಮೆ ಖರ್ಚಿನಲ್ಲಿ ಹಾಗೂ ತ್ವರಿತವಾಗಿ ನ್ಯಾಯ ಕೊಡುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಸಮಾಜದ ಸ್ವಾಸ್ಥವನ್ನು ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ಗಳ ಶೇಕಡವಾರು ಪ್ರಮಾಣದಿಂದ ಅಳೆಯಬಹುದು. ಕ್ರಿಮಿನಲ್ ಕೇಸ್ಗಳು ಹೆಚ್ಚಿದ್ದರೆ ಜನ ತಾವೇ ಪರಸ್ಪರ ಅಪರಾಧಗಳನ್ನು ಎಸಗುತ್ತಿದ್ದಾರೆ ಎಂಬುದು ಅರ್ಥ. ಹಾಗೆ ಇದ್ದರೆ ಸಮಾಜ ಸ್ವಾಸ್ಥ ಸರಿ ಇಲ್ಲ ಎಂಬುದಾಗುತ್ತದೆ. ಅದೇ ಸಿವಿಲ್ ಕೇಸ್ ಜಾಸ್ತಿ ಇದ್ದರೆ ಜನ ಕಾನೂನು ಪಾಲನೆ ಮಾಡಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಎಂಬುದು ಅರ್ಥ ಎಂದು ಅವರು ತಿಳಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಉಡುಪಿಯ ನ್ಯಾಯಾಲಯದ ಈ ಮೂರನೆ ಮಹಡಿಯ ಕಟ್ಟಡವನ್ನು 6.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಾಕಿ ಇರುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು. ಕಾರ್ಕಳದಲ್ಲಿ 15ಕೋಟಿ ರೂ. ವೆಟ್ಚದಲ್ಲಿ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ ನಾಯ್ಕಾ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜು ಬಿ.ಟಿ. ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಸ್ವಾಗತಿಸಿ ದರು. ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.
ಬೇಡಿಕೆ ಬಗ್ಗೆ ಗಮನ ಸೆಳೆದ ನ್ಯಾ.ಅಬ್ದುಲ್ ನಝೀರ್!
ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಕೋಟ್ಯಂತರ ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಆದರೆ ಜಿಲ್ಲಾ ಕೇಂದ್ರದಲ್ಲಿರುವ ಇಲ್ಲಿನ ವಕೀಲರ ಸಂಘಕ್ಕೆ ಕಟ್ಟಡವೇ ಇಲ್ಲ. ಇದೇ ಸಮಸ್ಯೆ ಮಂಗಳೂರಿನಲ್ಲೂ ಇದೆ ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಸಚಿವ ಸಿ.ಸಿ.ಪಾಟೀಲ್ ಗಮನಕ್ಕೆ ತಂದರು.
ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ರಾಜ್ಯ ಸರಕಾರ ಕಲ್ಪಿಸಿದೆ. ಈ ಮೂಲಕ ಕರ್ನಾಟಕವೂ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಸೌಲಭ್ಯದಲ್ಲಿ ಇಡೀ ದೇಶದಲ್ಲಿ ಮುಂಚೂಣಿ ಯಲ್ಲಿದೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಲವೇ ತಿಂಗಳಲ್ಲಿ ವಕೀಲರ ಸಂಘಕ್ಕೆ ಕಟ್ಟಡ ಮಂಜೂರು ಮಾಡಲಾಗುವುದು ಎಂದರು.
ರಾಜ್ಯದಲ್ಲಿ 1615 ಕೋಟಿ ವೆಚ್ಚದ ಕಾಮಗಾರಿ
2013-14ರಲ್ಲಿ ನ್ಯಾಯಾಲಯಗಳ ಕಟ್ಟಡ, ನ್ಯಾಯಾಧೀಶರ ವಸತಿ ಗೃಹ, ವಕೀಲರ ಸಂಘದ ಕಟ್ಟಡಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಕ್ಯೇತ ಲೆಕ್ಕ ಶಿರ್ಷಿಕೆಯನ್ನು ಸೃಜಿಸಲಾಗಿದೆ. 2013-14ರಿಂದ 2020-21ರವರೆಗೆ ರಾಜ್ಯ ದಲ್ಲಿ ಒಟ್ಟು 1615 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಸುಮಾರು 970 ಕಾಮಗಾರಿಗಳು ಪೂರ್ಣಗೊಂಡಿದ್ದು, 240 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಲು ಸಂಕ ಯೋಜನೆಯಡಿ 25ಕೋಟಿ ರೂ. ವೆಚ್ಚದಲ್ಲಿ ಒಟ್ಟು 468 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 368 ಕಾಮಗಾರಿ ಪೂರ್ಣಗೊಂಡು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದ ಅವರು, ಇತರ ಇಲಾಖೆಗಳಿಗಿಂತ ಲೋಕೋಪಯೋಗಿ ಇಲಾಖೆಗೆ ಸಾಮಾಜಿಕ ಹೊಣೆ ಗಾರಿಕೆ ಹೆಚ್ಚಿದೆ. ಆದುದರಿಂದ ಅಧಿಕಾರಿಗಳು ಸೇತುವೆ, ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಕರ್ತವ್ಯ ಪ್ರಜ್ಞೆ ಯಿಂದ ಕೆಲಸ ಮಾಡಬೇಕಾಗಿದೆ ಎಂದರು.
