ಶೀಘ್ರವೇ ಡೀಮ್ಡ್ ಫಾರೆಸ್ಟ್, ಕುಮ್ಕಿ ಸಮಸ್ಯೆಗೆ ಪರಿಹಾರ: ಸಚಿವ ಅಶೋಕ್

ಕೊಕ್ಕರ್ಣೆ (ಬ್ರಹ್ಮಾವರ), ಫೆ.19: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಇನ್ನು 15 ದಿನಗಳಲ್ಲಿ ಇದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ. ಸುಪ್ರೀಂ ಕೋರ್ಟಿನಿಂದ ಆದೇಶವಾದ ತಕ್ಷಣ, ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಕೊಕ್ಕಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗೂ ವಿವಿಧ ಇಲಾಖೆಗಳ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಜನರಿಂದ ಅಹವಾಲು ಸ್ವೀಕರಿಸುವ ಸಮಯದಲ್ಲಿ ಡೀಮ್ಡ್ ಫಾರೆಸ್ಟ್ ಹಾಗೂ ಕುಮ್ಕಿ ಸಮಸ್ಯೆಯ ಕುರಿತಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಈಗ ಸುಪ್ರೀಂ ಕೋರ್ಟ್ನಲ್ಲಿದ್ದೆ. ರಾಜ್ಯದ ಒಟ್ಟು 9 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಘೋಷಿಸಿದೆ. ಇದರಿಂದ ಹಲವು ದಶಕಗಳಿಂದ ಇಂಥ ಪ್ರದೇಶಗಳಲ್ಲಿ ವಾಸ್ತಸ್ಯ ಮಾಡಿರುವ ಜನರಿಗೆ ಹಕ್ಕುಪತ್ರ ಹಾಗೂ ಇತರ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಈ ಜಾಗ ಫಾರೆಸ್ಟ್ ಲ್ಯಾಂಡ್ ಎಂದು ಬರುತ್ತಿರುವುದು ಕಾರಣ ಎಂದರು.
ಇದೀಗ ಅರಣ್ಯ ಇಲಾಖೆ ಇರುವ 9 ಲಕ್ಷ ಹೆಕ್ಟೇರ್ನಲ್ಲಿ ಆರು ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ಒಪ್ಪಿಸಲು ಒಪ್ಪಿಕೊಂಡಿದೆ. ಉಳಿದ ಮೂರು ಲಕ್ಷ ಹೆಕ್ಟೇರ್ ಮಾತ್ರ ಡೀಮ್ಡ್ ಫಾರೆಸ್ಟ್ ಆಗಿ ಉಳಿದುಕೊಳ್ಳಲಿದೆ. ಅರಣ್ಯ ಇಲಾಖೆಯ ಉಚ್ಛ ನ್ಯಾಯಾಲಯಕ್ಕೆ ತನ್ನ ಒಪ್ಪಿಗೆಯನ್ನು ನೀಡಿದೆ. ಸುಪ್ರೀಂ ಕೋರ್ಟ್ನಿಂದ ಈ ಬಗ್ಗೆ ಆದೇಶವಾದ ತಕ್ಷಣ ಇಲಾಖೆ ಜನರಿಗೆ ಹಕ್ಕುಪತ್ರ ನೀಡಲಿದೆ ಎಂದು ಈ ಬಗ್ಗೆ ಸಚಿವರೆದುರು ತಮ್ಮ ಅಹವಾಲು ಹೇಳಿಕೊಂಡ ಮಹಿಳೆಯರು, ಹಿರಿಯ ನಾಗರಿಕರಿಗೆ ಭರವಸೆ ನೀಡಿದರು.
ಶೀಘ್ರವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು ಕಾನೂನು ಸಚಿವರೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಕಂದಾಯ ಇಲಾಖೆ ಯಾರ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರಗುಳಿಯು ವುದೋ ಅವರಿಗೆ ಪಹಣಿ ವಿತರಿಸಲಿದೆ. ಕಂದಾಯ ಸಚಿವನಾಗಿ ನಾನು ಶೀಘ್ರವೇ ಈ ಬಗ್ಗೆ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ಅಶೋಕ್ ನುಡಿದರು.
ಇದಕ್ಕೆ ಮುನ್ನ ಹತ್ತಾರು ಮಂದಿ ಡೀಮ್ಡ್ ಫಾರೆಸ್ಟ್ ಕಾನೂನಿನಿಂದ ತಮಗಾಗಿರುವ ತೊಂದರೆಯನ್ನು ಸಚಿವರ ಮುಂದೆ ತೆರೆದಿಟ್ಟರು. 40 ವರ್ಷಗಳಿಗೂ ಅಧಿಕ ಸಮಯದಿಂದ ಕುಟುಂಬ ಮನೆ ಕಟ್ಟಿ ವಾಸವಾಗಿದ್ದರೂ ನಮಗಿನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ವಿದ್ಯುತ್ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲಾಗುತ್ತಿಲ್ಲ ಎಂದು ಅವರು ದೂರಿದರು.
ಇದೇ ರೀತಿ ನಮೂನೆ 50,53, 57ರಡಿ ಸಕ್ರಮೀಕರಣ ಕೋರಿ ಸಲ್ಲಿಸಿರುವ ಅಕ್ರಮ ಸಾಗುವಳಿದಾರರು ಹಾಗೂ 94ಸಿ ಅಡಿಯಲ್ಲಿ ನಿವೇಶನ ಮಂಜೂರಾತಿಗಾಗಿ ಮನವಿ ಸಲ್ಲಿಸಿರುವವರೂ ತಮ್ಮ ಅಹವಾಲು ಹೇಳಿಕೊಂಡರು.
ಕುಮ್ಕಿಗೆ ಪರಿಹಾರ: ಕುಮ್ಕಿ ಸಮಸ್ಯೆಯ ಕುರಿತಂತೆ ಪರಿಶೀಲಿಸಿ ಕ್ರಮ ತೆಗೆದು ಕೊಳ್ಳಲು ತನ್ನ ಅಧ್ಯಕ್ಷತೆಯಲ್ಲಿ ಸಚಿವರ ಸಮಿತಿಯೊಂದು ನೇಮಕಗೊಂಡಿದ್ದು, ವಿಧಾನಮಂಡಲ ಅಧಿವೇಶನ ಬಳಿಕ ಸಮಿತಿಯ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಅಶೋಕ್ ಭರವಸೆ ನೀಡಿದರು.
ಮಾಜಿ ಜಿಪಂ ಸದಸ್ಯರಾದ ಬಿ.ಭುಜಂಗ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ ಹಾಗೂ ಇತರರು ಕಂದಾಯ ಇಲಾಖೆಯ ಸಮಸ್ಯೆಗಳ ಕುರಿತಂತೆ ಸಚಿವರ ಗಮನ ಸೆಳೆದರು.
ಎತ್ತಿನ ಗಾಡಿಯಲ್ಲಿ ಬಂದ ಸಚಿವರು
ಕಾರ್ಕಳದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಅಪರಾಹ್ನ ಸಚಿವ ಅಶೋಕ್ ಕೊಕ್ಕರ್ಣೆಗೆ ಆಗಮಿಸಿದಾಗ ಅವರನ್ನು ಎತ್ತಿಗಾಡಿಯಲ್ಲಿ ಕುಳ್ಳಿರಿಸಿಕೊಂಡು ಕೊಕ್ಕರ್ಣೆ ಬಸ್ ನಿಲ್ದಾಣದಿಂದ ಸಭೆ ನಡೆಯುವ ಕರ್ನಾಟಕ ಪಬ್ಲಿಕ್ ಶಾಲೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.
ಸಚಿವರು ಶಾಲಾ ಮೈದಾನದಲ್ಲಿ ಹಾಕಲಾದ ವಿವಿಧ ಇಲಾಖೆಗಳ ಸ್ಟಾಲ್ಗಳನ್ನು ವೀಕ್ಷಿಸಿದರು.