ನಾಟಕಗಳ ನಡುವೆ ಸ್ಫರ್ಧೆ ಸಲ್ಲದು: ಡಾ.ಮಹಾಬಲೇಶ್ವರ ರಾವ್

ಶಿರ್ವ, ಫೆ.20: ನಾಟಕಗಳಲ್ಲಿ ವಿವಿಧ ಬಗೆಯ ನಟನೆ, ಶೈಲಿ ಇದ್ದಾಗ ಅಂತಹ ರಂಗ ಸ್ಫರ್ಧೆಗಳಿಗಿಂತ ರಂಗೋತ್ಸವ ಮಿಗಿಲು. ರಂಗದ ಎಲ್ಲ ತೀರ್ಮಾನಗಳನ್ನು ಪ್ರೇಕ್ಷಕರಿಗೆ ಬಿಟ್ಟು ಕೊಡುವುದರಲ್ಲಿಯೇ ರಂಗಭೂಮಿಯ ಸೊಗಸು ಅಡಗಿದೆ. ಪ್ರೇಕ್ಷಕರೇ ನಿಜವಾದ ತೀರ್ಪುಗಾರರು. ನಾಟಕಗಳ ನಡುವೆ ಸ್ಫರ್ಧೆ ಏರ್ಪಡಿಸು ವುದು ಸರಿಯಲ್ಲ ಎಂದು ಸಾಹಿತಿ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ದಶಮಾನೋತ್ಸವದ ಹೊಸ್ತಿಲ್ಲಿರುವ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿ ಷ್ಠಾನ ‘ಪರಿಚಯ ಪಾಂಬೂರು’ ಆಶ್ರಯದಲ್ಲಿ ಪಾಂಬೂರು ಹೊಲಿಕ್ರಾಸ್ ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾದ ನಾಟಕ ಕಾರ್ಯಕ್ರಮ ಪರಿಚಯ ರಂಗೋತ್ಸವವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಾಂಬೂರು ಧರ್ಮಕೇಂದ್ರದ ಧರ್ಮಗುರು ರೆ.ಪಾ.ಹೆನ್ರಿ ಮಸ್ಕರೇನ್ಹಸ್ ಮಾತನಾಡಿ, ದೇವರ ಪ್ರೀತಿ ಮಾಡುವುದೆಂದರೆ ಪರರ ಪ್ರೀತಿ, ಸೇವೆ ಮಾಡು ವುದು. ನಾಟಕಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಈ ಪರಿಸರ ದಲ್ಲಿ ಪರಿಚಯ ಬಳಗ ಮಾಡುತ್ತಿರುವುದು ಅಭಿನಂದನೀಯ ಎಂದರು.
ರಂಗಕರ್ಮಿ, ನಾರಾವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಆಲ್ವಿನ್ ಸೆರಾವೋ ಮಾತನಾಡಿ, ಸಾಹಿತಿಗಳು, ರಂಗಕರ್ಮಿಗಳು ಅಡ್ಡಗೋಡೆಯ ಮೇಲೆ ಕುಳಿತು ಕೊಳ್ಳುವಂತಿಲ್ಲ. ತಮ್ಮ ಬರವಣಿಗೆಗೆ ಬದ್ದತೆ ಮತ್ತು ನಿಷ್ಟರಾಗಿರಬೇಕು. ವೈಚಾರಿಕತೆಯಿಂದ ಮಾತ್ರ ದೇಶಕ್ಕೆ ಒಳಿತು ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಉಪನ್ಯಾಸಕ ಕೆ.ಎಸ್.ಶ್ರೀಧರಮೂರ್ತಿ ದಶಮಾನೋತ್ಸವದ ಸವಿ ನೆನಪಿನ ಪರಿಚಯ ರಂಗ ಕೇಂದ್ರದ ಯೋಜನೆಗೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಅನಿಲ್ ಡೇಸಾ ವಹಿಸಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಪುಂಡಲೀಕ ಮರಾಠೆ ವಂದಿಸಿದರು. ನಂತರ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ‘ಉಡಿಯೊಳಗಣ ಕಿಚ್ಚು’ ಕನ್ನಡ ನಾಟಕ ಪ್ರದರ್ಶನಗೊಂಡಿತು.