ಸಂವಿಧಾನಕ್ಕೆ ಗೌರವ ನೀಡಿ ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ: ಸಂಸದ ಬಿ.ವೈ.ರಾಘವೇಂದ್ರ

ಉಡುಪಿ, ಫೆ.20: ಆರು ಮಂದಿ ವಿದ್ಯಾರ್ಥಿನಿಯರ ಹೋರಾಟ ರಾಜ್ಯ- ರಾಷ್ಟ್ರಕ್ಕೆ ವ್ಯಾಪಿಸಿದೆ. ಸಮವಸ್ತ್ರ ನೀತಿ ಸಂಹಿತೆ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಹಿಂದಿನಿಂದ ಇದೆ. ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಸಮವಸ್ತ್ರ ಪಾಲಿಸಲು ಸೂಚಿಸಲಾಗಿದೆ. ಸಂವಿಧಾನ, ಕೋರ್ಟ್ ಹಾಗೂ ದೇಶಕ್ಕೆ ಗೌರವ ಕೊಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರ್ಟ್ ವಿರುದ್ಧ ಯಾರು ನಡೆದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನಕ್ಕೆ ಗೌರವ ಕೊಟ್ಟು ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ. ಸಂವಿಧಾನ ದಲ್ಲಿ ನ್ಯಾಯ ಕೇಳುವವರು ಸಂವಿಧಾನದ ವಿರುದ್ಧ ನಡವಳಿಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಕಲ್ಮಶಗಳು ಇಲ್ಲ. ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಕುಮ್ಮಕ್ಕು ಇದೆ. ಇನ್ನಾದರೂ ಸಂವಿಧಾನ, ಕೋರ್ಟಿಗೆ ಗೌರವ ಕೊಡುವ ಕಾರ್ಯ ಮಾಡಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವವಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಮಾಡಲು ಸಾಧ್ಯ ಇಲ್ಲ ಎಂದು ಅವರು ತಿಳಿಸಿದರು.