ಕೇಸರಿ ಶಾಲು ತೆಗೆದಿರಿಸಿ ಹೈಕೋರ್ಟ್ ಆದೇಶ ಪಾಲನೆ: ಸಚಿವ ಕೋಟ

ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಫೆ.20: ಹಿಜಾಬ್ ಕುರಿತು ಸರಕಾರ ಮತ್ತು ಹೈಕೋರ್ಟ್ ಮಧ್ಯಂತರ ಆದೇಶ ಸ್ಪಷ್ಟವಾಗಿದೆ. ಮುಂದಿನ ಆದೇಶದವರೆಗೆ ಸಮವಸ್ತ್ರ ಮಾತ್ರ ಎಂದು ಕೋರ್ಟ್ ಹೇಳಿದೆ. ನ್ಯಾಯಾಲಯ ಹೇಳಿದ ನಂತರ ಕೇಸರಿ ಶಾಲು ಗಳು ಕಾಣಿಸಿಕೊಂಡಿಲ್ಲ. ಕೇಸರಿ ಶಾಲು, ಪೇಟ ತೆಗೆದು ಒಂದು ವರ್ಗ ಕೋರ್ಟ್ ಆದೇಶದಂತೆ ಕಾಲೇಜಿಗೆ ಹೋಗುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಾಕಿದ ಮಕ್ಕಳು ನಾವೆಲ್ಲ ಒಂದು ಎಂಬ ಭಾವನೆ ಹೊಂದಿದ್ದಾರೆ. ವಿದ್ಯಾರ್ಥಿನಿಯರು ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸೇರಿದಂತೆ ಕೆಲ ಶಕ್ತಿಗಳು ಹಿಜಾಬ್ ವೈಭವೀಕರಿಸುತ್ತಿರುವುದು ದುರಾದೃಷ್ಟ. ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಒಟ್ಟಾಗಿ ಒಂದಾಗಿ ಬದುಕುವ ಸಂದೇಶ ನೀಡಿದ್ದಾರೆ ಎಂದರು.
ಕಾನೂನನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ಹೈಕೊರ್ಟ್ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದೆ. ಹೈಕೋರ್ಟ್ ಆದೇಶದ ಉಲ್ಲಂಘನೆ ಬಗ್ಗೆ ಚರ್ಚೆಗಳಾಗುತ್ತಿವೆ. ಇಂತಹ ಚರ್ಚೆಗಳಿಗೆ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಅವಕಾಶ ಕೊಡಬಾರದು ಎಂದು ಅವರು ಮನವಿ ಮಾಡಿದರು.





