ಆರೋಪಿ ಪರ ವಕೀಲರು ಹಾಜರಾಗದಿದ್ದರೆ ನ್ಯಾಯಾಲಯವೇ ವಕೀಲರನ್ನು ನೇಮಿಸಿ ಕೊಡಬೇಕು: ಹೈಕೋರ್ಟ್

ಬೆಂಗಳೂರು, ಫೆ.21: ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರಿಗೆ ನ್ಯಾಯಾಲಯವೇ ಕಾನೂನು ನೆರವಿನ ಮೂಲಕ ವಕೀಲರನ್ನು ನೇಮಿಸಿಕೊಡುವ ಬದ್ಧತೆ ಹೊಂದಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೋಮಶೇಖರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಂವಿಧಾನದ ವಿಧಿ 39(ಎ)ನಲ್ಲಿ ಆರ್ಥಿಕ ಕಾರಣಗಳೂ ಸೇರಿದಂತೆ ಯಾವುದೇ ಅಸಮರ್ಥತೆಗಳ ಕಾರಣದಿಂದಾಗಿ ಯಾವುದೇ ನಾಗರಿಕನಿಗೆ ನ್ಯಾಯ ಪಡೆಯುವ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಹಾಗೆಯೇ, ಇಂತಹ ಸಂದರ್ಭಗಳಲ್ಲಿ ಉಚಿತ ಕಾನೂನು ನೆರವು ನೀಡಲು ಅಗತ್ಯ ಕಾನೂನು ರೂಪಿಸುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಈ ಉದ್ದೇಶವನ್ನು ಈಡೇರಿಸಲು ಕಾನೂನು ಸೇವಾ ಪ್ರಾಧಿಕಾರ ರೂಪಿಸಲಾಗಿದೆ. ಈ ಪ್ರಾಧಿಕಾರವು ರಾಷ್ಟ್ರೀಯ ಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ಇದ್ದು, ಸಿಆರ್ಪಿಸಿ ಸೆಕ್ಷನ್ 304ರ ಪ್ರಕಾರ ಸರಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿದೆ ಎಂದು ಹೇಳಿದೆ.
ಅಲ್ಲದೇ, ಅರ್ಜಿದಾರರ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಈತನ ಪರ ವಕೀಲರು ಪಾಟಿ ಸವಾಲಿನ ವಿಚಾರಣೆ ವೇಳೆ ಹಾಜರಾಗಿಲ್ಲ. ಅಲ್ಲದೆ, ಉಚಿತ ಕಾನೂನು ನೆರವು ನೀಡಿಲ್ಲ. ಸಾಕ್ಷ್ಯಗಳ ಪಾಟಿ ಸವಾಲು ನಡೆದಿಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿದಾರ ಸೋಮಶೇಖರನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ.
ಹಾಗೆಯೇ, ಅರ್ಜಿದಾರನಿಗೆ ವಕೀಲರ ನೆರವು ನೀಡಬೇಕು ಜೊತೆಗೆ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅರ್ಜಿದಾರ ಸೋಮಶೇಖರ ಪ್ರೀತಿಯ ಹೆಸರಲ್ಲಿ 14 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ ಸಂತ್ರಸ್ತೆಯ ಸೋದರ 2014ರಲ್ಲಿ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ 2018ರ ಜನವರಿ 27ರಂದು 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಆರೋಪಿಗೆ ಸಾಕ್ಷ್ಯಗಳ ಪಾಟಿ ಸವಾಲಿಗೆ ಅವಕಾಶ ನೀಡಿದ್ದರೂ ಆರೋಪಿ ಪರ ವಕೀಲರು ಹಾಜರಾಗಿರಲಿಲ್ಲ.







