ಮಲ್ಪೆ ಹೊಟೇಲಿಗೆ ದಾಳಿ, ಹಲ್ಲೆ ಪ್ರಕರಣ: ಹಲವರ ವಿರುದ್ಧ ಮೊಕದ್ದಮೆ ದಾಖಲು

ಉಡುಪಿ, ಫೆ.22: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಝ್ರ ಶಿಫಾ ಅವರ ತಂದೆಯ ಮಲ್ಪೆ ಹೊಟೇಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.21ರಂದು ರಾತ್ರಿ ಬೈಕಿನಲ್ಲಿ ಬಂದ ದೀಪಕ್ ಕುಮಾರ್ ಹಾಗೂ ಇತರರು ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜನ್ನು ಪುಡಿಗೈದು, ಬಳಿಕ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಸೈಫ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸಶಸ್ತ್ರ ಮೀಸಲು ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ.
ವೈಯಕ್ತಿಕ ದಾಖಲೆ ಸೋರಿಕೆಯೇ ಕಾರಣ
ಹಿಜಾಬ್ ಸಂಬಂಧ ನ್ಯಾಯ ಕೇಳಿ ಹೈಕೋರ್ಟ್ಗೆ ಮೊರೆ ಹೋದ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ನೀಡಿದ ಖಾಸಗಿ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ ಪರಿಣಾಮ ಈ ಕೃತ್ಯ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ದಾಖಲೆಗಳಲ್ಲಿದ್ದ ಮೊಬೈಲ್ ಸಂಖ್ಯೆ ಆಧಾರದಲ್ಲಿ ಈ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಮತ್ತು ಅದರಲ್ಲಿನ ವಿಳಾಸಗಳ ಮೂಲಕ ಅವರ ಮನೆ ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು ಎಂದು ದೂರಲಾಗಿದೆ. ಅದೇ ರೀತಿ ಇತ್ತೀಚೆಗೆ ಮಾಧ್ಯಮವೊಂದು ಹಿಡನ್ ಕ್ಯಾಮೆರಾದ ಮೂಲಕ ಶಿಫಾನ ತಂದೆಯ ಹೊಟೇಲಿಗೆ ಹೋಗಿ ತಂದೆಯೊಂದಿಗೆ ಮಾತುಕತೆ ನಡೆಸಿದ್ದು, ಈ ವಿಡಿಯೋ ರವಿವಾರ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.
ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋದೊಂದಿಗೆ ಶಿಫಾಳ ತಂದೆ ಹೊಟೇಲಿನಲ್ಲಿ ಯಾರು ವ್ಯಾಪಾರ ನಡೆಸದಂತೆ ಅಪಪ್ರಚಾರ ನಡೆಸಲಾಯಿತು. ಇದರ ಪರಿಣಾಮವಾಗಿ ಕೆಲವು ದುಷ್ಕರ್ಮಿಗಳು ಹೊಟೇಲಿಗೆ ದಾಳಿ ನಡೆಸಿ ಸೈಫ್ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಹಝ್ರ ಶಿಫಾ ಟ್ವೀಟ್
‘ನಾನು ನನ್ನ ಹಕ್ಕು ಆಗಿರುವ ಹಿಜಾಬ್ ಪರ ಹೋರಾಟ ಮುಂದುವರಿಸಿದ ಕಾರಣಕ್ಕಾಗಿ ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ಅಲ್ಲದೆ ನಮ್ಮ ಆಸ್ತಿಗೂ ಹಾನಿ ಮಾಡಲಾಗಿದೆ. ನಾನು ನನ್ನ ಹಕ್ಕನ್ನು ಕೇಳಬಾರದೇ? ಅವರ ಮುಂದಿನ ಬಲಿಪಶು ಯಾರು? ಈ ಕೃತ್ಯ ಎಸಗಿರುವ ಸಂಘಪರಿವಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ವಿದ್ಯಾರ್ಥಿನಿ ಹಝ್ರ ಶಿಫಾ ಉಡುಪಿ ಪೊಲೀಸ್ ಇಲಾಖೆಯನ್ನು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಹೊಟೇಲಿಗೆ ದಾಳಿ ಹಾಗೂ ವಿದ್ಯಾರ್ಥಿನಿಯ ಸಹೋದರನ ಹಲ್ಲೆಯ ಹಿಂದೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು.
-ಆಸೀಲ್ ಅಕ್ರಂ, ಅಧ್ಯಕ್ಷರು, ಸಿಎಫ್ಐ ಉಡುಪಿ