ರಾಜ್ಯಪಾಲರ ಭಾಷಣ ಸರಕಾರಕ್ಕೆ ಗೊತ್ತು ಗುರಿ ಇಲ್ಲ ಎಂಬುದರ ಸೂಚಕ ಎಂದ ಸಿದ್ದರಾಮಯ್ಯ

ಬೆಂಗಳೂರು, ಫೆ.23: ಸರಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರಕಾರಕ್ಕೆ ಯಾವುದೇ ಗೊತ್ತು ಗುರಿಗಳು ಇಲ್ಲ ಎಂಬುದರ ಸೂಚಕವಾಗಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣ ನಿರ್ಣಯದ ಕುರಿತು ಮುಖ್ಯಮಂತ್ರಿ ಸದನದಲ್ಲಿ ನಿನ್ನೆ ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಅವರು, ರಾಜ್ಯಪಾಲರ ಭಾಷಣದಲ್ಲಿ ಅನೇಕ ಕಡೆ ಕೇಂದ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ಬಿಜೆಪಿಯ ಶಾಸಕರು ಮೋದಿಯನ್ನು ಮತ್ತು ಕೇಂದ್ರದ ಯೋಜನೆಗಳನ್ನು ಶ್ಲಾಘಿಸುವುದಕ್ಕಷ್ಟೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ ಎಂದು ತಿಳಿಸಿದ್ದಾರೆ.
ಬಂಡವಾಳಿಗರ ಮತ್ತು ಕಾರ್ಪೊರೇಟ್ ಕುಳಗಳ ಮೂಗಿನ ನೇರಕ್ಕೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರೆ, ಭಾರತದ ಅತಿ ಶ್ರೀಮಂತರಾದ ಅದಾನಿ, ಅಂಬಾನಿ ಮುಂತಾದ 142 ಜನರ ಸಂಪತ್ತು 23 ಲಕ್ಷ ಕೋಟಿಗಳಿದ್ದದ್ದು ಈಗ ಅದು 53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಆದರೆ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಏರಿಕೆ ಎರಡೂ ದುಪ್ಪಟ್ಟಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮನಮೋಹನ್ ಸಿಂಗ್ ಕಾಲದಲ್ಲಿ ದೇಶ ಸಂಗ್ರಹಿಸುವ 100 ರೂ.ತೆರಿಗೆಯಲ್ಲಿ ಜನರ ತೆರಿಗೆಯ ಪಾಲು 58 ರೂ.ರಷ್ಟಿತ್ತು. ಬಂಡವಾಳಿಗರ ತೆರಿಗೆ ಪಾಲು ಶೇ.42ರಷ್ಟಿತ್ತು. ಈಗ ಜನರ ಪಾಲು ಶೇ.75 ಕ್ಕೆ ಏರಿಕೆಯಾಗಿದೆ. ಬಂಡವಾಳಿಗರಿಂದ 25 ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಇದರ ಫಲವಾಗಿ ದೇಶದ ಬಡವರ ಸಂಖ್ಯೆ ಹೆಚ್ಚುತ್ತಿದೆ. ದೇಶ ದೊಡ್ಡ ಸಾಲಗಾರನಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
2014ರಲ್ಲಿ 53 ಲಕ್ಷ ಕೋಟಿಗಳಿದ್ದ ದೇಶದ ಸಾಲ 2022ರ ಕೊನೆಗೆ 152 ಲಕ್ಷ ಕೋಟಿಗಳಷ್ಟಾಗುತ್ತಿದೆ. ದೇಶವು ಸಂಗ್ರಹಿಸುವ 22 ಲಕ್ಷ ಕೋಟಿ ತೆರಿಗೆಯಲ್ಲಿ 9.40 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ಅಂದರೆ ದುಡಿದ 100 ರೂಪಾಯಿನಲ್ಲಿ 43 ರೂಪಾಯಿ ಬಡ್ಡಿ ಕಟ್ಟುವುದಕ್ಕೆ ಖರ್ಚು ಮಾಡಲಾಗುತ್ತಿದೆ. ಹಾಗಾಗಿ ಮೋದಿ ಸರಕಾರ ದೇಶದ ಆಸ್ತಿಗಳನ್ನೆಲ್ಲ ಮಾರಾಟಕ್ಕಿಟ್ಟಿದ್ದು, ಏರ್ ಇಂಡಿಯಾ ಸಾಲವನ್ನು ಮೋದಿ ಸರಕಾರವೆ ತೀರಿಸಿ ಕೇವಲ 2,700 ಕೋಟಿಗಳನ್ನು ನಗದು ರೂಪದಲ್ಲಿ ಪಡೆದುಕೊಂಡು ಟಾಟಾಗಳಿಗೆ ಬಿಟ್ಟುಕೊಟ್ಟಿದೆ. ಇದನ್ನೇ ಆತ್ಮ ನಿರ್ಭರ ಭಾರತ ಎಂದು ದಾರಿತಪ್ಪಿಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದಿಂದ 3 ಲಕ್ಷ ಕೋಟಿ ರೂ.ಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿಸುವ ಕೇಂದ್ರವು ವಾಪಸ್ಸು ನೀಡುತ್ತಿರುವುದು ಕೇವಲ 43 ಸಾವಿರ ಕೋಟಿ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018ರ ವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಯುವಜನರ ಕಲ್ಯಾಣ ಮತ್ತು ನೇಕಾರರು, ಮೀನುಗಾರರು, ಕುಂಬಾರರು, ಅಕ್ಕಸಾಲಿಗರು, ಮೇದಾರರು, ಕ್ಷೌರಿಕರು, ಉಪ್ಪಾರರು ವಿವಿಧ ವಾಹನ ಚಾಲಕರು, ಮಡಿವಾಳರು ಮುಂತಾದ ಕುಶಲ ಕರ್ಮಿಗಳ ಕುರಿತು ಒಂದಕ್ಷರದ ಪ್ರಸ್ತಾಪವಿಲ್ಲ ಎಂದು ಅವರು ದೂರಿದ್ದಾರೆ.
ಲೋಕೋಪಯೋಗಿ, ಸಣ್ಣ ಕೈಗಾರಿಕೆ, ನಗರ, ಪಟ್ಟಣಗಳ ಅಭಿವೃದ್ಧಿ, ಜನರ ಕಲ್ಯಾಣದ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡದ್ದಕ್ಕಾಗಿ ಸರಕಾರಕ್ಕೆ ಅಭಿನಂದಿಸುತ್ತೇನೆ. ಕೋವಿಡ್ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮರಣ ಹೊಂದಿದ್ದರೆ, ಅಸಂಖ್ಯಾತ ಮಕ್ಕಳು ತಬ್ಬಲಿಗಳಾಗಿವೆ. ವೃದ್ಧ ತಂದೆ ತಾಯಿಗಳು ಅನಾಥರಾಗಿದ್ದಾರೆ. ಆದರೂ ಸರಕಾರ ತಾವು ಸಾಧನೆ ಮಾಡಿದ್ದೇವೆಂದು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತ ಬಂದಿತ್ತು. ಆಗಸ್ಟ್ನಲ್ಲಿ ಅತಿವೃಷ್ಟಿಯಾಗಿತ್ತು. ಅದರ ಪರಿಹಾರವನ್ನು ಇನ್ನೂ ನೀಡುವುದರಲ್ಲೇ ಇದ್ದಾರೆ. ಇದನ್ನು ಜವಾಬ್ಧಾರಿಯುತ ಸರಕಾರ ಎನ್ನಬಹುದೆ? ನೀರಾವರಿ ಕುರಿತಂತೆಯೂ ರಾಜ್ಯಪಾಲರ ಮಾತುಗಳು ನಿಜಕ್ಕೂ ನಿರಾಶಾದಾಯಕವಾಗಿವೆ. ಯಾವ ಕಾರ್ಯಕ್ರಮಗಳನ್ನು ಎಷ್ಟು ಅನುದಾನದಲ್ಲಿ ರೂಪಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸರಕಾರದಲ್ಲಿ ಅತ್ಯಂತ ನಿರ್ಲಕ್ಷಿತ ಇಲಾಖೆಗಳಲ್ಲಿ ಕೃಷಿಯೂ ಒಂದು. ಪ್ಯಾರಾ 41 ರಲ್ಲಿ ಬೆಂಬಲ ಬೆಲೆ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾನೆಲ್ಲೊ ಈ ವರ್ಷದ ಬೆಂಬಲ ಬೆಲೆ ಇರಬೇಕೆಂದು ನೋಡಿದರೆ 2020-21ರಲ್ಲಿ ಖರೀದಿಸಿದ್ದನ್ನು ಪ್ರಸ್ತಾಪಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ 2019 ರಲ್ಲಿ ಪ್ರಾರಂಭವಾಯಿತು. ಆಗ ರಾಜ್ಯ ಸರಕಾರ ಕೇಂದ್ರದ 6,000 ದ ಜೊತೆಗೆ 4,000 ರೂಗಳನ್ನು ನೀಡುವುದಾಗಿ ಹೇಳಿತ್ತು. ಆದರೆ 2019 ಮತ್ತು 2020 ರಲ್ಲಿ ನೀಡಿದ್ದು ಕೇವಲ ತಲಾವಾರು 2,000 ರೂಪಾಯಿಗಳನ್ನು ಮಾತ್ರ ಎಂದು ಅವರು ದೂರಿದ್ದಾರೆ.
ನಮ್ಮ ಸರಕಾರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ 1 ಅಥವಾ 2ನೇ ಸ್ಥಾನ ಗಳಿಸಿತ್ತು. ಈಗ ಓಲಾ ಬೈಕ್, ಏಥರ್, ಟಾಟಾ ಎಲೆಕ್ಟ್ರಾನಿಕ್ಸ್ ಮುಂತಾದ ಬೃಹತ್ ಬಂಡವಾಳದ ಕಂಪೆನಿಗಳು 10,000 ಕೋಟಿ ಬಂಡವಾಳ ಹೂಡಲು ತಯಾರಿದ್ದವು. ಆದರೆ ಈ ಸರಕಾರ ಆಸಕ್ತಿ ವಹಿಸದ ಕಾರಣ ತಮಿಳುನಾಡಿನ ಪಾಲಾದವು. ರಾಜ್ಯವು ಕೈಗಾರಿಕಾಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎನ್ಇಪಿ ಮನೆಹಾಳು ನೀತಿ: ಎನ್.ಇ.ಪಿ.ಯಂಥ ಮನೆಹಾಳು ನೀತಿಗಳನ್ನು ಸರಕಾರ ಸಾಧನೆ ಎಂದು ಹೇಳಿಸಿದೆ. ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ವೈಜ್ಞಾನಿಕ ಮನೋಭಾವಗಳಿರುವ ಅಧ್ಯಾಪಕರಿಲ್ಲ. ಸ್ವತಂತ್ರವಾಗಿ ಅಧ್ಯಯನ ಮಾಡುವ, ಬರೆಯುವ ಅಧ್ಯಾಪಕರಿಗೆ ಸರಕಾರದ ಕಿರುಕುಳದ ಭಯ. ಹೀಗಾಗಿ ಸಂಸ್ಕೃತದಂತಹ ಭಾಷೆಗಳ ಹೇರಿಕೆಗಷ್ಟೇ ಎನ್ಇಪಿ ಸೀಮಿತವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಸತಿಯ ವಿಚಾರದಲ್ಲಿ ಕೇವಲ ಭವಿಷ್ಯ ನುಡಿಯಲಾಗಿದೆಯೇ ಹೊರತು ಸಾಧನೆಗಳಿಲ್ಲ. ಕಲ್ಯಾಣ ಕರ್ನಾಟಕದ ಹೆಸರು ಬದಲಾಯಿಸಿದೆವು, ಕಚೇರಿಯನ್ನು ಸ್ಥಳಾಂತರಿಸಿದೆವು ಎಂದು ಪ್ಯಾರಾ 75 ರಲ್ಲಿ ಹೇಳಿಕೊಳ್ಳಲಾಗಿದೆ. ಇದನ್ನು ಸಾಧನೆ ಎಂದು ಹೇಳಬಹುದೆ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರ ಅಮೃತ ಹೆಸರಿನಲ್ಲಿ ಹಲವು ಯೋಜನೆಗಳನ್ನು ರಾಜ್ಯಪಾಲರ ಬಾಯಲ್ಲಿ ಪ್ರಸ್ತಾಪ ಮಾಡಿಸಿದೆ. ಅದರಲ್ಲಿ 750 ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 25 ಲಕ್ಷ ರೂಪಾಯಿಗಳನ್ನು ನೀಡಲಾಗುವುದೆಂದು ಪ್ರಸ್ತಾಪಿಸಲಾಗಿದೆ. 25 ಲಕ್ಷ ರೂಪಾಯಿಗಳಲ್ಲಿ ಯಾವ ಗ್ರಾಮವನ್ನು ಅಮೃತ ಗ್ರಾಮ ಮಾಡಲಾಗುತ್ತದೆ? ನಮ್ಮ ಸರಕಾರದ ಅವಧಿಯಲ್ಲಿ ತಲಾ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 1,750 ಕೋಟಿ ರೂ.ಗಳನ್ನು ನೀಡಿ ಮುಖ್ಯಮಂತ್ರಿ ಸುವರ್ಣ ಗ್ರಾಮ ಯೋಜನೆಯಡಿ ಜಾರಿಗೆ ತಂದು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ನಿಧಿಯ ಹಣವನ್ನು ಕಾರ್ಮಿಕರಿಗೆ ಕೊಟ್ಟು ನಾವು ಸಾಧನೆ ಮಾಡಿದ್ದೇವೆ ಎಂದು ಪ್ರಸ್ತಾಪಿಸಲಾಗಿದೆ. ಪಶುಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜಿಡಿಪಿಗೆ 1 ಲಕ್ಷ ಕೋಟಿ ರೂ.ವರೆಗೂ ಕೊಡುಗೆ ನೀಡುತ್ತಿರುವ, ಸುಮಾರು 45 ಲಕ್ಷ ರೈತ ಕುಟುಂಬಗಳ ಜೀವನಾಧಾರವಾಗಿರುವ ಪಶುಪಾಲನೆಯನ್ನು ಈ ಮಟ್ಟಿಗೆ ನಿರ್ಲಕ್ಷಿಸಬಹುದೆ? ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪತ್ರಕರ್ತರಿಗೆ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಪಾಸ್ ನೀಡುವ ಹಳೆಯ ಯೋಜನೆಯನ್ನೆ ಮುಂದುವರಿಸಿ ರಾಜ್ಯಪಾಲರ ಬಾಯಲ್ಲಿ ಸಾಧನೆ ಎಂದು ಹೇಳಿಸಲಾಗಿದೆ. ಸರಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೆ ತಟ್ಟಿಕೊಂಡು ಓಡಾಡುತ್ತಿದೆ ಎಂಬುದಕ್ಕೆ ರಾಜ್ಯಪಾಲರ ಭಾಷಣವೆ ಸಾಕ್ಷಿ. ರಾಜ್ಯವು ಅತಿ ಕೆಟ್ಟ ಆಡಳಿತವನ್ನು ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಭಾಷಣವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.







