ಕೆಎಂಸಿ ಮಣಿಪಾಲಕ್ಕೆ ಅಂತಾರಾಷ್ಟ್ರೀಯ ಕೇಂದ್ರವೆಂದು ಮಾನ್ಯತೆ

ಉಡುಪಿ, ಫೆ.23: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉಪಶಾಮಕ ಆರೈಕೆ ಮತ್ತು ಜೀವನ ಅಂತ್ಯದ ಆರೈಕೆ ಸೇವೆಗೆ ಅಂತಾರಾಷ್ಟ್ರೀಯ ಕೇಂದ್ರವೆಂದು ಮನ್ನಣೆ, ಮಾನ್ಯತೆಯನ್ನು ಪಡೆದಿದೆ. ಈ ಮಾನ್ಯತೆ ಪಡೆದ ದೇಶದ ಮೊದಲ ಹಾಗೂ ಏಕೈಕ ಸಂಸ್ಥೆ ಕೆಎಂಸಿ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
22 ಸದಸ್ಯ ರಾಷ್ಟ್ರಗಳೊಂದಿಗೆ ಬ್ರಿಟನ್ನ ಲೀವರ್ಪೂಲ್ ವಿಶ್ವವಿದ್ಯಾನಿಲಯದಯುರೋಪ್ ಮೂಲದ ಸಂಸ್ಥೆಯಾದ ಇಂಟರ್ನೇಷನಲ್ ಕೋಲಾಬರೇಟಿವ್ ಕೋಆರ್ಡಿನೇಟಿಂಗ್ ಸೆಂಟರ್ ಕೆಎಂಸಿಗೆ ಉಪಶಾಮಕ ಆರೈಕೆಗಾಗಿ ಅಂತಾರಾಷ್ಟ್ರೀಯ ಕೇಂದ್ರವೆಂದು ಮನ್ನಣೆ ನೀಡಿದೆ ಎಂದು ಅದು ಹೇಳಿದೆ.
ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಮಾಹೆಯ ಕುಲಪತಿ ಲೆ.ಜ.(ಡಾ) ಎಂ ಡಿ ವೆಂಕಟೇಶ್ ಅವರು ಜಂಟಿಯಾಗಿ ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತನ್ನ ಇವರಿಗೆ ಮಾನ್ಯತೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನಗಳ ವಿಭಾಗ) ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಡಾ.ವೆಂಕಟ್ರಾಯ ಎಂ ಪ್ರಭು (ಆರೋಗ್ಯ ವಿಜ್ಞಾನ), ಕುಲಸಚಿವರಾದ ಡಾ.ನಾರಾಯಣ ಸಭಾಹಿತ್ ಮತ್ತು ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ವೈದ್ಯಕೀಯ ತಂಡದವರು ಈ ವೇಳೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಡಿ.ವೆಂಕಟೇಶ್, ಮಣಿಪಾಲದ ಸಣ್ಣ ನಗರದಲ್ಲಿ ಕುಳಿತು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮನ್ನಣೆ, ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಇದನ್ನೆಲ್ಲಾ ಮೀರಿ ಉಪಶಮನಕಾರಿ ಔಷಧ ವಿಭಾಗ ಮತ್ತು ಆಸ್ಪತ್ರೆಯ ತಂಡವು ಅದ್ಭುತ ಕೆಲಸ ಮಾಡಿದೆ. ಈ ಸಾಧನೆಗಾಗಿ ನಾನು ಇಡೀ ತಂಡದ ಕೆಲಸವನ್ನು ಅಭಿನಂದಿಸುತ್ತೇನೆ ಎಂದರು.
ತಂಡವನ್ನು ಅಭಿನಂದಿಸಿದ ಡಾ.ಬಲ್ಲಾಳ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಸಂಘಟಿತ ಐಸಿಯು ಉಪಶಾಮಕ ಆರೈಕೆ ಕ್ರಮವನ್ನು ಹೊಂದಿರುವ ಭಾರತದ ಏಕೈಕ ಆಸ್ಪತ್ರೆಯಾಗಿದೆ. ಇದರಿಂದ ಮಣಿಪಾಲವು 2022ರಿಂದ ಏಷ್ಯಾ ಪೆಸಿಫಿಕ್ ಪ್ರದೇಶದ ಐಸಿಯು-ಪಾಲಿಯೇಟಿವ್ ಕೇರ್ ವಿಶೇಷ ಆಸಕ್ತಿ ಗುಂಪಿನ ನಾಯಕತ್ವದ ಪಾತ್ರವನ್ನು ವಹಿಸಲು ಸಾಧ್ಯವಾಗಲಿದೆ. ಕೆಎಂಸಿ ಮಣಿಪಾಲ ಎಂಡಿ ಇನ್ ಪ್ಯಾಲಿಯೇಟಿವ್ ಮೆಡಿಸಿನ್ ಅನ್ನು ಪ್ರಾರಂಭಿಸಿದ ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಎಂದರು.