ಬಂದರು ಠಾಣೆಯಲ್ಲಿ ಲಾಕಪ್ಡೆತ್: ಕಮೀಷನರೇಟ್ ಹೊರಗಡೆಯ ಅಧಿಕಾರಿಯಿಂದ ಸ್ವತಂತ್ರ ತನಿಖೆಗೆ ಡಿವೈಎಫ್ಐ ಆಗ್ರಹ
ಮಂಗಳೂರು: ಬಂದರು ಪೊಲೀಸ್ ಠಾಣೆಯ ಲಾಕಪ್ನಲ್ಲಿ ರಾಜೇಶ್ ಪೂಜಾರಿ (33) ಎಂಬ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾದ ಯತ್ನ ನಡೆಯುತ್ತಿದೆ ಎಂದು ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.
ಲಾಕಪ್ಡೆತ್ ಎಂಬುದು ಅತಿ ಗಂಭೀರ ಘಟನೆಯಾಗಿದೆ. ಈ ಪ್ರಕರಣವನ್ನು ಮಂಗಳೂರು ಕಮಿಷನರೇಟ್ ಹೊರಗಿನ ಅಧಿಕಾರಿಗಳ ತಂಡದಿಂದ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದ್ದು, ಈ ಕುರಿತು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮಂಗಳೂರು ಪೊಲೀಸ್ ಕಮಿಷನರ್ಗೆ ಡಿವೈಎಫ್ಐ ದ.ಕ. ಸಮಿತಿ ಮನವಿ ಸಲ್ಲಿಸಿದೆ.
33ರ ಯುವಕ ಎದೆನೋವಿನಿಂದ ಏಕಾಏಕಿ ಲಾಕಪ್ನಲ್ಲಿ ಮೃತಪಟ್ಟಿದ್ದಾನೆ ಎಂಬ ಪೊಲೀಸ್ ಇಲಾಖೆಯ ವಾದವನ್ನು ನಂಬಲು ಸಾಧ್ಯವಿಲ್ಲ, ಠಾಣೆಯಲ್ಲಿ ಪೊಲೀಸರು ನೀಡಿದ ಹಿಂಸೆಯಿಂದ ಸಾವು ಸಂಭವಿಸಿರುವ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಪೊಲೀಸರ ಪ್ರಕಾರ ಮಧ್ಯರಾತ್ರಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜೇಶ್ನನ್ನು ಆತನ ಗೆಳೆಯನ ಜೊತೆ ಬಂಧಿಸಲಾಗಿದೆ. ಈ ಹಿಂದೆ ಅಂತಹ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪಗಳಿಲ್ಲದ ಬಂಧಿತರನ್ನು ಮರು ದಿವಸ ಸಂಜೆಯವರೆಗೂ ಠಾಣೆಯಲ್ಲಿ ಕೂರಿಸುವ ಅಗತ್ಯ ಏನಿತ್ತು? ಎಫ್ಐಆರ್ ದಾಖಲಾದದ್ದು ಯಾವಾಗ? ವೈದ್ಯರು ನೀಡಿದ ಮಾಹಿತಿ ಪ್ರಕಾರ ಆಸ್ಪತ್ರೆಗೆ ತಲುಪುವಾಗಲೇ ರಾಜೇಶ್ ಮೃತಪಟ್ಟಿದ್ದಾಗಿ ವರದಿಯಾಗಿದೆ. ಆಸ್ಪತ್ರೆಗಳಿಂದ ಕೂಗಳತೆ ದೂರದಲ್ಲಿರುವ ಬಂದರು ಠಾಣೆಯಿಂದ ಹೃದಯ ನೋವಿಗೆ ಗುರಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಲು ಅಷ್ಟು ತಡವಾಗಲು ಕಾರಣ ಏನು? ಮೊದಲು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ರಾಜೇಶ್ ಕುಟುಂಬಿಕರು ಈಗ ಮೌನವಾಗಿರುವಂತೆ ಮಾಡಿದ ಶಕ್ತಿಗಳು ಯಾವುದು? ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಇದೀಗ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಸುದ್ದಿ ಹರಿದಾಡುತ್ತಿದೆ. ಲಾಕಪ್ಡೆತ್ನಂತಹ ಗಂಭೀರ ಪ್ರಕರಣ ಪೊಲೀಸ್ ಇಲಾಖೆಗೆ ಕಳಂಕವಾಗಿದೆ. ಈ ಎಲ್ಲಾ ಅನುಮಾನಗಳ ಕಾರಣಕ್ಕೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ತಂಡ ನಡೆಸುವ ಅಗತ್ಯ ಇದೆ. ಹಾಗಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹೊರಗಡೆಯ ಅಧಿಕಾರಿಗಳ ಸ್ವತಂತ್ರ ತಂಡಕ್ಕೆ ರಾಜೇಶ್ ಪೂಜಾರಿ ಲಾಕಪ್ಡೆತ್ ಪ್ರಕರಣ ವರ್ಗಾಯಿಸಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಡಿವೈಎಫ್ಐ ಮಂಗಳೂರು ಪೊಲೀಸ್ ಕಮೀಷನರ್ಗೆ ನೀಡಿದ ಮನವಿಯಲ್ಲಿ ವಿನಂತಿಸಿದೆ.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ನಾಯಕ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ನಿಯೋಗದಲ್ಲಿದ್ದರು.







