ಭಟ್ಕಳ: ರಾ.ಹೆ. ಅಗಲೀಕರಣ - ಕೊರಗ ಸಮುದಾಯದ ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ

ಭಟ್ಕಳ: ರಾ.ಹೆ.66 ರ ಅಗಲೀಕರಣದಲ್ಲಿ ಇಲ್ಲಿನ ಕೋಟೇಶ್ವರ ರಸ್ತೆಯಲ್ಲಿರುವ ಕೊರಗ ಸಮುದಾಯದ ಪೌರರ ಕಾರ್ಮಿಕರ ಮನೆಗಳು ತೆರವುಗೊಳಿಸಲಾಗುತ್ತಿದ್ದು ಇದರ ವಿರುದ್ಧ ಜಿಲ್ಲಾ ಕೊರಗ ಹಿತರಕ್ಷಣಾ ವೇದಿಕೆ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಇಲ್ಲಿನ ಕೋಟೇಶ್ವರ ಕ್ರಾಸ್ ರಸ್ತೆ ಸೂಸಗಡಿ ಗ್ರಾಮದ ಸರ್ವೇ ನಂ :350C|C| ರ ಕೊರಗರಕೇರಿಯಲ್ಲಿ ಸುಮಾರು ನೂರು ವರ್ಷಗಳಿಂದ ಕೊರಗ ಸಮುದಾಯದ ಪೌರ ಕಾರ್ಮಿಕ ಕುಟುಂಬಗಳು ವಾಸವಿದ್ದು, ಕೆಲವರು ಸ್ವಂತ ಮನೆಗಳನ್ನು ಕಟ್ಟಿ ಕೊಂಡಿದ್ದರೆ ಇನ್ನು ಕೆಲವರು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ಇಲ್ಲಿನ ಪೌರಕಾರ್ಮಿಕರ ಮತ್ತು ಅವರ ಅವಲಂಬಿತ ಮನೆಗಳು ತೆರವುಗೊಳ್ಳುತ್ತಿದ್ದು, ಅವರಿಗೆ ಪರಿಹಾರವಾಗಲಿ ಅಥವಾ ಬದಲಿ ವ್ಯವಸ್ಥೆಯನ್ನು ಮಾಡದೆ ಇಲ್ಲಿನ ಪುರಸಭೆ ಅಧಿಕಾರಿಗಳು ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಸಂತೃಸ್ತ ಕುಟುಂಬಗಳಿಗೆ ತಲಾ 1 ಗುಂಟೆಯಂತೆ ನಿವೇಶನಗಳನ್ನು ಹಂಚಿಕೆ ಮಾಡಿ, ಪ.ಜಾ, ಪ.ಪಂ ದವರಿಗೆ ಸರ್ಕಾರದ ಯೋಜನೆಯಲ್ಲಿ ಬರುವ ಮನೆಗಳನ್ನು ಮಂಜೂರಿ ಮಾಡಿ ಇಲ್ಲಿನ ಕೊರಗ / ಕೊರಾರ ಕುಟುಂಬಗಳಿಗೆ ಶಾಶ್ವತ ಮತ್ತು ವ್ಯವಸ್ಥಿತವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಜಿಲ್ಲಾ ಕೊರಗ ಹಿತರಕ್ಷಣಾ ವೇದಿಕೆಯ ರವೀಂದ್ರ ಮಂಗಳ, ರಾಜ್ಯ ಪ.ಜಾ.ಪ.ಪಂ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಸಂಘದ ಅಧ್ಯಕ್ಷ ತುಳಸಿದಾಸ ಪಾವಸ್ಕರ ಸೇರಿದಂತೆ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು.







