ಸರ್ಕಾರಿ ಬ್ಯಾಂಕ್ಗಳ ಖಾಸಗೀಕರಣದಿಂದ ಆಗುವ ಅನಾಹುತಗಳನ್ನು ವಿವರಿಸಿ ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಫೆ.24: ಕೇಂದ್ರ ಸರಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದು ಮತ್ತು ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜಾರಿಗೆ ತರುತ್ತಿರುವ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್ ವಲಯವನ್ನು ಗುರಿ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ಆರ್ಥಿಕತೆ ಚೇತರಿಸಿಕೊಳ್ಳಲು ಬ್ಯಾಂಕ್ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ ಮತ್ತು ಆಧಾರರಹಿತ ಆರ್ಥಿಕ ವಿಧಾನವಾಗಿದೆ ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ ಬಂಡವಾಳ ಹಿಂತೆಗೆತವನ್ನು ಘೋಷಿಸಿದ್ದು, ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಬ್ಯಾಂಕಿಂಗ್ ವಲಯದ ಹಿರಿಯರು ಈ ಅನಾಹುತಕಾರಿ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
1969ರಲ್ಲಿ ಇಂದಿರಾಗಾಂಧಿ ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್ಗಳು ದೇಶದಲ್ಲಿ ಪ್ರಗತಿಪರವಾದ, ಪ್ರೋತ್ಸಾಹದಾಯಕ ಪಾತ್ರ ನಿರ್ವಹಿಸಿವೆ. ಜನ ಸಾಮಾನ್ಯರ ಪ್ರಗತಿ ಮತ್ತು ದೇಶದ ಆರ್ಥಿಕ ಬೆಳವಣಿಗೆ ನಡುವೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ಕೊಂಡಿಯಾಗಿ ಕೆಲಸ ಮಾಡಿವೆ. ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ ಮತ್ತು ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65,000 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಕಂಡರೆ ನಿಮಗೆ ಏಕೆ ಆಗುವುದಿಲ್ಲವೋ ಗೊತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ವರ್ಷ 10 ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಘೋಷಿಸಿದಿರಿ. ನಮ್ಮ ಕಾರ್ಪೊರೇಷನ್ ಬ್ಯಾಂಕನ್ನು ಯೂನಿಯನ್ ಬ್ಯಾಂಕ್ನೊಂದಿಗೆ, ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್ನೊಂದಿಗೆ, ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಿದಿರಿ. ಇದರಿಂದ ರಾಷ್ಟ್ರೀಕೃತ ಬ್ಯಾಂಕ್ಗಳ ಸಂಖ್ಯೆ 27 ರಿಂದ 12 ಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ.
ಇದರಿಂದ ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗಗಳು ನಷ್ಟವಾದವು. ಹೀಗೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ. ಖಾಸಗಿ ಒಡೆತನದ ಬ್ಯಾಂಕ್ಗಳ ಕಾರ್ಯನಿರ್ವಹಣೆ ಶೈಲಿ ಮತ್ತು ಖಾಸಗಿ ಬ್ಯಾಂಕ್ಗಳ ಕಾರ್ಯನಿರ್ವಹಿಸದ ಸ್ವತ್ತುಗಳೇ ಆ ಬ್ಯಾಂಕ್ಗಳ ದಿವಾಳಿತನಕ್ಕೆ ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಲಕ್ಷಾಂತರ ಠೇವಣಿದಾರರರಿಂದ ಸಂಗ್ರಹಿಸಿದ ಸಾವಿರಾರು ಕೋಟಿ ಠೇವಣಿ ಹಣವನ್ನು ಕಾರ್ಪೊರೇಟ್ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಮೂಲಕ ಠೇವಣಿದಾರರ ಉಳಿತಾಯದ ಹಣವನ್ನು ಮುಳುಗಿಸಲಾಗುತ್ತಿದೆ. ಈ ಎಲ್ಲ ಕಾರಣಕ್ಕೆ ರಾಜ್ಯದ ಖಾಸಗಿ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿದ್ದ ಠೇವಣಿದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರಕಾರವೇ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.
ಖಾಸಗಿ ಬ್ಯಾಂಕ್ಗಳ ದಿವಾಳಿಕೋರತನದ ಕೆಟ್ಟ ಪರಿಣಾಮಗಳು ಸಮಾಜದ ಮೇಲೆ ಆಗುತ್ತಿವೆ. ಹೀಗಾಗಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ದೇಶದ ತೆರಿಗೆದಾರರ ಹಣ ಮತ್ತು ಸಂಪತ್ತನ್ನು ಮುಲಾಜಿಲ್ಲದೆ ಖಾಸಗಿಯವರ ಮಡಿಲಿಗೆ ಅರ್ಪಿಸಲು ಹೋಗುತ್ತಿರುವುದು ದೇಶದ ಜನರಿಗೆ ಮಾಡುವ ವಂಚನೆ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾರ್ವಜನಿಕ ವಲಯದ ಎಸ್ಬಿಐ ಅಂಡ್ ಎಲ್ಐಸಿಗಳಲ್ಲಿ ಇದ್ದ ಸಾರ್ವಜನಿಕರ ಹಣ ಮತ್ತು ಠೇವಣಿಯಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬ್ಯಾಂಕ್ಗಳನ್ನು ಕಾಪಾಡಿ ಆರ್ಥಿಕತೆಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿವೆ. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರವೇ ಹಲವಾರು ಮಂದಿ ವಂಚಕರು ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕ್ಗಳಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶಕ್ಕೆ ವಂಚಿಸಿ ದೇಶ ತೊರೆದ ಒಬ್ಬೇ ಒಬ್ಬ ದೊಡ್ಡ ವಂಚಕನನ್ನೂ ಬಂಧಿಸಿ ವಾಪಾಸ್ ಕರೆತರಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ ಬಂಡವಾಳ ಹಿಂತೆಗೆಯುವುದು ಮತ್ತು ಇವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಆಗುವ ಅಡ್ಡ ಪರಿಣಾಮಗಳು ಗೊತ್ತಿದ್ದೂ ಸರಕಾರ ಜಾಣ ಕುರುಡುತನ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾವಿರಾರು ಕೋಟಿ ಸಾಲವನ್ನು ದೊಡ್ಡ ಉದ್ಯಮಿಗಳಿಗೆ ಕೊಟ್ಟು ಅವರು ದೇಶ ಬಿಟ್ಟು ಹೋಗುವವರೆಗೂ ಅವರಿಗೆ ಕೆಂಪು ಹಾಸು ಹಾಸುವ ಖಾಸಗಿ ಬ್ಯಾಂಕ್ಗಳು ಸಣ್ಣ ಪುಟ್ಟ ಸಾಲಗಾರರನ್ನು ಮಾತ್ರ ಆತ್ಮಹತ್ಯೆಗೆ ದೂಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ.
ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ ವರ್ಗಗಳ ಪಾಲಿನ ಉದ್ಯೋಗಾವಕಾಶಗಳನ್ನೂ ಕಿತ್ತುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜತೆಗೆ ಹಿಂದುಳಿದ ಮತ್ತು ಬಡ, ದಲಿತ ಸಮುದಾಯಗಳ ಆರ್ಥಿಕ ಚಲನೆಗೆ ಅಡ್ಡವಾಗಿ ದೊಡ್ಡ ಗೋಡೆ ಕಟ್ಟುತ್ತಿದ್ದೀರಿ. ಖಾಸಗಿ ಬ್ಯಾಂಕ್ಗಳು ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವ ಸಲುವಾಗಿ ಡಿಜಟಲ್ ಬ್ಯಾಂಕಿಂಗ್ಗೆ ಜಾರುತ್ತಿವೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಂತಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಗ್ರಾಮೀಣ ಜನ ಖಾಸಗಿ ಫೈನಾನ್ಸಿಯರ್ಗಳ ಹಿಡಿತಕ್ಕೆ ಸಿಕ್ಕಿ ನರಳುವಂತೆ ಮಾಡುತ್ತಿದ್ದೀರಿ. ಆದುದರಿಂದ, ಸಾರ್ವಜನಿಕ ಬ್ಯಾಂಕ್ಗಳ ಖಾಸಗೀಕರಣದ ಹಿಂದೆ ಮೇಲ್ಜಾತಿಗಳ, ಉನ್ನತ ಶ್ರೀಮಂತ ವರ್ಗದ ಮತ್ತು ಕಾರ್ಪೊರೇಟ್ ಶ್ರೀಮಂತರ ಹಿತಾಸಕ್ತಿ ಕಾಯುವ, ಕಾರ್ಪೊರೇಟ್ ವಂಚಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಈ ದೇಶದ ದುಡಿಯುವ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವ, ಬಡ ಮತ್ತು ಮಧ್ಯಮ ವರ್ಗದ ಜನ ಸಮಾನ್ಯರ ಬದುಕಿಗೆ ಮಾರಕ ಆಗಿರುವ, ದೇಶದ ಆರ್ಥಿಕತೆಯನ್ನು ನಾಶ ಮಾಡುವಂಥಾ ಬ್ಯಾಂಕ್ಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತದ ಯೋಜನೆಯನ್ನು ಕೈ ಬಿಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.







