ಇದು ಯುದ್ಧವಲ್ಲ, ವಿಶೇಷ ಕಾರ್ಯಾಚರಣೆ: ವಿಶ್ವಸಂಸ್ಥೆಯಲ್ಲಿ ರಷ್ಯಾ ಪ್ರತಿನಿಧಿ ಹೇಳಿಕೆ
"ರಷ್ಯಾ ಕಂಡು ಕೇಳರಿಯದ ಕಠಿಣ ನಿರ್ಬಂಧ ಜಾರಿ ಮಾಡುತ್ತೇವೆ" ಎಂದ ಯುರೋಪಿಯನ್ ಯೂನಿಯನ್

ಬ್ರಸೆಲ್ಸ್, ಫೆ.24: ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಶ್ಯಾದ ವಿರುದ್ಧ ಇದುವರೆಗಿನ ಅತ್ಯಂತ ಕಠಿಣ ಮತ್ತು ಬಲಿಷ್ಟ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ಗುರುವಾರ ಹೇಳಿದೆ. ಯುರೋಪ್ನಲ್ಲಿ ಸ್ಥಿರತೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ, ನೆಮ್ಮದಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ರಶ್ಯಾ ಅಧ್ಯಕ್ಷ ಪುಟಿನ್ರನ್ನು ಹೊಣೆಗಾರರನ್ನಾಗಿಸಲಿದ್ದೇವೆ . ಬೃಹತ್ ಮತ್ತು ಉದ್ದೇಶಿತ ನಿರ್ಬಂಧಗಳ ಪ್ಯಾಕೇಜ್ ಅನ್ನು ಯುರೋಪಿಯನ್ ಮುಖಂಡರಿಗೆ ಅನುಮೋದನೆಗಾಗಿ ರವಾನಿಸಲಿದ್ದೇವೆ ಎಂದು ಯುರೋಪಿಯನ್ ಕಮಿಷನ್ನ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲಿಯೆನ್ ಹೇಳಿದ್ದಾರೆ.
ಅನುಮೋದನೆ ದೊರೆತರೆ, ಈ ನಿರ್ಬಂಧಗಳ ಮೂಲಕ ರಶ್ಯಾದ ತಂತ್ರಜ್ಞಾನ ಮತ್ತು ಶೇರು ಮಾರುಕಟ್ಟೆ ವ್ಯವಹಾರಕ್ಕೆ ತೀವ್ರ ಧಕ್ಕೆಯಾಗಿ ರಶ್ಯಾದ ಆರ್ಥಿಕತೆಯ ಮೂಲವನ್ನು ಮತ್ತು ಆಧುನೀಕರಣದ ಸಾಮರ್ಥ್ಯವನ್ನು ದುರ್ಬಲಗೊಳಿಸಲಿದೆ. ರಶ್ಯಾದ ಬ್ಯಾಂಕ್ಗಳು ಯುರೋಪ್ನ ಆರ್ಥಿಕ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ಅಡ್ಡಿಯಾಗಲಿದೆ. ನಮ್ಮ ಮಿತ್ರರಾದ ಅಮೆರಿಕ, ಬ್ರಿಟನ್, ಕೆನಡಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳೂ ನಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದವರು ಹೇಳಿದ್ದಾರೆ.
ಪ್ರಮುಖ ಪರಮಾಣು ಶಕ್ತ ದೇಶವೊಂದು ತನ್ನ ನೆರೆಯ ದೇಶದ ಮೇಲೆ ಆಕ್ರಮಣ ನಡೆಸಿದೆ ಮತ್ತು ರಕ್ಷಣೆಗೆ ಯಾರಾದರೂ ಬಂದರೆ ಪ್ರತೀಕಾರ ಕ್ರಮದ ಬೆದರಿಕೆ ಒಡ್ಡಿದೆ. ಇದು ಅಂತರಾಷ್ಟ್ರೀಯ ಕಾನೂನಿನ ಬೃಹತ್ ಉಲ್ಲಂಘನೆ ಮಾತ್ರವಲ್ಲ, ಮಾನವ ಸಹಬಾಳ್ವೆಯ ಮೂಲ ತತ್ವದ ಉಲ್ಲಂಘನೆಯೂ ಆಗಿದೆ. ಇದರಿಂದ ಜನರ ಪ್ರಾಣವಷ್ಟೇ ಅಲ್ಲ, ಇತರ ಹಲವು ನಾಶನಷ್ಟಗಳು ಸಂಭವಿಸಲಿದ್ದು ಇದನ್ನು ವಿರೋಧಿಸಿ ಯುರೋಪಿಯನ್ ಯೂನಿಯನ್ ಇದುವರೆಗೆ ಕಂಡು ಕೇಳರಿಯದಷ್ಟು ಕಠಿಣ ನಿರ್ಬಂಧ ಜಾರಿಗೊಳಿಸಲಿದೆ ಎಂದು ಯುರೋಪಿಯನ್ ಯೂನಿಯನ್ನ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ.
ಈ ಮಧ್ಯೆ, ಗುರುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿಗೆ ದೂರವಾಣಿ ಕರೆ ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಶ್ಯಾದ ಆಕ್ರಮಣಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ವಾಗ್ದಾನ ನೀಡಿರುವುದಾಗಿ ಉಕ್ರೇನ್ ಸರಕಾರ ಹೇಳಿದೆ.
ಅಂತಿಮ ಹಂತದವರೆಗೂ ರಾಜತಾಂತ್ರಿಕ ರೀತಿಯ ಪರಿಹಾರಕ್ಕೆ ಪ್ರಯತ್ನಿಸಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್, ರಶ್ಯಾದ ಸೈನಿಕ ಕಾರ್ಯಾಚರಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ನಾವು ಉಕ್ರೇನ್ನೊಂದಿಗೆ ಇದ್ದೇವೆ ಎಂದಿದ್ದಾರೆ. ರಶ್ಯಾದ ಆಕ್ರಮಣ ಅಂತರಾಷ್ಟೀಯ ಕಾನೂನಿನ ನಿರ್ಲಜ್ಜ ಉಲ್ಲಂಘನೆಯಾಗಿದೆ ಎಂದು ಜರ್ಮನ್ನ ಛಾನ್ಸಲರ್ ಒಲಾಫ್ ಶಾಲ್ಝ್ ಖಂಡಿಸಿದ್ದಾರೆ.
ನಾಗರಿಕ ವಿಮಾನಯಾನಗಳ ಸಂಚಾರಕ್ಕೆ ತೀವ್ರ ಅಪಾಯವಿದೆ ಎಂದು ಯುರೋಪಿಯನ್ ಯೂನಿಯನ್ ವಾಯುಯಾನ ಸುರಕ್ಷಾ ಸಮಿತಿ ಎಚ್ಚರಿಕೆ ನೀಡಿದೆ.
ಈ ಮಧ್ಯೆ, ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದ ಕುರಿತು ಚರ್ಚಿಸಲು ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಸಾಮಾನ್ಯ ತುರ್ತು ಸಭೆ ಗುರುವಾರ ನಡೆದಿದೆ. ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಶಾಂತಿ ಉಪಕ್ರಮಕ್ಕೆ ಒಂದು ಅವಕಾಶ ನೀಡಿ ಎಂದು ರಶ್ಯಾವನ್ನು ಉದ್ದೇಶಿಸಿ ಕರೆ ನೀಡಿದರು.
ಯುದ್ಧವಲ್ಲ, ವಿಶೇಷ ಕಾರ್ಯಾಚರಣೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ರಶ್ಯಾ ಪ್ರತಿನಿಧಿ ಸ್ಪಷ್ಟನೆ
ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದ ಕುರಿತು ಚರ್ಚಿಸಲು ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಸಾಮಾನ್ಯ ತುರ್ತು ಸಭೆ ಗುರುವಾರ ನಡೆದಿದೆ. ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಉಕ್ರೇನ್ ಮೇಲಿನ ಆಕ್ರಮಣದಿಂದ ಹಿಂದೆ ಸರಿದು ಶಾಂತಿ ಉಪಕ್ರಮಕ್ಕೆ ಒಂದು ಅವಕಾಶ ನೀಡಿ ಎಂದು ರಶ್ಯಾವನ್ನು ಉದ್ದೇಶಿಸಿ ಕರೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಗೆ ರಶ್ಯಾದ ರಾಯಭಾರಿ ಸೆರ್ಗೈ ಕಿಸ್ಟಿಟ್ಸ್ಯಾ, ರಶ್ಯಾ ಅಧ್ಯಕ್ಷ ಪುಟಿನ್ ಯುದ್ಧಕ್ಕೆ ಕರೆ ನೀಡಿದ್ದಾರೆ. ಹಿಂದೆ ಸರಿಯುವಂತೆ ಸೂಚಿಸಲು ಈಗ ಕಾಲ ಮಿಂಚಿದೆ ಎಂದರು. ಸೆರ್ಗೈ ಕಿಸ್ಟಿಟ್ಸ್ಯಾ ತಮ್ಮ ಭಾಷಣದಲ್ಲಿ ಪುಟಿನ್ ಯುದ್ಧಕ್ಕೆ ಕರೆ ನೀಡಿದ್ದಾರೆ ಎಂದು ಹಲವು ಬಾರಿ ಉಲ್ಲೇಖಿಸಿದರು. ಆ ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ರಶ್ಯಾದ ಕಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಝ್ಯಾ ‘ಇದು ಯುದ್ಧವಲ್ಲ, ಪುಟಿನ್ ಅವರು ಉಕ್ರೇನ್ನ ಡೊನ್ಬಾಸ್ ಪ್ರಾಂತದಲ್ಲಿ ವಿಶೇಷ ಕಾರ್ಯಾಚರಣೆಗೆ ಆದೇಶಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಶ್ಯಾವನ್ನು ದುರ್ಬಲಗೊಳಿಸಲು ನಡೆಯುತ್ತಿರುವ ರಾಜಕೀಯ ಆಟದಲ್ಲಿ ಡೊನ್ಬಾಸ್ ಜನರನ್ನು ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ಪುಟಿನ್ ಅವರು ಪೂರ್ವ ಉಕ್ರೇನ್ನಲ್ಲಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ವಿವರ ಈಗ ತಮ್ಮ ಬಳಿಯಿಲ್ಲ ಎಂದರು.
ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ತ್ರಿಮೂರ್ತಿ, ಉದ್ವಿಗ್ನತೆ ಉಪಶಮನಗೊಳಿಸುವ ಕರೆಗೆ ಮನ್ನಣೆ ದೊರಕದಿರುವುದನ್ನು ವಿಷಾದದ ಸಹಿತ ಗಮನಿಸಲಾಗಿದೆ ಎಂದರು. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಉಪಕ್ರಮಗಳಿಂದ ದೂರ ಇರುವಂತೆ ಮತ್ತು ಉದ್ವಿಗ್ನತೆ ಶಮನಕ್ಕೆ ಕ್ರಮ ಕೈಗೊಳ್ಳುವಂತೆ ನಾವು ಮನವಿ ಮಾಡಿದ್ದೆವು. ಎಲ್ಲಾ ದೇಶಗಳ ನ್ಯಾಯಬದ್ಧ ಭದ್ರತಾ ಹಿತಾಸಕ್ತಿಯನ್ನು ಸಂಪೂರ್ಣ ಮಾನ್ಯ ಮಾಡಬೇಕು . ಯಾವುದೇ ವಿವಾದವನ್ನೂ ಅಂತರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮತ್ತು ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥಪಡಿಸಬೇಕು ಎಂದರು.
ಅಮೆರಿಕದ ಪ್ರತಿನಿಧಿ ಲಿಂಡಾ ಥೋಮಸ್ ಗ್ರೀನ್ಫೀಲ್ಡ್ ಮಾತನಾಡಿ, ರಶ್ಯಾದ ಕಪಟ ಮಿಲಿಟರಿ ಕವಾಯತು, ಸೈಬರ್ ದಾಳಿ, ಸುಳ್ಳು ಮಾಹಿತಿಯ ಬಗ್ಗೆ ನಾವು ಮೊದಲೇ ಎಚ್ಚರಿಸಿದ್ದೆವು. ಈಗ, ಶಾಂತಿಯ ಮಾರ್ಗದ ಮೂಲಕ ಪರಿಹಾರ ರೂಪಿಸಲು ನಾವು ಇಲ್ಲಿ ಸಭೆ ಸೇರಿದ ಸಂದರ್ಭದಲ್ಲೇ ಪುಟಿನ್ ಯುದ್ಧದ ಸಂದೇಶ ಸಾರಿದ್ದಾರೆ. ಶುಕ್ರವಾರ ಭದ್ರತಾ ಸಮಿತಿಯಲ್ಲಿ ನಿರ್ಣಯವನ್ನು ಮಂಡಿಸಬೇಕೆಂದು ಆಗ್ರಹಿಸಿದರು. ಬ್ರಿಟನ್ನ ಪ್ರತಿನಿಧಿ ಬಾರ್ಬರಾ ವುಡ್ಲ್ಯಾಂಡ್ ಮಾತನಾಡಿ, ನಿರ್ಣಯ ಮಂಡನೆಯ ಆಗ್ರಹಕ್ಕೆ ಬ್ರಿಟನ್ನ ಬೆಂಬಲವಿದೆ ಎಂದರು. ಫ್ರಾನ್ಸ್ ಕೂಡಾ ಇದೇ ನಿಲುವು ತಳೆದಿದೆ ಎಂದು ಫ್ರಾನ್ಸ್ನ ಪ್ರತಿನಿಧಿ ಹೇಳಿದರು.
ನಾನು ಈ ಯುದ್ಧದ ವಿರೋಧಿ: ಅಲೆಕ್ಸಿ ನವಾಲ್ನಿ
ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣವನ್ನು ತಾನು ವಿರೋಧಿಸುವುದಾಗಿ ಬಂಧನದಲ್ಲಿರುವ ರಶ್ಯಾದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿ ಗುರುವಾರ ಹೇಳಿದ್ದಾರೆ.
ಕೈದಿಗಳ ಸಮವಸ್ತ್ರ ಧರಿಸಿ ಜೈಲಿನಲ್ಲಿದ್ದುಕೊಂಡೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ನವಾಲ್ನಿ, ರಶ್ಯಾದ ಜನತೆಯ ಹಣ ಕದ್ದಿರುವುದನ್ನು ಮುಚ್ಚಿಡಲು ಮತ್ತು ದೇಶದಲ್ಲಿರುವ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಈ ಯುದ್ಧವನ್ನು ಆರಂಭಿಸಲಾಗಿದೆ ಎಂದರು.
ಯುದ್ಧದಿಂದ ಭಾರೀ ಸಾವು ನೋವು ಸಂಭವಿಸುತ್ತದೆ ಮತ್ತು ಬಡತನದ ಬವಣೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ನವಾಲ್ನಿ ಹೇಳಿದ್ದಾರೆ. ವಿಷಪ್ರಾಶನಕ್ಕೆ ಒಳಗಾಗಿ ಚೇತರಿಸಿಕೊಂಡಿದ್ದ ನವಾಲ್ನಿಯನ್ನು ಸುಳ್ಳು ಆರೋಪದ ಮೇಲೆ ಬಂಧಿಸಿ ಒಂದು ವರ್ಷದಿಂದ ಜೈಲಿನಲ್ಲಿರಿಸಲಾಗಿದೆ. ಉಕ್ರೇನ್ ಮೇಲಿನ ರಶ್ಯಾ ದಾಳಿ ಆರಂಭವಾದ ದಿನದಂದೇ ನವಾಲ್ನಿಯ ವಿರುದ್ಧದ ಪ್ರಕರಣದ ವಿಚಾರಣೆಯೂ ಆರಂಭಗೊಂಡಿರುವುದು ಗಮನಾರ್ಹವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







