ಉಕ್ರೇನ್ ನಲ್ಲಿ ಉಡುಪಿ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಸುರಕ್ಷಿತ
"ವೈದ್ಯಕೀಯ ವಿದ್ಯಾರ್ಥಿ ಮೃಣಾಲ್ ಹಾಸ್ಟೆಲ್ನಲ್ಲಿ ಸುರಕ್ಷಿತ"
ಉಡುಪಿ, ಫೆ.25: ಯುದ್ಧ ಬಾಧಿತ ಉಕ್ರೇನ್ ನಲ್ಲಿ ಉಡುಪಿ ಜಿಲ್ಲೆಯ ನಾಲ್ವರು ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಕಲಿಯುತ್ತಿರುವುದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ರೋಹನ್, ಮೃಣಾಲ್, ಮೂಡುತೋನ್ಸೆಯ ಮೆಲ್ವಿನ್ ಫೆರ್ನಾಂಡಿಸ್ ಎಂಬವರ ಪುತ್ರ ಗ್ಲೆನ್ವಿಲ್ ಫೆರ್ನಾಂಡಿಸ್ ಹಾಗೂ ವಿಲಿಯಮ್ ಡಿಸೋಜರ ಪುತ್ರಿ ಆ್ಯನಿಫ್ರೆಡ್ ಡಿಸೋಜ ಸಹ ಯುದ್ಧ ಬಾಧಿತ ಉಕ್ರೇನಿನಲ್ಲಿ ಸಿಲುಕಿಕೊಂಡಿಕೊಂಡಿದ್ದಾರೆ.
ಮೃಣಾಲ್ ಸುರಕ್ಷಿತ
ಕಳೆದ ಡಿಸೆಂಬರ್ ತಿಂಗಳಲ್ಲಷ್ಟೇ ಎಂಬಿಬಿಎಸ್ ಕಲಿಯಲೆಂದು ಉಕ್ರೇನಿನ ಖಾರ್ಕೀವ್ನಲ್ಲಿರುವ ನೇಶನಲ್ ಮೆಡಿಕಲ್ ಯುನಿವರ್ಸಿಟಿಗೆ ಸೇರ್ಪಡೆಗೊಂಡಿರುವ ತನ್ನ ಮಗ ಮೃಣಾಲ್ ತಾನಿರುವ ಹಾಸ್ಟೆಲ್ನಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾನೆ ಎಂದು ಆತನ ತಂದೆ ರಾಜೇಶ್ ತಿಳಿಸಿದ್ದಾರೆ.
ಉದ್ಯಾವರ ಕುತ್ಪಾಡಿಯ ಎಸ್ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ರಾಜೇಶ್ ಅವರನ್ನು ‘ವಾರ್ತಾಭಾರತಿ’ ಸಂಪರ್ಕಿಸಿದಾಗ ಹೆಚ್ಚುತ್ತಿರುವ ಆತಂಕದ ನಡುವೆಯೂ ಮಗನ ಸುರಕ್ಷತೆಯ ಕುರಿತು ಸಮಾಧಾನ ವ್ಯಕ್ತಪಡಿಸಿದರು.
ಉಡುಪಿ ಕುಕ್ಕಿಕಟ್ಟೆಯ ಓರ್ವ ವಿದ್ಯಾರ್ಥಿ ಸಹಿತ ತಮಿಳುನಾಡು, ಪಂಜಾಬ್ ಸೇರಿದಂತೆ 10-12 ಮಂದಿ ಭಾರತೀಯ ವಿದ್ಯಾರ್ಥಿಗಳು ಈ ಹಾಸ್ಟೆಲ್ನಲ್ಲಿದ್ದಾರೆ. ಎಲ್ಲರೂ ಈಗ ಹಾಸ್ಟೆಲ್ನಲ್ಲಿದ್ದಾರೆ. ಹೊರಗೆ ಮಿಲಿಟರಿ ಪಡೆ ಇದೆ ಎಂದು ಆತ ತಿಳಿಸಿದ್ದಾನೆ ಎಂದರು.
ಕಳೆದ ರಾತ್ರಿ ಉಕ್ರೇನ್-ಪೊಲಂಡ್ ಗಡಿ ತೆರೆದು ಅಲ್ಲಿರುವವರನ್ನು ಪೊಲಂಡ್ಗೆ ಕಳುಹಿಸುವ ಮಾಹಿತಿ ಸಿಕ್ಕಿತಾದರೂ, ಅದು ಯಶಸ್ವಿಯಾಗಲಿಲ್ಲ. ಈಗಲೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಇಲ್ಲಿನ ಕೆಲವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವೇಳೆ ವಿಮಾನ ನಿಲ್ದಾಣವನ್ನೇ ಮುಚ್ಚಿದ್ದರಿಂದ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ಮೃಣಾಲ್ ತಿಳಿಸಿದ್ದಾನೆ ಎಂದರು.
ಡಿಸೆಂಬರ್ನಲ್ಲಿ ಮೃಣಾಲ್ ಉಕ್ರೇನಿಗೆ ತೆರಳಿದ್ದರೂ, ಕೋವಿಡ್ ಹಾಗೂ ಇತರ ಕಾರಣಗಳಿಗಾಗಿ ಕ್ಲಾಸ್ಗಳು ಇನ್ನೂ ಪ್ರಾರಂಭಗೊಂಡಿರಲಿಲ್ಲ. ಆತನ ಅಡ್ಮಿಷನ್ ಪ್ರಕ್ರಿಯೆ ಮಾತ್ರ ಮುಗಿದಿದೆ, ಕ್ಲಾಸ್ಗಳು ಇನ್ನೂ ಪ್ರಾರಂಭಗೊಂಡಿರಲಿಲ್ಲ ಎಂದು ರಾಜೇಶ್ ತಿಳಿಸಿದರು.
ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಮುಂದಿನ ವಾರ ಆತ ಬರುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ಪರಿಸ್ಥಿತಿ ನೋಡಿ ತಾಯ್ನಿಡಿಗೆ ಮರಳುವ ಯೋಜನೆ ಇದೆ. ಊರಿಗೆ ಮರಳಿದ ಬಳಿಕ ಮತ್ತೆ ಅಲ್ಲಿಗೆ ಹಿಂದಿರುಗುವ ಬಗ್ಗೆ ಅಲ್ಲಿನ ಪರಿಸ್ಥಿತಿಯ ನೋಡಿ ನಿರ್ಧರಿಸಲಾಗುವುದು ಎಂದು ತನ್ನ ಏಕೈಕ ಪುತ್ರನ ಬಗ್ಗೆ ರಾಜೇಶ್ ತಿಳಿಸಿದರು.
ರೋಹನ್ ಸುರಕ್ಷಿತ: ಇದೇ ವೇಳೆ ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ನಲ್ಲಿ ಓದುತ್ತಿರುವ ರೋಹನ್ ಬಾಗ್ಲಿ ಸುರಕ್ಷಿತವಾಗಿರುವುದಾಗಿ ಆತನ ತಂದೆ ಬ್ರಹ್ಮಾವರ ವಿಜ್ಞಾನ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ್ ತಿಳಿಸಿದ್ದಾರೆ. ಅವರನ್ನೆಲ್ಲಾ ಬಂಕರ್ಗಳಲ್ಲಿ ಇರಿಸಿದ್ದಾಗಿ ಆತ ತಿಳಿಸಿದ್ದಾನೆ ಎಂದವರು ಹೇಳಿದ್ದಾರೆ.