ಆಕ್ಷೇಪಾರ್ಹ ಪೋಸ್ಟ್ ಹಾಕಿದ 'ಮಂಗಳೂರು ಮುಸ್ಲಿಂ' ಹೆಸರಿನ ಫೇಸ್ಬುಕ್ ಖಾತೆ ಬ್ಲಾಕ್ಗೆ ಕ್ರಮ: ಕಮಿಷನರ್ ಶಶಿಕುಮಾರ್

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು, ಫೆ.25: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡಿದ Mangalore Muslims ಹೆಸರಿನ ಫೇಸ್ಬುಕ್ ಖಾತೆಯನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಆ ಖಾತೆಯ ಕುರಿತು ಫೇಸ್ಬುಕ್ನವರಿಂದ ಮಾಹಿತಿ ಕೇಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಖಾತೆಯ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆ ಖಾತೆಗೆ 'ಲೈಕ್' ಹಾಕಿದ ಮಣಿಪಾಲ ಮತ್ತು ಮುಲ್ಕಿಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಲಾಗಿದೆ. ಆದರೆ ಅವರು ಆಕ್ಷೇಪಾರ್ಹ ಪೋಸ್ಟ್ಗೆ ಲೈಕ್ ಮಾಡಿಲ್ಲ. ಬದಲಾಗಿ ಆ ಖಾತೆಯ ಐಕಾನ್ಗೆ (ಲೋಗೋ) ಲೈಕ್ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಅವರನ್ನು ಬಿಡುಗಡೆ ಮಾಡಲಾಗಿದೆ. 2016ರಲ್ಲಿ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿಯೂ ಇದೇ ರೀತಿಯ ಹೆಸರನ್ನು ಹೋಲುವ ಫೇಸ್ಬುಕ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿತ್ತು. ಅನಂತರ ನ್ಯಾಯಾಲಯದ ಅನುಮತಿ ಪಡೆದು ಆ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಫೇಸ್ಬುಕ್ ಖಾತೆಯ ಹೆಸರಿಗೂ ಈ ಹಿಂದಿನ ಖಾತೆಯ ಹೆಸರಿಗೂ ಒಂದು ಅಕ್ಷರದಲ್ಲಿ ಮಾತ್ರ ವ್ಯತ್ಯಾಸವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಬೆದರಿಕೆ: ಅಗತ್ಯ ಕ್ರಮ
'ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಬುರ್ಖಾ ಹಾಕಿಕೊಂಡು ಸಾರ್ವಜನಿಕರ ಸ್ಥಳಗಳು, ಮಾಲ್ಗಳಿಗೆ ಬರಬಾರದು, ಅದನ್ನು ಹೆತ್ತವರು ತಡೆಯಬೇಕು. ಅವರು ತಡೆಯದಿದ್ದರೆ ನಾವೇ ತಡೆಯುತ್ತೇವೆ' ಎಂಬುದಾಗಿ ಎಂಡಿಎಫ್ (ಮುಸ್ಲಿಂ ಡಿಫೆನ್ಸ್ ಫೋರ್ಸ್) ಎಂಬ ವಾಟ್ಸಪ್ ಗ್ರೂಪ್ನಲ್ಲಿ ಬೆದರಿಕೆ ಹಾಕಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಡಿಸಿಪಿಯವರಿಗೆ ಸೂಚನೆ ನೀಡಿದ್ದೇನೆ. ಬೆದರಿಕೆ ಮಾತ್ರವಲ್ಲದೆ ಇತರ ಆಕ್ಷೇಪಾರ್ಹ ವಿಚಾರಗಳು ಕೂಡ ಈ ಗ್ರೂಪ್ನಲ್ಲಿರುವುದು ಗೊತ್ತಾಗಿದೆ. ವರದಿ ಪಡೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
'ಸಾರ್ವಜನಿಕರಲ್ಲಿ ಆಂತಕ ಬೇಡ'
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ವಿಶೇಷ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಹ ಆಕ್ಷೇಪಾರ್ಹ ಪೋಸ್ಟ್ಗಳು, ಅದನ್ನು ಲೈಕ್ ಮಾಡುವವರು, ಶೇರ್ ಮಾಡುವವರ ವಿರುದ್ಧ ಮಾತ್ರ ನಿಗಾ ವಹಿಸಲಾಗುತ್ತಿದೆ. ಹಿಂದೆಯೂ ಪೊಲೀಸ್ ಪೊಲೀಸ್ ಇಲಾಖೆಯಲ್ಲಿ ಇಂತಹ ಶಾಂತಿ ಕದಡುವವರ ಮೇಲೆ ನಿಗಾ ಇರಿಸಲಾಗುತ್ತಿತ್ತು. ಇದೀಗ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಬಳಿಕ ಅತ್ಯಂತ ಸುವ್ಯವಸ್ಥಿತವಾಗಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಿದ್ದು, ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಇಲಾಖೆಯ ತಾಂತ್ರಿಕ ಸಿಬ್ಬಂದಿ ಫೇಸ್ಬುಕ್, ಟ್ವಿಟರ್, ಟ್ರೋಲ್ ಪೇಜ್, ವಾಟ್ಸಾಪ್ ಗುಂಪುಗಳ ಮೇಲೆ ದಿನದ 24 ಗಂಟೆಯೂ ನಿಗಾ ಇರಿಸುವ ಕಾರ್ಯ ಮಾಡುತ್ತಿದ್ದಾರೆ.
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.