ಉಡುಪಿ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
![ಉಡುಪಿ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ಉಡುಪಿ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ](https://www.varthabharati.in/sites/default/files/images/articles/2022/02/26/326316-1645891969.jpeg)
ಉಡುಪಿ, ಫೆ.26: ರಾಜ್ಯ ಕಟ್ಟಡ ಮತುತಿ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇವರ ಆದೇಶದಂತೆ ಉಡುಪಿ ಆದರ್ಶ ಆಸ್ಪತ್ರೆ ಮೂಲಕ ಪ್ರಿವೆನ್ಟೀವ್ ಹೆಲ್ತಿ ಕೇರ್ ಟ್ರೈನಿಂಗ್ ಅಂಡ್ ಚೆಕ್ಅಪ್ ಯೋಜನೆ ಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಇಂದು ನಗರದ ಬೀಡಿನಗುಡ್ಡೆ ದೇವಾಡಿಗರ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಶಿಬಿರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅದ್ಯಕ್ಷೆ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಗಿರೀಶ್ ಆಂಚನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಶರ್ಮಿಳಾ, ಆದರ್ಶ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.
ಆರೋಗ್ಯ ಶಿಬಿರದ ವೇಳಾಪಟ್ಟಿ: ಫೆ. 27ರಂದು ನಗರದ ಪ್ರಗತಿನಗರ ಅಂಗನವಾಡಿ ಕೇಂದ್ರ ಹಾಗೂ ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ, ಫೆ.28ರಂದು ಕಟಪಾಡಿ ಎಸ್.ವಿ.ಎಸ್ ಶಾಲೆ ಹಾಗೂ ಅಂಬಲಪಾಡಿ ಗ್ರಾಪಂ ಸಭಾಂಗಣದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ನಗರ ಮತ್ತು ತಾಲೂಕಿನ ಎಲ್ಲಾ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರು ಮೂಲ ಗುರುತಿನ ಚೀಟಿ ಹಾಗೂ ಆಧಾರ್ ಗುರುತಿನ ಚೀಟಿಯೊಂದಿಗೆ ಶಿಬಿರದಲ್ಲಿ ಹಾಜರಾಗಬಹುದು.
ಶಿಬಿರದಲ್ಲಿ ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಜೋಡಣೆ ಮಾಡದೆ ಇರುವ ಕಾರ್ಮಿಕರುಗಳಿಗೆ ಅಂಚೆ ಇಲಾಖೆ ವತಿಯಿಂದ ‘ಆಧಾರ್-ಮೊಬೈಲ್ ನಂಬರ್ ಅಪ್ಡೇಟಿಂಗ್’ ಸಹ ಕೈಗೊಳ್ಳಲಾಗುತ್ತಿದ್ದು, ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.