ಚಾಮರಾಜನಗರ: ಕರ್ತವ್ಯಲೋಪ ಆರೋಪ; ನಾಲ್ವರು ಪೊಲೀಸರು ಅಮಾನತು

ಚಾಮರಾಜನಗರ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯ ಎಎಸ್ಐಗಳಾದ ಮಧು ಕುಮಾರ್, ನಾಗರಾಜು ಹಾಗೂ ಕಾನ್ಸ್ಟೇಬಲ್ಗಳಾದ ಗೋಪಾಲ್, ಪರಶಿವಮೂರ್ತಿ ಅಮಾನತುಗೊಂಡವರು.
ಅಪಘಾತ ಪ್ರಕರಣವೊಂದರಲ್ಲಿ ಗಾಯಾಳು ನೀಡಿದ ಆರೋಪಿಯ ವಿವರವನ್ನು ತಿರುಚಿ ಚಾಲಕನ ಹೆಸರನ್ನೇ ಬದಲಾಯಿಸಿದ್ದಾರೆ ಎಂದು ಗಾಯಾಳು ತಂದೆ ಅಂಬಳೆ ಗ್ರಾಮದ ಡಾ.ಲಿಂಗರಾಜು ಪೊಲಿಸ್ ವರಿಷ್ಠಾಧಿಕಾರಿಗಳಿಗೆ ದೂರಿದ್ದರು.
ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು, ದುರ್ನಡತೆ ಹಾಗೂ ಬೇಜವಾಬ್ದಾರಿತನ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಚಾಮರಾಜನಗತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ನಾಲ್ವರನ್ನೂ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
Next Story





