‘ಭವಿಷ್ಯದ ದೃಷ್ಟಿಯಿಂದ ನೀರಿಗೆ ಇಂಗು ಗುಂಡಿಗಳನ್ನು ನಿರ್ಮಿಸಿ’
ರೈತರಿಗೆ ಪದ್ಮಶ್ರೀ ಮಹಾಲಿಂಗ ನಾಯ್ಕ ಸಲಹೆ

ಬ್ರಹ್ಮಾವರ, ಫೆ.27: ಭವಿಷ್ಯದಲ್ಲಿ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಇದನ್ನು ತಪ್ಪಿಸಲು ನಿಮಗಿರುವ ಜಾಗದಲ್ಲೇ ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಚಿಂತಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಬಂಟ್ವಾಳ ಅಡ್ಯನಡ್ಕದ ಮಹಾಲಿಂಗ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ತಾಲೂಕಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಇತರ ಸಹಸಂಸ್ಥೆಗಳ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಗೇರುಬೆಳೆ ಮತ್ತು ನೈಸರ್ಗಿಕ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೃಷಿಯಲ್ಲಿ ಲಾಭ ಮತ್ತು ನಷ್ಟ ಎರಡೂ ಇರುತ್ತದೆ. ಕೃಷಿ ವಿಶೇಷ ಪರಿಶ್ರಮ ವನ್ನು ಬೇಡುತ್ತದೆ. ಮಿಶ್ರಬೆಳೆ ಮೂಲಕ ಕೃಷಿಯಲ್ಲಿ ಲಾಭಗಳಿಸಲು ನಾವು ಪ್ರಯತ್ನಿಸಿದಲ್ಲಿ ಖಂಡಿತವಾಗಿಯೂ ಲಾಭ ಸಿಗುತ್ತದೆ ಎಂದವರು ತಮ್ಮ ಹಲವು ದಶಕಗಳ ಅನುಭವದ ಮೂಲಕ ನುಡಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಿವಮೊಗ್ಗ ಕೃಷಿ ವಿಶ್ವವಿದ್ಯಾ ನಿಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯ್ಕ ಮಾತನಾಡಿ, ಹಿಂದಿನಿಂದ ಕೃಷಿಯನ್ನು ನಂಬಿದವರು ಇಂದೂ ಕೂಡಾ ಕೃಷಿ ಕಾಯಕದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದು, ದೇಶದ ಜನರ ಹಸಿವನ್ನು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಕೃಷಿಕರಿಗೆ ಸುಗಮ ರೀತಿಯ ಯೋಜನೆ, ಸವಲತ್ತು ಗಳು ಮತ್ತು ವೈಜ್ಞಾನಿಕ ಉಪಕರಣಗಳನ್ನು ಸರಕಾರ ಒದಗಿಸುತ್ತಿದೆ. ಯುವಕರು ಹೆಚ್ಚು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ ಲಾಭವನ್ನು ಗಳಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಬಂಟ್ವಾಳ ಅಡ್ಯನಡ್ಕದ ಪ್ರಗತಿಪರ ಕೃಷಿ ಸಾಧಕ ಮಹಾಲಿಂಗ ನಾಯ್ಕ ಅವರನ್ನು ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.
ಶಾಸಕ ಕೆ.ರಘುಪತಿ ಭಟ್, ಶಿವಮೊಗ್ಗ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ ವಾಲಿ, ಸಾವಯವ ಕೃಷಿ ಉನ್ನತ ಸಮಿತಿ ಮತ್ತು ಕೊಯರ್ ಬೋರ್ಡ್ ಸದಸ್ಯ ರಾಘವೇಂದ್ರ ರಾವ್ ಉಪ್ಪೂರು, ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನಿರ್ದೇಶಕ ಚಂದ್ರಶೇಖರ ಉಡುಪ ಕೆಂಚನೂರು, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ, ಕೆಂಚನೂರು ಕಿಶನ್ ಕುಮಾರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ನಾರಾಯಣ, ಪ್ರಗತಿ ಪರ ಕೃಷಿಕ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ, ಕುಚೇಲಯ್ಯ, ಚಾಂತಾರು ಗ್ರಾಪಂ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ, ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್, ಉಳ್ಳಾಲ ಕೆ.ವಿ.ಕೆಯ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ ಜಿ, ಹಿರಿಯ ಕ್ಷೇತ್ರಅಧೀಕ್ಷಕ ಡಾ.ಶಂಕರ್, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅನಂತರ ಗೇರುಬೆಳೆ ಬಗ್ಗೆ ವಿಚಾರಗೋಷ್ಟಿ ನಡೆಯಿತು
