ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಲರ್ಟ್: ಅಧ್ಯಕ್ಷರಿಂದ ಅಧಿಕಾರಿಗಳಿಗೆ ಸೂಚನೆ
ಉಡುಪಿ ನಗರಸಭೆ ಸಾಮಾನ್ಯ ಸಭೆ

ಉಡುಪಿ, ಫೆ. 28: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮುಂದಿನ ಮಳೆಗಾಲದ ವರೆಗೆ ಮೂರು ತಿಂಗಳ ಕಾಲ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಲರ್ಟ್ ಆಗಿರಬೇಕು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಬೇಸಿಗೆ ಆರಂಭವಾಗಿರುವುದರಿಂದ ಹೆಚ್ಚಿನ ವಾರ್ಡ್ ಗಳಿಗೆ ಕುಡಿಯುವ ನೀರಿಗಾಗಿ ಹಾಹಕಾರ ಉಂಟಾಗಿದೆ. ಎತ್ತರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ದೂರಿದರು. ನನ್ನ ವಾರ್ಡ್ನಲ್ಲಿ ಕಳೆದ 20 ದಿನಗಳಿಂದ ನೀರಿನ ಸಮಸ್ಯೆ ಇದೆ ಎಂದು ರಮೇಶ್ ಕಾಂಚನ್ ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು, ಬಜೆ ಡ್ಯಾಂನಲ್ಲಿ ಮೇ 20ರವರೆಗೆ ಬೇಕಾದಷ್ಟು ನೀರಿನ ಸಂಗ್ರಹ ಇದೆ. ಸದ್ಯ ಪ್ರತಿದಿನ 24 ಎಂಎಲ್ಡಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಬೇಸಿಗೆ ಯಲ್ಲಿ ಜನ ಹೆಚ್ಚು ನೀರು ಬಳಕೆ ಮಾಡುತ್ತಿರುವುದರಿಂದ ಎತ್ತರ ಪ್ರದೇಶಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಸರಿಪಡಿಸುವ ಕಾರ್ಯ ಮಾಡಲಾಗುವುದು ಎಂದರು.
ಅಧ್ಯಕ್ಷರು ಮಾತನಾಡಿ, ಕುಡಿಯುವ ನೀರಿನ ವಿಚಾರವಾಗಿ ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಜೆಯಲ್ಲಿ ನೀರಿಗೆ ಯಾವುದೇ ಕೊರತೆ ಇಲ್ಲ. ಮುಂದಿನ ಮಳೆಗಾಲದವರೆಗೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಲರ್ಟ್ ಆಗಿರಬೇಕು ಎಂದರು. ಬಜೆಯಲ್ಲಿ ಹೆಚ್ಚುವರಿ ಪಂಪ್ ಆಳವಡಿಸಿದರೆ 24 ಎಂಎಲ್ಡಿ ಬದಲು 33 ಎಂಎಲ್ಡಿ ನೀರನ್ನು ಪಂಪ್ ಮಾಡಬಹುದು. ಈ ಕಾರ್ಯಕ್ಕೆ ಟೆಂಡರ್ ಕರೆದು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಅನಧಿಕೃತ ಕಟ್ಟಡಗಳ ತೆರವು
ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂಬ ಟಿ.ಜಿ.ಹೆಗ್ಡೆ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಾ.ಉದಯ ಶೆಟ್ಟಿ, ನಗರ ದಲ್ಲಿ ಒಟ್ಟು 18 ಅನಧಿಕೃತ ಕಟ್ಟಡಗಳಿದ್ದು, ಆ ಬಗ್ಗೆ ವಿವಿಧ ನ್ಯಾಯಾಲಯ ಗಳಲ್ಲಿ ವಿಚಾರಣೆ ನಡೆಯುತ್ತಿವೆ. ಇದರಲ್ಲಿ ಎರಡು ಕೇಸ್ಗಳಿಗೆ ಕೆವಿಯೆಟ್ ಹಾಕಲಾಗಿದೆ. ಕೆಲವು ಕೇಸುಗಳಿಗೆ ತಡೆಯಾಜ್ಞೆ ಇದೆ ಎಂದರು.
ಉಡುಪಿ ಜಾಮೀಯ ಮಸೀದಿಗೆ ಸಂಬಂಧಿಸಿದ ಜಾಗದಲ್ಲಿರುವ ಅನಧಿಕೃತ ಕಟ್ಟಡದ ಬಗ್ಗೆ ಸದಸ್ಯ ಗಿರೀಶ್ ಅಂಚನ್ ಪ್ರಸ್ತಾಪಿಸಿದರು. ಈ ಕಟ್ಟಡಕ್ಕೆ ನ್ಯಾಯಾ ಲಯದಲ್ಲಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಆರು ತಿಂಗಳ ಹಿಂದೆ ತೆರವು ಗೊಳಿಸಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಶಾಸಕ ರಘು ಪತಿ ಭಟ್, ಈ ಕಟ್ಟಡವನ್ನು ತೆರವುಗೊಳಿಸಲು ನಿರ್ಣಯ ಕೈಗೊಂಡು ಕೂಡಲೇ ಕ್ರಮ ಜರಗಿಸಬೇಕು. ಇದರೊಂದಿಗೆ ಇತರ ಕಟ್ಟಡಗಳನ್ನು ಕೂಡ ಪರಿಶೀಲಿಸಿ ತೆರವುಗೊಳಿಸಬೇಕು ಎಂದರು.
ನಿಟ್ಟೂರಿನಲ್ಲಿರುವ ಎಸ್ಟಿಪಿ ಪ್ಲಾಂಟ್ನ ನಾದುರಸ್ತಿಯಿಂದ ದುವಾರ್ಸನೆ ಬೀರುತ್ತಿದೆ ಎಂದು ಸದಸ್ಯ ವಿಜಯ ಕೊಡವೂರು ಆರೋಪಿಸಿದರು. ರಘುಪತಿ ಭಟ್ ಮಾತನಾಡಿ, ಬೇಸಿಗೆ ಆಗಿರುವುದರಿಂದ ಹೊಳೆಯಲ್ಲಿ ನೀರಿನ ಹರಿವು ಇಲ್ಲದೆ ದುರ್ವಾಸನೆ ಹೆಚ್ಚಿದೆ. ಆದುದರಿಂದ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಹೊಳೆಯನ್ನು ಹೂಳೆತ್ತುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ನೂತನ ಕಚೇರಿ ಕಟ್ಟಡ
ಉಡುಪಿ ಹಳೆಯ ತಾಲೂಕು ಕಚೇರಿ ಜಾಗದಲ್ಲಿ ನಗರಸಭೆಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವ ಬಗ್ಗೆ ಕಂದಾಯ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಈ 96 ಸೆಂಟ್ಸ್ ಜಾಗಕ್ಕೆ ನಗರಸಭೆ ಯಿಂದ ಆರು ಕೋಟಿ ರೂ. ಪಾವತಿಸಬೇಕಾಗಿದೆ. ಸಚಿವ ಸಂಪುಟದಲ್ಲಿ ಅನು ಮೋದನೆ ದೊರೆತರೆ ಒಂದು ಲಕ್ಷ ಚದರ ಅಡಿ ವಿಸ್ತ್ರೀರ್ಣದ ಸುಸಜ್ಜಿತ ಕಟ್ಟಡ ವನ್ನು ನಿರ್ಮಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದರು.