ರೊಮೇನಿಯಾ ಮೂಲಕ ನಂದಿನಿ ಅರುಣ್ ಮಸ್ಕತ್ಗೆ ಪ್ರಯಾಣ
ಉಡುಪಿ ಜಿಲ್ಲೆಯ ಮೂವರು ಇನ್ನೂ ಉಕ್ರೇನಿನ ಬಂಕರ್ಗಳಲ್ಲಿ

ನಿಯಮ್, ಗ್ಲೆನ್ವಿಲ್, ಮೃಣಾಲ್, ರೋಹನ್ ಬಗ್ಲಿ
ಉಡುಪಿ, ಫೆ.28 ಯುದ್ಧ ಬಾಧಿತ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ಈವರೆಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿರುವ ಉಡುಪಿ ಜಿಲ್ಲೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಉದ್ಯಾವರ ಸ್ಮಾಲರದ ಮೃಣಾಲ್ (19) ಈಗಾಗಲೇ ಸುರಕ್ಷಿತವಾಗಿ ಮನೆಯನ್ನು ಸೇರಿಕೊಂಡಿದ್ದಾರೆ.
ಉಳಿದಂತೆ ಪರ್ಕಳ ಮೂಲದ ನಿಯಮ್ ರಾಘವೇಂದ್ರ (20) ರವಿವಾರವೇ ರೊಮೇನಿಯಾ ಗಡಿ ಮೂಲಕ ಉಕ್ರೇನ್ ತೊರೆದಿದ್ದು, ಬುಕಾರೆಸ್ಟ್ನಿಂದ ಹೊಸದಿಲ್ಲಿಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.
ಇನ್ನೊಬ್ಬರು ಒಡೆಸ್ಸಾ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಉಡುಪಿಯ ನಂದಿನಿ ಅರುಣ್ (21) ರೊಮೇನಿಯಾ ಗಡಿಯತ್ತ ತೆರಳುತಿದ್ದು, ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಖಾಸಗಿ ಏರ್ ಎಮಿರೇಟ್ಸ್ ವಿಮಾನದಲ್ಲಿ ಮಸ್ಕತ್ಗೆ ಇಂದು ರಾತ್ರಿಯ ವೇಳೆ ತಲುಪಲಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.
ಖಾರ್ಕೀವ್ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ಅವರು ಪುತ್ರ ರೋಹನ್ ಬಗ್ಲಿ (24) ಅವರು ವಿವಿ ಹಾಸ್ಟೆಲ್ನ ಬಂಕರ್ನಲ್ಲಿದ್ದರೆ, ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ತ್ರಾಸಿಯ ಅಂಕಿತ ಜಗದೀಶ್ ಪೂಜಾರಿ (22) ಅವರು ಲೇವಿ-ಪೊಲಂಡ್ ಗಡಿಯ ಮೂಲಕ ಉಕ್ರೇನ್ನಿಂದ ಪೊಲಂಡ್ಗೆ ತೆರಳುತಿದ್ದಾರೆ ಎಂದು ಮಾಹಿತಿ ಬಂದಿದೆ.
ಇನ್ನು ಉಕ್ರೇನಿನ ಟೌನ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ ಗ್ಲೆನ್ವಿಲ್ ಫೆರ್ನಾಂಡೀಸ್ (19), ಹಾಸ್ಟಲ್ ಸಮೀಪದ ಬಂಕರ್ನಲ್ಲಿದ್ದರೆ, ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವ ರ್ಸಿಟಿ ವಿದ್ಯಾರ್ಥಿನಿ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ (20) ಅವರು ವಿವಿ ಹಾಸ್ಟೆಲ್ ಬಂಕರ್ನಲ್ಲಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದಿರುವ ಮಾಹಿತಿ ತಿಳಿಸಿದೆ.