ಉಡುಪಿ: ಕಾಯಕ ಶರಣರ ಜನ್ಮ ದಿನ ಆಚರಣೆ

ಉಡುಪಿ, ಮಾ.1: ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಹೇಳಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಣೆಯಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ಅವರು ಮಾತನಾಡುತಿದ್ದರು.
12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ಹೊಸ ಕ್ರಾಂತಿ ಯನ್ನು ಉಂಟುಮಾಡಿತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬ ಬಸವೇಶ್ವರರ ತತ್ವ ಸಿದ್ಧಾಂತದಂತೆ ಅವರ ಹಾದಿಯಲ್ಲೇ ಸಾಗಿದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಮೊದಲಾದ ಮಹನೀಯರಿದ್ದಾರೆ. ಇವರೆಲ್ಲಾ ವೃತ್ತಿಯನ್ನು ಗೌರವದಿಂದ ನಡೆಸಿ, ತಮ್ಮ ವಚನಗಳ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯ ಹಾಗೂ ಜಾನಪದ ಕಲಾವಿದರಾದ ವಾಸುದೇವ ಬನ್ನಂಜೆ ಮಾತನಾಡಿ, ಶರಣರ ವಚನಗಳನ್ನು ಪಾಲಿಸಿದರೆ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯ. ಇವರ ಸಿದ್ಧಾಂತಗಳು ದಾರಿದೀಪ ಎಂದು ಬಣ್ಣಿಸಿದರು.
ಸಂಗೀತ ಕಲಾವಿದರಾದ ಅರುಣ್ ಕುಮಾರ್ ಹಾವಂಜೆ, ಸಂತೋಷ್ ಪಾಣ ಹಾವಂಜೆ, ಶ್ರೀನಿವಾಸ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಶ್ಫಕ್, ಸದಾನಂದ, ಕೃಷ್ಣ, ದೀಕ್ಷಿತ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ, ವಂದಿಸಿದರು.
