ಕಾರಂತ ಥೀಮ್ ಪಾರ್ಕ್ನಲ್ಲಿ ವಿನೂತನ ಸಂಗೀತ ಕಾರಂಜಿ ಉದ್ಘಾಟನೆ

ಕೋಟ, ಮಾ.1: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಕೋಟ ಶಿವರಾಮ ಕಾರಂತರು ಹುಟ್ಟಿ, ಓಡಾಡಿದ ಪ್ರದೇಶ ದಲ್ಲಿ ನಿರ್ಮಿಸಿರುವ ಕಾರಂತ ಥೀಮ್ ಪಾರ್ಕ್ ಇದೀಗ ಸದಾ ಚಟುವಟಿಕೆಗಳಿಂದ ಕೂಡಿದ ಗ್ರಾಮೀಣ ಭಾಗದ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ 75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ವಿನೂತನ ಮಾದರಿ ಸಂಗೀತ ಕಾರಂಜಿ ಹಾಗೂ ಕರ್ನಾಟಕ ಬ್ಯಾಂಕ್ನಿಂದ 12 ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿದ ವೀಕ್ಷಣಾ ಗ್ಯಾಲರಿಯನ್ನು ಇಂದು ರಾತ್ರಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರಂತ ಥೀಮ್ ಪಾರ್ಕ್ನಲ್ಲಿ ಈಗ ಪ್ರತಿದಿನ ಎಂಬಂತೆ ಕಲೆ, ಸಾಹಿತ್ಯ, ನಾಟಕ, ಯಕ್ಷಗಾನದಂಥ ಕಾರ್ಯಕ್ರಮಗಳು ನಡೆಯುತ್ತವೆ. ಮಕ್ಕಳಿಗಾಗಿಯೂ ವಿವಿಧ ತರಬೇತಿ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ಹೀಗಾಗಿ ಇದೊಂದು ರಾಜ್ಯದ ಅತ್ಯಂತ ಚಟುವಟಿಕೆಯ ಸಾಂಸ್ಕೃತಿಕ ಕೇಂದ್ರವಾಗಿ ಮೂಡಿಬಂದಿದೆ ಎಂದರು.
ಇಲ್ಲಿರುವ ಕಾರಂತ ಕೊಳವನ್ನು ಅಭಿವೃದ್ಧಿ ಪಡಿಸುವ ಯೋಚನೆ ಬಂದಾಗ, ಹೊಸ ತಾಂತ್ರಿಕತೆಯೊಂದಿಗೆ, ಹೊಸತನ ಅಳವಡಿಸಿಕೊಂಡ ಸಂಗೀತ ಕಾರಂಜಿಯನ್ನು ಇದೀಗ 75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಇನ್ನು ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಹಾಗೂ ಮೂರು ರಾಷ್ಟ್ರೀಯ ಹಬ್ಬದ ದಿನದಂದು ಸಾರ್ವಜನಿಕರು ಹಾಗೂ ಸ್ಥಳೀಯರಿಗೆ ಉಚಿತ ಪ್ರದರ್ಶನ ನೀಡಲು ನಿರ್ಧರಿಸಲಾಗಿದೆ ಎಂದರು.
ಸಂಗೀತ ಕಾರಂಜಿಯ ನಿರ್ವಹಣೆಯ ಕುರಿತಂತೆ, ಲಾಭವಿಲ್ಲದಿದ್ದರೂ ನಷ್ಟವಾಗದಂತೆ ಹೇಗೆ ಇದನ್ನು ನಿರ್ವಹಿಸ ಬೇಕೆಂಬ ಬಗ್ಗೆ ಸಮಾಲೋಚಿಸಿ ನಿರ್ಧರಿಸಲಾಗುವುದು. ಇದರೊಂದಿಗೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವೀಕ್ಷಣಾ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಒಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ನಲ್ಲಿ ಕಾರಂತದ ಬದುಕಿನ ಎಲ್ಲಾ ವಿಚಾರಗಳನ್ನು ವಿವಿಧ ರೂಪದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ನಡೆದಿದ್ದು, ಈ ಮೂಲಕ ಕಾರಂತರ ನೆನಪು ಸದಾ ಉಳಿಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ನುಡಿದರು.
ಇದೇ ವೇಳೆ ಸಚಿವರು, ಕೇರಳದ ಸಾಹಿತಿ, ಚಿತ್ರ ನಿರ್ದೇಶಕ ಇ.ಎಂ.ಅಶ್ರಫ್ ಬರೆದ ಬಾಲವನದ ಜಾದೂಗಾರ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಇದೇ ವೇಳೆ ಸಚಿವರು, ಕೇರಳದ ಸಾಹಿತಿ, ಚಿತ್ರ ನಿರ್ದೇಶಕ ಇ.ಎಂ.ಅಶ್ರಫ್ ಬರೆದ ಬಾಲವನದ ಜಾದೂಗಾರ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ, ವಕೀಲ ಎ.ಎಸ್.ಎನ್.ಹೆಬ್ಬಾರ್, ಕೃತಿಕಾರ ಇ.ಎಂ.ಅಶ್ರಫ್, ಡಾ.ಪ್ರದೀಪ್, ಉದ್ಯಮಿ ಆನಂದ ಕುಂದರ್, ಪ್ರಶಾಂತ್ ತೋಳಾರ್, ಕ್ಲಿಫರ್ಡ್ ಲೋಬೊ, ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು. ಯು.ಎಸ್.ಶೆಣೈ ಅವರು ಅತಿಥಿಗಳನ್ನು ಸ್ವಾಗತಿಸಿದರು.