ಬಜೆಟ್ ತಿಳುವಳಿಕೆ ನಾಗರಿಕ ಪ್ರಜ್ಞೆಯ ಭಾಗ: ಶ್ರೀಧರ ಕಾಮತ್

ಉಡುಪಿ, ಮಾ.2: ಕೇಂದ್ರ ಅಥವಾ ರಾಜ್ಯ ಸರಕಾರದ ಮುಂಗಡ ಪತ್ರದ ಕುರಿತಾದ ತಿಳುವಳಿಕೆಯು ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯ. ಅದು ನಾಗರಿಕ ಪ್ರಜ್ಞೆಯ ಭಾಗವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಇದು ಅತಿ ಅಗತ್ಯ. ದೇಶದ ಅಭಿವೃದ್ಧಿ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮುಂಗಡ ಪತ್ರದ ಅರಿವು ಪೂರಕ ಎಂದು ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀಧರ್ ಕಾಮತ್ ಹೇಳಿದ್ದಾರೆ.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಕೇಂದ್ರ ಸರಕಾರದ 2022ರ ಮುಂಗಡ ಪತ್ರದ ಕುರಿತಾಗಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಮುಂಗಡ ಪತ್ರ ತಯಾರಿಯ ವಿವಿಧ ಹಂತಗಳು ಹಾಗೂ ಈ ವರ್ಷದ ಮುಂಗಡ ಪತ್ರ ವೈಶಿಷ್ಟ್ಯಗಳನ್ನು ಅವರು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಬಳಿಕ ಮುಂಗಡ ಪತ್ರದ ಬಗ್ಗೆ ಚರ್ಚೆ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ರಾದ ಪ್ರೊ.ತಿಮ್ಮಣ್ಣ ಜಿ. ಭಟ್ ಪ್ರಸ್ತಾವನೆ ಯೊಂದಿಗೆ ಅತಿಥಿಗಳನ್ನು ಪರಿಚಯಿಸಿದರು.ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಕೆ., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಉಮೇಶ್ ಪೈ ಉಪಸ್ಥಿತರಿದ್ದರು.
ದ್ವಿತೀಯ ಎಂ.ಎ. ವಿದ್ಯಾರ್ಥಿನಿ ಸಮೀಕ್ಷಾ ಪ್ರಾರ್ಥಿಸಿದರೆ, ಎಂ.ಕಾಂ.ನ ಪ್ರಣೀತ ಸ್ವಾಗತಿಸಿದರು. ಕೀರ್ತನಾ ವಂದಿಸಿ ರೈನಾ ಡಿ’ಸೋಜ ನಿರೂಪಿಸಿದರು.