ಉಳ್ಳವರಿಗೆ ಮಾತ್ರವೇ ವೈದ್ಯಕೀಯ ಶಿಕ್ಷಣ
ಮಾನ್ಯರೇ,
ಉಕ್ರೇನ್ನಲ್ಲಿ ಮೊನ್ನೆ ರಶ್ಯ ನಡೆಸಿದ ಭೀಕರ ದಾಳಿಯಲ್ಲಿ ರಾಜ್ಯದ ಹಾವೇರಿ ಜಿಲ್ಲೆಯ ನವೀನ್ ಎಂಬ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿದ್ದು ರಾಜ್ಯದ ಪಾಲಿಗೆ ನಿಜಕ್ಕೂ ದುರ್ದೈವದ ಸಂಗತಿ. ತಂದೆ-ತಾಯಿ, ಬಂಧು-ಬಳಗವನ್ನೆಲ್ಲಾ ಬಿಟ್ಟು ಜನಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡು ಸಾವಿರಾರು ಮೈಲಿ ದೂರದಲ್ಲಿರುವ ಬೇರೆ ದೇಶಕ್ಕೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆಯುವುದು ನಿಜಕ್ಕೂ ಸವಾಲೇ ಸರಿ. ನಮ್ಮ ದೇಶದಲ್ಲಿಯೇ ವೈದ್ಯಕೀಯ ಕಾಲೇಜುಗಳು ಸಾಕಷ್ಟಿವೆ ಜೊತೆಗೆ ಉತ್ತಮ ಮಾನವ ಸಂಪನ್ಮೂಲವಿದೆ. ಆದರೂ ಬಡ ಮತ್ತು ಮಧ್ಯಮ ವರ್ಗದವರಿಗೆ ವೈದ್ಯಕೀಯ ಶಿಕ್ಷಣವೆಂಬುದು ಕೈಗೆಟುಕದಂತಾಗಿದೆ. ವೈದ್ಯರಾಗಬೇಕೆಂಬ ಕನಸು ಕಟ್ಟಿಕೊಂಡ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ತಮ್ಮ ಕನಸುಗಳನ್ನೇ ಕಮರಿಸಿದ್ದಾರೆ. ಹಾಗಾದರೆ ನಮ್ಮ ದೇಶದಲ್ಲಿ ಒಳ್ಳೆಯ ಪ್ರತಿಭೆಗಳಿಗೆ ಬೆಲೆಯಿಲ್ಲವೇ? ಉಳ್ಳವರಿಗೆ ಮಾತ್ರವೇ ವೈದ್ಯಕೀಯ ಸೀಟು?
ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೋ ಒಂದು ಸಮುದಾಯವನ್ನು ಮೆಚ್ಚಿಸಲೋ ಅಥವಾ ಮಠಾಧೀಶರುಗಳ ಮೂಲಕ ಆ ಸಮುದಾಯವನ್ನು ಸೆಳೆಯಲಿಕ್ಕೋ, ಸ್ವ-ಪ್ರತಿಷ್ಠೆಗಾಗಿಯೋ ಪ್ರತಿಮೆಗಳಿಗೆ, ಪುತ್ಥಳಿಗಳಿಗೆ, ಮಠ-ಮಾನ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ನೀಡುವ ಬದಲು ತಾಲೂಕಿಗೊಂದು ವೈದ್ಯಕೀಯ ಕಾಲೇಜು ಆರಂಭಿಸಲು ಅನುದಾನ ನೀಡಬಹುದಲ್ಲವೇ? ಸರಕಾರಿ ಸೀಟುಗಳ ಸಂಖ್ಯೆ ಹೆಚ್ಚಿಸಬಹುದಲ್ಲವೇ? ಆಗ ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶದ ಶಿಕ್ಷಣಕ್ಕೆ ಅವಲಂಬಿತರಾಗುವುದು ತಪ್ಪುತ್ತದೆ. ಉದಾಹರಣೆಗೆ ನಮ್ಮ ದಾವಣಗೆರೆ ಜಿಲ್ಲೆಯಲ್ಲಿಯೇ 2 ಮೆಡಿಕಲ್ ಕಾಲೇಜುಗಳಿವೆ, ದುರಂತವೆಂದರೆ ಇಲ್ಲಿ ಅಧ್ಯಯನ ಮಾಡುತ್ತಿರುವವರು ಬಹುತೇಕ ಹೊರದೇಶ ಮತ್ತು ಹೊರ ರಾಜ್ಯದವರು. ನಮ್ಮ ಜಿಲ್ಲೆಯ ಕಾಲೇಜುಗಳು ಸ್ಥಳೀಯ ವಿದ್ಯಾರ್ಥಿಗಳಿಗೆ ಕೈತಪ್ಪುತ್ತಿವೆ. ಎಲ್ಲಾ ಸೌಲಭ್ಯವಿರುವ ದಾವಣಗೆರೆ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಎಂದು ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಿದೆ ನಮ್ಮ ಜಿಡ್ಡುಗಟ್ಟಿದ ವ್ಯವಸ್ಥೆ. ರಾಜ್ಯದ ಬಹುತೇಕ ವೈದ್ಯಕೀಯ ಕಾಲೇಜುಗಳು ಜನಪ್ರತಿನಿಧಿಗಳ ಮಾಲಕತ್ವದಲ್ಲಿವೆ. ಕನಿಷ್ಠ ಅವರಿಗಾದರೂ ಬದ್ಧತೆ ಎಂಬುದೇ ಇಲ್ಲವೇ? ಭಾರತದಲ್ಲಿ ವೈದ್ಯಕೀಯ ಕಾಲೇಜುಗಳು ಕೇವಲ ಉಳ್ಳವರ ಕಾಲೇಜುಗಳು ಆಗದೆ ಬಡ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಕೈಗೆಟಕುವುದು ಎಂದು?