ಯೆನೆಪೊಯ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ಶಸ್ತಚಿಕಿತ್ಸೆ

ಮಂಗಳೂರು, ಮಾ.3:ಯೆನೆಪೊಯ ಸ್ಪೆಷ್ಪಾಲಿಟಿ ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಕರ ತಂಡವು ರೋಗಿ ಯೊಬ್ಬರ ಹೃದಯಾಘಾತದಿಂದ ಉಂಟಾದ ರಂಧ್ರವನ್ನು (ವೆಂಟ್ರಿಕುಲಾರ್ ಸೆಪ್ಟಲ್ ರಪ್ಚರ್) ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೆಂಟ್ರಿಕುಲಾರ್ ಸೆಪ್ಟಲ್ ರಪ್ಚರ್ ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಇದು ಹೃದಯಾಘಾತದಿಂದ ರಕ್ತ ಪರಿಚಲನೆ ಇಲ್ಲದೆ ಎರಡು ಹೃತ್ಕುಕ್ಷಿಗಳ (ವೆಂಟ್ರಿಕಲ್) ನಡುವಿನ ಗೋಡೆಯು ಒಡೆದು ರಂಧ್ರವು ಸೃಷ್ಟಿ ಯಾಗುವುದರಿಂದ ಸಂಭವಿಸುತ್ತದೆ. ಈ ರೀತಿಯ ರಂಧ್ರವು ಸಾಮಾನ್ಯವಾಗಿ ಹೃದಯಾಘಾತವಾಗಿ 1ರಿಂದ 14 ದಿನಗಳ ಅವಧಿಯಲ್ಲಿ ಉಂಟಾಗುವ ಸಂಭವವಿರುತ್ತದೆ.
ಹೃದಯಾಘಾತದ ನಂತರ ಶೇ.3ರಷ್ಟು ರೋಗಿಗಳಲ್ಲಿ ಈ ಸ್ಥಿತಿಯು ಸಂಭವಿಸಬಹುದಾಗಿದೆ.ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಪರಿಸ್ಥಿತಿಯು ಅತ್ಯಂತ ಮಾರಣಾಂತಿಕವಾಗಿರುತ್ತದೆ. ಶೇ.75ರಷ್ಟು ರೋಗಿಗಳು ಜೀವ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ತುರ್ತು ಶಸ್ತ್ರಚಿಕಿತ್ಸೆಯು ಇಂತಹ ರೋಗಕ್ಕೆ ಮುಂಚೂಣಿಯ ಚಿಕಿತ್ಸೆಯಾಗಿದೆ.
ಬೆಂಗಳೂರು ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದ್ದರಿಂದ ಹೃದಯಾಘಾತದಿಂದ ಉಂಟಾದ ರಂಧ್ರವನ್ನು ಗುರುತಿಸಿದ 4 ವಾರಗಳ ನಂತರ ಯೆನೆಪೊಯ ಸ್ಪೆಷ್ಪಾಲಿಟಿ ಆಸ್ಪತ್ರೆಗೆ ದಾಖಲಾದ 50 ವರ್ಷದ ರೋಗಿಯನ್ನು ಕೆಲವು ಪರೀಕ್ಷೆಗಳ ನಂತರ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.
ದಾಖಲಾದ ಸಂದರ್ಭ ಮೂಲ ಖಾಯಿಲೆಯಿಂದ ಮೂತ್ರಪಿಂಡದ ಸಮಸ್ಯೆಯೂ ಉದ್ಭವಿಸಿತ್ತು. ಶಸ್ತ್ರಚಿಕಿತ್ಸಕ ರಾದ ಡಾ.ಶಕ್ತಿವೇಲ್ ನೇತೃತ್ವದ ತಂಡವು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಹೃದಯ ಶಸ್ತ್ರಚಿಕಿತ್ಸಕರಾದ ಡಾ.ಗಣೇಶ್ ಕಾಮತ್ ಹಾಗೂ ಹೃದಯ ಸಂಬಂಧಿ ಅರವಳಿಕೆ ತಜ್ಞ ಡಾ. ಮೋಹನ್ ದಾಸ್, ಡಾ.ಕೃಷ್ಣಪ್ರಸಾದ್, ಡಾ.ವಿನಾಯಕ್ ಸಹಕರಿಸಿದರು. ಶಸ್ತ್ರ ಚಿಕಿತ್ಸಾ ನಂತರದ ಘಟಕದಲ್ಲಿ ನುರಿತ ವೈದ್ಯರ ಹಾಗೂ ಹಾಗೂ ಶುಶ್ರೂಕಿಯರ ತಂಡದ ಆರೈಕೆಯಲ್ಲಿ ರೋಗಿಯು ಗುಣಮುಖರಾಗಿ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ.
ಈ ವೈದ್ಯರ ತಂಡವು ಕ್ಲಿಷ್ಟಕರವಾದ ನಾಲ್ಕನೆಯ ಯಶಸ್ಸಿ ಶಸ್ತ್ರಚಿಕಿತ್ಸೆಯನ್ನು ಮಾಡಿದೆ. ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸುವ ತಂಡ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ ಹಾಗೂ ಕೇರಳದ ಹಲವಾರು ಹೃದ್ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಶೀಘ್ರದಲ್ಲೇ ಕೀ ಹೋಲ್ ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.