ಸರಕಾರಿ ನೌಕರರ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ವಿಷಾದಕರ: ಕೆಪಿಸಿಸಿ ವಕ್ತಾರ ರಮೇಶ್ ಬಾಬು

ಬೆಂಗಳೂರು, ಮಾ.5: 2022-23ನೆ ಸಾಲಿನ ಆಯವಯ್ಯದಲ್ಲಿ ರಾಜ್ಯದ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಬೇಡಿಕೆಗಳನ್ನು ಹಾಗೂ ನಿರುದ್ಯೋಗಿ ಯುವಕರ ಧ್ವನಿಯನ್ನು ಪರಿಗಣಸದೆ ಇರುವುದು ವಿಷಾದಕರ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ರಮೇಶ್ ಬಾಬು ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಸುಮಾರು ಐದೂವರೆ ಲಕ್ಷ ಸರಕಾರಿ ಮತ್ತು ಅರೆ ಸರಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಅವರು ಪಡೆಯುತ್ತಿರುವ ವೇತನಗಳು ಜುಲೈ 2022ರ ವರೆಗೆ ಅನ್ವಯಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ನಂತರ ಪರಿಷ್ಕೃತ ವೇತನವನ್ನು ಸರಕಾರಿ ಮತ್ತು ಅರೆ ಸರಕಾರಿ ನೌಕರರಿಗೆ ನೀಡಬೇಕಾಗಿರುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಏಳನೇ ವೇತನ ಆಯೋಗ ರಚನೆ ಮಾಡಬೇಕಾಗಿತ್ತು. ಆದರೆ, ಬಜೆಟ್ನಲ್ಲಿ ಈ ಯಾವುದೆ ಪ್ರಸ್ತಾಪ ಮಾಡದೆ ಇರುವುದು ದುರದೃಷ್ಟಕರ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ರಾಜ್ಯ ಸರಕಾರದ ಒಟ್ಟಾರೆ ನೌಕರರಲ್ಲಿ ಸುಮಾರು 2.75 ಲಕ್ಷ ನೌಕರರು ಹೊಸ ಪಿಂಚಣಿ ಯೋಜನೆಯ ಅಡಿಯಲ್ಲಿ ಬರುತ್ತಾರೆ. 2006ರ ಎ.1ರಿಂದ ನೇಮಕಗೊಂಡ ನೌಕರರನ್ನು ಹಳೆ ಪಿಂಚಣಿ ಯೋಜನೆಯಿಂದ ಹೊರಗೆ ಇಡಲಾಗಿದೆ. ಹೊಸ ಪಿಂಚಣಿ ಯೋಜನೆಯು ಸರಕಾರಿ ಮತ್ತು ಅರೆ ಸರಕಾರಿ ನೌಕರರ ಜೀವನೋಪಾಯಕ್ಕೆ ಮಾರಕವಾಗಿದ್ದು, ರಾಜ್ಯ ಸರಕಾರವು ಬಜೆಟ್ನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡುವ ಯಾವುದೆ ಪ್ರಸ್ತಾಪ ಮಾಡಿಲ್ಲ. ಇದರಿಂದ ರಾಜ್ಯ ಸರಕಾರದ ಅಡಿಯಲ್ಲಿ ಕೆಲಸ ಮಾಡುವ ಶೇ.50ಕ್ಕೂ ಹೆಚ್ಚು ನೌಕರರು ಅತಂತ್ರ ಪರಿಸ್ಥಿತಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 2.50 ಲಕ್ಷ ಸರಕಾರಿ ನೌಕರಿ ಖಾಲಿ ಇದೆ. ಇದನ್ನು ತುಂಬುವ ಯಾವುದೆ ಪ್ರಸ್ತಾಪ ಬಜೆಟ್ನಲ್ಲಿ ಇಲ್ಲ. ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ವೇತನ ತಾರತಮ್ಯಗಳನ್ನು ಸರಿಪಡಿಸಲು ಮಾಡಿರುವ ಯಾವುದೆ ಮನವಿಗಳಿಗೆ ಬಜೆಟ್ನಲ್ಲಿ ಉತ್ತರ ದೊರೆತಿಲ್ಲ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು, ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಒತ್ತಾಯಕ್ಕೆ ಯಾವುದೆ ಪೂರಕವಾದ ಉತ್ತರ ಬಜೆಟ್ನಲ್ಲಿ ನೀಡಿಲ್ಲ. ಶಿಕ್ಷಕರ ಮತ್ತು ಉಪನ್ಯಾಸಕರ ವರ್ಗಾವಣೆ ನಿಯಮಾವಳಿಗಳನ್ನು ಸಡಿಲಗೊಳಿಸಿ, ಒತ್ತಡ ರಹಿತ ವರ್ಗಾವಣೆಗೆ ಅವಕಾಶ ಕಲ್ಪಿಸುವ ಯಾವುದೆ ಪ್ರಕಟಣೆ ಬಜೆಟ್ನಲ್ಲಿ ಇಲ್ಲ. ಕೋವಿಡ್ ಕಾರಣಕ್ಕೆ ಸುಮಾರು 40 ಲಕ್ಷ ಗ್ರಾಮೀಣ ಪ್ರದೇಶದ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದು, ಅವರನ್ನು ಸಮಾಜದ ವಾಹಿನಿಯಲ್ಲಿ ಕರೆತರುವ ಯಾವುದೆ ಪ್ರಯತ್ನ ಬಜೆಟ್ನಲ್ಲಿ ಮಾಡಲಾಗಿಲ್ಲ ಎಂದು ಅವರು ಟೀಕಿಸಿದ್ದಾರೆ.
ಯಾವ ಸರಕಾರ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಶಿಕ್ಷಣ ಇಲಾಖೆಯನ್ನು ನಿರ್ಲಕ್ಷ್ಯ ಮಾಡುತ್ತದೆ ಅಂತಹ ಸರಕಾರದಿಂದ ಜನರ ಬದುಕು ಮತ್ತು ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಆಯವ್ಯಯದ ಒಟ್ಟು ಹಣದಲ್ಲಿ ತಾವು ಶೇ.12ರಷ್ಟು ಶಿಕ್ಷಣ ಇಲಾಖೆಗೆ ನೀಡಿದ್ದರೂ, ಇದರಲ್ಲಿ ಶೇ.90ರಷ್ಟು ವೇತನ ಮತ್ತು ಆಡಳಿತದ ವೆಚ್ಚವಾಗಿದ್ದು, ಶಿಕ್ಷಣ ಇಲಾಖೆಗೆ ಶೇ.15ರಷ್ಟು ಅನುದಾನದ ಅವಶ್ಯಕತೆಯಿತ್ತು. ಈ ಅಂಶಗಳನ್ನು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ, ಪರಿಷ್ಕøತ ಆಯವ್ಯಯದಲ್ಲಿ ಅವಕಾಶ ನೀಡಿ ಸರಕಾರಿ ಹಾಗೂ ಅರೆ ಸರಕಾರಿ ನೌಕರರ ಹಿತಾಸಕ್ತಿ ಮತ್ತು ಶಿಕ್ಷಣ ಇಲಾಖೆಯ ಹಿತಾಸಕ್ತಿ ಸಂರಕ್ಷಿಸಬೇಕು ಎಂದು ರಮೇಶ್ ಬಾಬು ಕೋರಿದ್ದಾರೆ.







