"ಟರ್ಕಿ, ಪಾಕಿಸ್ತಾನದಂತೆ ನಮಗೂ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕಾಗಿತ್ತು"
ಉಕ್ರೇನ್ನಿಂದ ಬ್ರಹ್ಮಾವರದಲ್ಲಿನ ಮನೆ ತಲುಪಿದ ವಿದ್ಯಾರ್ಥಿ ರೋಹನ್
![ಟರ್ಕಿ, ಪಾಕಿಸ್ತಾನದಂತೆ ನಮಗೂ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕಾಗಿತ್ತು ಟರ್ಕಿ, ಪಾಕಿಸ್ತಾನದಂತೆ ನಮಗೂ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕಾಗಿತ್ತು](https://www.varthabharati.in/sites/default/files/images/articles/2022/03/5/327054-1646491208.jpg)
ರೋಹನ್ ಡಿ.ಬಿ
ಉಡುಪಿ: ‘ಇಂತಹ ಸಮಯದಲ್ಲಿ ಉಕ್ರೇನ್ ದೇಶಕ್ಕೆ ಬರಲು ಸಾಧ್ಯವಾಗದಿದ್ದರೂ ಪರವಾಗಿರುತ್ತಿರಲಿಲ್ಲ. ಆದರೆ ಟರ್ಕಿ, ಪಾಕಿಸ್ತಾನ ದೇಶದವರಿಗೆ ಖಾರ್ಕೀವ್ನಿಂದ ಲಿವ್ಯೆವರೆಗೆ ಮಾಡಿರುವ ವಿಶೇಷ ರೈಲಿನ ವ್ಯವಸ್ಥೆಯನ್ನು ಭಾರತೀಯರಿಗೂ ಮಾಡುತ್ತಿದ್ದರೆ ಈ ಹೊತ್ತಿಗೆ ಎಲ್ಲರೂ ಭಾರತ ತಲುಪುತ್ತಿದ್ದರು. ಎರಡು ವಿಶೇಷ ರೈಲಿನ ವ್ಯವಸ್ಥೆ ಮಾಡುತ್ತಿದ್ದರೆ ನಾವೆಲ್ಲ ಹೊಂದಿಕೊಂಡು ಬೇರೆ ದೇಶ ತಲುಪುತ್ತಿದ್ದೇವು’
ಸುಮಾರು 10 ದಿನಗಳ ಕಾಲ ಯುದ್ಧಪೀಡಿತ ಉಕ್ರೇನ್ನಲ್ಲಿ ಉಳಿದು, ಶನಿವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ತನ್ನ ವಸತಿಗೃಹ ತಲುಪಿದ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಅವರ ಪುತ್ರ ರೋಹನ್ ಡಿ.ಬಿ.(23) ಮಾಧ್ಯಮದವರೊಂದಿಗೆ ಅಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಹಂಚಿಕೊಂಡರು.
‘ಭಾರತ ಸರಕಾರದಿಂದ ಎಲ್ಲವೂ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಆ ರೀತಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ನಮಗೆ ಯುದ್ಧದ ಗಂಭೀರತೆ ಬಗ್ಗೆ ಸರಿಯಾಗಿ ಮಾಹಿತಿ ಹಾಗೂ ಸೂಚನೆ ನೀಡುತ್ತಿದ್ದರೆ ಎಲ್ಲರೂ ಈಗಾಗಲೇ ಭಾರತಕ್ಕೆ ಸುರಕ್ಷಿತವಾಗಿ ಬರುತ್ತಿದ್ದೇವು. ವಿಶೇಷ ರೈಲಿನ ವ್ಯವಸ್ಥೆ ಮಾಡುವಂತೆ ನಾವೆಲ್ಲ ಟ್ವೀಟ್ ಮಾಡಿದೆವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ’
ಗಂಭೀರ ಸೂಚನೆ ನೀಡಿಲ್ಲ
‘ಅಮೆರಿಕಾದ ರಾಯಭಾರಿ ಕಚೇರಿಯವರು ಒಂದು ವಾರ ಮೊದಲೇ ತನ್ನ ನಾಗರಿಕರಿಗೆ 48ಗಂಟೆಗಳ ಅವಧಿಯಲ್ಲಿ ಉಕ್ರೇನ್ ತೊರೆಯುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿತು. ಅದೇ ರೀತಿ ನಮಗೂ ಅಷ್ಟು ಗಂಭೀರತೆಯಿಂದ ಸೂಚನೆ ಕೊಡುತ್ತಿದ್ದರೆ ನಾವೆಲ್ಲ ಹೊರಡುತ್ತಿದ್ದೆವು. ನಮಗೆ ಪ್ರತಿಯೊಂದು ವಿಚಾರದಲ್ಲಿ ಅಂತಿಮವಾಗಿ ಸೂಚನೆ ಕೊಡಬೇಕಾಗಿರುವುದು ರಾಯಭಾರಿ ಕಚೇರಿಯವರು. ಆದರೆ ಅವರು, ಭಾರತಕ್ಕೆ ಹೋಗುವವರು ಹೋಗಬಹುದು, ಇಲ್ಲದಿದ್ದರೆ ಇಲ್ಲೇ ಉಳಿಯಬಹುದು. ಯಾರಿಗೂ ಒತ್ತಾಯ ಇಲ್ಲ ಎಂದು ಹೇಳಿತು’
ಯುದ್ಧದ ಗಂಭೀರತೆ ಬಗ್ಗೆ ನಮಗಿಂತ ಇಂಟೆಲಿಜೆನ್ಸ್ ಮಾಹಿತಿ ಹೊಂದಿರುವ ರಾಯಭಾರಿಯವರಿಗೆ ಗೊತ್ತಿರುತ್ತದೆ. ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿರದ ಮತ್ತು ಉಪನ್ಯಾಸಕರು ಈ ಹಿಂದೆ ಕೂಡ ಇಲ್ಲಿ ಈ ರೀತಿಯ ವಾತಾವರಣ ಇತ್ತೆಂದು ಹೇಳಿದ ಕಾರಣ ನಾವು ಹೊರಡುವ ನಿರ್ಧಾರ ಮಾಡಿಲ್ಲ. ಅಲ್ಲದೆ ಭಾರತಕ್ಕೆ ಹೋದರೆ ಒಂದು ತಿಂಗಳ ತರಗತಿ ಕೂಡ ಕಳೆದುಕೊಳ್ಳಬೇಕಾಗ ಬಹುದು ಎಂದು ನಾವು ಆಲೋಚಿಸಿದೆವು. ಇದೇ ಕಾರಣದಿಂದ ಹೆಚ್ಚಿನವರು ಈಗ ಸಮಸ್ಯೆ ಎದುರಿಸುತ್ತಿದ್ದಾರೆ’
‘ಹಾಸ್ಟೆಲಿನ ಬಂಕರ್ನಲ್ಲಿ ಐದು ದಿನಗಳ ಕಾಲ ಕಳೆದೆವು. ದಿನ ಕಳೆದಂತೆ ನಮ್ಮ ಬಳಿ ಆಹಾರದ ಸಂಗ್ರಹ ಕಡಿಮೆ ಆಗುತ್ತ ಬಂತು. ಸಾರಿಗೆ ವ್ಯವಸ್ಥೆ ಮಾಡಿಕೊಂಡು ಪೊಲ್ಯಾಂಡ್ ರೋಮೋನಿಯಾ, ಹಂಗೇರಿ ದೇಶದ ಗಡಿಯ ವರೆಗೆ ಬಂದರೆ ಅಲ್ಲಿಂದ ನಾವು ಭಾರತಕ್ಕೆ ತಲುಪಿಸಬಹುದು ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿತು. ಆದರೆ ಅದು ಅಷ್ಟು ಸುಲಭ ಆಗಿರಲಿಲ್ಲ. ನಾವು ಐದು ದಿನಗಳ ಬಳಿಕ ಅಂದರೆ ಮಾ.1ರಂದು ಬೆಳಗಿನ ಜಾವ 6 ಗಂಟೆಗೆ ರಿಸ್ಕ್ ತೆಗೆದುಕೊಂಡು ಬಂಕರ್ನಿಂದ ಹೊರಗೆ ಬಂದು ಗಡಿಗೆ ಹೊರೆಟೆವು. ಈ ಪ್ರಯಾಣದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆವು’ ಎಂದು ತಮ್ಮ ಪಯಣದ ಮಾಹಿತಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ರೋಹನ್ ತಂದೆ ಡಾ.ಧನಂಜಯ್, ತಾಯಿ ಸುಮ ಹಾಗೂ ಸಹೋದರ ಪವನ್ ಹಾಜರಿದ್ದರು.
‘ನವೀನ್ ಮೃತದೇಹ ತರುವ ಪ್ರಯತ್ನವಾಗಲಿ’
‘ನಾನು ಮತ್ತು ನವೀನ್ ಹಲವು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ಬಹಳ ಆತ್ಮೀಯ ಸ್ನೇಹಿತ. ಈ ರೀತಿ ಆಗುತ್ತದೆ ಎಂದು ನಾವು ಎನಿಸಿಲ್ಲ. ನವೀನ್ ತುಂಬಾ ಸುರಕ್ಷಿತ ಸಮಯದಲ್ಲೇ ಹೊರಗೆ ಹೋಗಿದ್ದನು. ಆದರೆ ರಷ್ಯಾದ ಏಕಾಏಕಿ ದಾಳಿಗೆ ನವೀನ್ ಬಲಿಯಾಗಿದ್ದಾನೆ. ಅವನ ಮೃತದೇಹ ಆದಷ್ಟು ಬೇಗ ತಾಯಾಡ್ನಿಗೆ ತರುವ ಪ್ರಯತ್ನವನ್ನು ಸರಕಾರ ಮಾಡಬೇಕು’ ಎಂದು ರೋಹನ್ ಮನವಿ ಮಾಡಿದರು.
ಮಾ.1ರಂದು ನಾವು ಬಂಕರ್ನಿಂದ ರಿಸ್ಕ್ ತೆಗೆದುಕೊಂಡು ಹೊರಟಿದ್ದೆವು. ಆದರೆ ನವೀನ್ ಮರುದಿನ ಹೊರಡುವ ನಿರ್ಧಾರವನ್ನು ಮಾಡಿದ್ದರು. ಆದರೆ ವಿಧಿ ಆಟ ಬೇರೆ ಆಗಿತ್ತು. ನಮ್ಮ ಸ್ನೇಹಿತನನ್ನು ನಾವು ಕಳೆದುಕೊಳ್ಳುವಂತಾಯಿತು. ನಾವು ರೈಲು ನಿಲ್ದಾಣದಲ್ಲಿರುವಾಗ ಭಾರೀ ಸ್ಪೋಟದ ಸದ್ದು ಕೇಳಿತು. ಇದೇ ದಾಳಿಗೆ ನವೀನ್ ಬಲಿಯಾಗಿದ್ದರು’ ಎಂದು ರೋಹನ್ ತಿಳಿಸಿದರು.
ರೋಹನ್ ಮನೆಗೆ ಡಿಸಿ ಭೇಟಿ
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ದಲ್ಲಿರುವ ರೋಹನ್ ಅವರ ವಸತಿಗೃಹಕ್ಕೆ ಭೇಟಿ ನೀಡಿ ರೋಹನ್ ಹಾಗೂ ಅವರ ತಂದೆತಾಯಿ ಅವರಿಂದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಕೊಂಡರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ರೋಹನ್ ಉಕ್ರೇನ್ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಬಂದಿದ್ದಾರೆ. ಇವರು ಸುರಕ್ಷಿತವಾಗಿ ಬರಲು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿದ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಏಳು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಇದ್ದರು. ಅದರಲ್ಲಿ ಐದು ಮಂದಿ ತಮ್ಮ ಮನೆ ಸೇರಿದ್ದಾರೆ. ಉಳಿದ ಎರಡು ವಿದ್ಯಾರ್ಥಿಗಳಲ್ಲಿ ಒಬ್ಬರು ಬರುವ ವ್ಯವಸ್ಥೆ ಆಗುತ್ತಿದೆ. ಇನ್ನೊಬ್ಬ ವ್ಯಕ್ತಿ ಉಕ್ರೇನ್ನಲ್ಲಿಯೇ ಸುರಕ್ಷಿತ ಪ್ರದೇಶದಲ್ಲಿದ್ದಾರೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರನ್ನು ಕರೆ ತರುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ ಉಪಸ್ಥಿತರಿದ್ದರು.
‘ಉಕ್ರೇನ್ನಲ್ಲಿ ಎಂಬಿಬಿಎಸ್ ಒಟ್ಟು ಆರು ವರ್ಷಗಳಾಗಿರುತ್ತದೆ. ನನ್ನದು ಇದು ಐದನೇ ವರ್ಷ. ಇನ್ನು ಆರು ತಿಂಗಳು ತರಗತಿ ಮತ್ತು ಆರು ತಿಂಗಳು ಪರೀಕ್ಷೆ ಇದೆ. ಸದ್ಯಕ್ಕೆ ಆನ್ಲೈನ್ ತರಗತಿ ಮಾಡಲಾಗುತ್ತದೆ. ಮಾ.13ರವರೆಗೆ ಎಲ್ಲ ರೀತಿಯ ತರಗತಿಯನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಆರು ತಿಂಗಳ ನಂತರ ಪರೀಕ್ಷೆ ಕುಳಿತುಕೊಳ್ಳುವ ಬಗ್ಗೆ ನೋಡಬೇಕಾಗಿದೆ. ಇನ್ನೂ 1200 ಭಾರತೀಯ ವಿದ್ಯಾರ್ಥಿಗಳು ಅಲ್ಲೇ ಇದ್ದಾರೆ. ಅವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಭಾರತಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವ ಕೆಲಸವನ್ನು ಸರಕಾರ ಮಾಡಬೇಕು’
-ರೋಹನ್ ಡಿ.ಬಿ., ವಿದ್ಯಾರ್ಥಿ