ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಹೊಸದಿಲ್ಲಿ: ನಾಯಿಗಳಿಗೆ ಆಹಾರ ನೀಡುವ ಹಕ್ಕು ನಾಗರಿಕರಿಗೆ ಇದೆ ಎಂಬುದನ್ನು ಗಮನಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸರಕಾರೇತರ ಸಂಸ್ಥೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಭಾರತದ ಪ್ರಾಣಿ ಕಲ್ಯಾಣ ಮಂಡಳಿ, ದಿಲ್ಲಿ ಸರಕಾರ ಹಾಗೂ ಇತರರಿಗೆ ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಹಾಗೂ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠ ನೋಟಿಸು ಜಾರಿ ಮಾಡಿದೆ.
‘‘ನೋಟಿಸು ನೀಡಲಾಗುವುದು. ಈ ನೋಟಿಸಿಗೆ 6 ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು. ಈ ನಡುವೆ ದೋಷಾರೋಪಣೆ ಮಾಡಿದ ಆದೇಶಕ್ಕೆ ತಡೆ ನೀಡಲಾಗುವುದು’’ ಎಂದು ಪೀಠ ಹೇಳಿದೆ.
ಉಚ್ಚ ನ್ಯಾಯಾಲಯ 2021 ಜೂನ್ 24ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಸರಕಾರೇತರ ಸಂಸ್ಥೆ ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ಸ್ ಆ್ಯಂಡ್ ಅನಿಮಲ್ಸ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಉಚ್ಚ ನ್ಯಾಯಾಲಯದ ನಿರ್ದೇಶನ ಬೀದಿ ನಾಯಿಗಳ ಪಿಡುಗು ಹೆಚ್ಚಾಗಲು ಕಾರಣವಾಗುತ್ತದೆ ಎಂದು ಸಕಾರೇತರ ಸಂಸ್ಥೆ ಪ್ರತಿಪಾದಿಸಿತ್ತು.





