ಉಕ್ರೇನಿನಲ್ಲಿ ಮೃತಪಟ್ಟ ನವೀನ್ ಮನೆಗೆ ಶೋಭಾ ಕರಂದ್ಲಾಜೆ ಭೇಟಿ

ಉಡುಪಿ, ಮಾ.5: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ಯುದ್ಧ ಬಾಧಿತ ಉಕ್ರೇನ್ನಲ್ಲಿ ರಶ್ಯದ ಬಾಂಬ್ ದಾಳಿಯಿಂದ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ ಗ್ಯಾನಗೌಡರ್ರ ರಾಣಿಬೆನ್ನೂರು ತಾಲೂಕಿನ ಚಳಗೇರಿಗೆಯ ಮನೆಗೆ ಇಂದು ಭೇಟಿ ನೀಡಿದರು.
ಈ ಸಂರ್ಭದಲ್ಲಿ ನವೀನ್ ಅವರ ಪಾಲಕರಿಗೆ ಸಾಂತ್ವನ ಹೇಳಿದರು. ಉಕ್ರೇನ್ ನಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ನಾವು ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದರು.
ಭಾರತ ಸರಕಾರ, ಉಕ್ರೇನ್ನಲ್ಲಿರುವ ಪ್ರತಿಯೊಬ್ಬ ಭಾರತೀಯನನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯದ ಮುನ್ನೆಚ್ಚರಿಕೆ ಹಾಗೂ ಪ್ರಯತ್ನಗಳನ್ನು ಮುಂದುವರಿಸಿದೆ, ಈಗಾಗಲೇ 18,000ಕ್ಕೂ ಅಧಿಕ ಭಾರತೀಯರನ್ನು ಉಕ್ರೇನ್ನಿಂದ ನೆರೆಯ ದೇಶಗಳ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಹಾಗೂ 10,000 ಕ್ಕೂ ಹೆಚ್ಚಿನ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ ಎಂದು ಕೇಂದ್ರ ಸಚಿವೆ ಮಾಹಿತಿ ನೀಡಿದರು.