ಯುವ ವಿಜ್ಞಾನಿಗಳು ಸಂಶೋಧನೆ ಮತ್ತು ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಮೈಸೂರಿನಲ್ಲಿ ನೂತನ ಕಾಸ್ಮೋಲಜಿ ಶಿಕ್ಷಣ ಸಂಸೋಧನಾ ತರಬೇತಿ ಸಂಸ್ಥೆಗೆ ಸ್ಥಾಪನೆಗೆ ಶಂಕುಸ್ಥಾಪನೆ

ಮೈಸೂರು,ಮಾ.6: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರವಿವಾರ ಮೈಸೂರು ವಿಶ್ವವಿದ್ಯಾಲಯ ಆವರಣದ, ಚಾಮುಂಡಿ ಬೆಟ್ಟದ ತಪ್ಪಲಿನ ಬಳಿ ನೂತನ ಕಾಸ್ಮೋಲಜಿ ಶಿಕ್ಷಣ, ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಬಂದಿದ್ದಾರೆ. ಇವರೆ ನಮ್ಮ ಭವಿಷ್ಯ . ಇವರೆಲ್ಲರೂ ವಿಜ್ಞಾನಿಗಳಾಗಿ ದೇಶದ ಕೀರ್ತಿ ಪತಾಕೆ ಹಾರಿಸಬೇಕು. ಯುವ ವಿಜ್ಞಾನಿಗಳು ಸಂಶೋಧನೆ ಮತ್ತು ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಖಗೋಳ ತಾರಾಲಯ ಸ್ಥಾಪನೆಯಾದ ಮೇಲೆ ಹಳೆಯದು, ಹೊಸದು ಅಂತ ಸಾಕಷ್ಟು ಡೇಟಾ ಸಂಗ್ರಹವಾಗುತ್ತದೆ. ಆದರೆ, ಬರೀ ಶೇಖರಣೆಯಾದರೆ ಪ್ರಯೋಜನವಿಲ್ಲ ಅದು ಬಳಕೆಯಾಗಬೇಕು. ಬಳಕೆಯಾಗಲು ಸೂಕ್ತವಾಗಿ ಮಾರ್ಗದರ್ಶನ ಮಾಡುವವರು ಬೇಕು. ಅಂತಹ ಸಲಹೆಗಾರರು ಮೈಸೂರು ವಿವಿಯಲ್ಲಿ ಇದ್ದಾರೆ. ಯುವ ವಿಜ್ಞಾನಿಗಳು ತಾರಾಲಯದ ಡೇಟಾವನ್ನು ಸರಿಯಾಗಿ ಬಳಸಿಕೊಂಡರೆ ಜನರಿಗೆ, ದೇಶಕ್ಕೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ನಾವು ಈಗ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕಿದೆ. ಅವುಗಳ ಬಳಕೆಯ ಲಾಭ ಸಮಾಜದ ಎಲ್ಲ ಕ್ಷೇತ್ರಗಳಿಗೂ ದಕ್ಕಬೇಕಿದೆ ಎಂದರು. ಭಾರತ ವಿಶ್ವಗುರುವಾಗಲು ಇದೊಂದು ಮಹತ್ವದ ಹೆಜ್ಜೆ. ಇಲ್ಲಿ ಮೈಸೂರು ವಿಶ್ವವಿದ್ಯಾಲಯ 3 ಎಕರೆ ಜಾಗ ನೀಡಿದ್ದು, ಈ ಕೇಂದ್ರದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ಪ್ಲಾನಿಟೋರಿಯಂ ಅನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸ್ಥಾಪಿಸಲಿದೆ. ಯುವ ವಿಜ್ಞಾನಿಗಳು ಹೆಚ್ಚು ಹೆಚ್ಚು ಬರಬೇಕಿದೆ. ಅದರಲ್ಲಿ ಯುವತಿಯರ ಸಂಖ್ಯೆಯೂ ಗಣನೀಯವಾಗಿರಬೇಕಿದೆ. ಈ ನಿಟ್ಟಿನಲ್ಲಿ ಈ ಕೇಂದ್ರವು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಸಂಸದ ಪ್ರತಾಪಸಿಂಹ, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್, ಅಣುಶಕ್ತಿ ವಿಭಾಗದ ಕಾರ್ಯದರ್ಶಿ ಕೆ.ಎನ್.ವ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣಿಯಂ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಎಸ್ಟಿ ಪಾಲು ರಾಜ್ಯಕ್ಕೆ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದ ವಿದ್ಯಾರ್ಥಿನಿ
ಜಿಎಸ್ಟಿ ಜಾರಿಯಾದಾಗಿನಿಂದಲೂ ರಾಜ್ಯಕ್ಕೆ ಪಾಲು ಹಂಚಿಕೆ ಮಾಡುವಾಗ ಅನ್ಯಾಯವಾಗುತ್ತಿದೆ. ನಾವು ಕಟ್ಟುವ ತೆರಿಗೆಗಿಂತಲೂ ಕಡಿಮೆ ಪಾಲು ನಮಗೆ ಸಿಗುತ್ತಿದೆ. ಹೀಗ್ಯಾಕೆ ಎನ್ನುವ ಅರ್ಥದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಇದರಿಂದ ತುಸು ಬಿಸಿಯಾದ ಹಣಕಾಸು ಸಚಿವರು ಎಲ್ಲ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಸಣ್ಣ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ. ಹಾಗಂತ ಆ ರಾಜ್ಯದ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾಗುತ್ತದೆ? ಎಂದು ಉತ್ತರಿಸಿದ್ದಾರೆ.
ಆದರೆ ಈ ಉತ್ತರ ಕೇವಲ ಸಮಜಾಯಿಸಿ ನೀಡುವ ಪ್ರಯತ್ನವಷ್ಟೇ. ನಮ್ಮ ರಾಜ್ಯವೂ ಸಾಕಷ್ಟು ವಿಚಾರಗಳಲ್ಲಿ ಹಿಂದಿದೆ. ನಿರುದ್ಯೋಗ, ನೀರಾವರಿ ಸೌಲಭ್ಯ, ಗ್ರಾಮೀಣಾಭಿವೃದ್ಧಿ ಸೇರಿ ಹಲವಾರು ವಿಚಾರಗಳಲ್ಲಿ ಇನ್ನೂ ಪ್ರಗತಿ ಆಗಬೇಕಿದೆ. ಆದರೂ ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ಉತ್ತರದ ಅದರಲ್ಲಿಯೂ ಮುಖ್ಯವಾಗಿ ಹಿಂದಿ ಭಾಷಿಕ ರಾಜ್ಯಗಳ ಅಭಿವೃದ್ಧಿಗಾಗಿ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಇದು ಕೇವಲ ಓಟ್ ಬ್ಯಾಂಕ್ ರಾಜಕಾರಣ. ನಮ್ಮ ದುಡಿಮೆ ಮೊದಲು ನಮಗೆ ಧಕ್ಕಬೇಕು. ಅದನ್ನು ಬಿಟ್ಟು ನಾವು ದುಡಿದು ಬೇರೆಯವರ ಹೊಟ್ಟೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಈ ನಡೆ ಸಮರ್ಪಕವಲ್ಲ ಎನ್ನುವ ಅಭಿಪ್ರಾಯ ಕೆಲವು ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.







