ಬೆಂಗಳೂರು: ಪ್ರೀತಿಸಿ ಮದುವೆಯಾದ ತಮಿಳುನಾಡು ಸಚಿವರ ಪುತ್ರಿ; ರಕ್ಷಣೆಗಾಗಿ ಪೊಲೀಸರ ಮೊರೆ

photo- twitetr
ಬೆಂಗಳೂರು, ಮಾ.7: ಪ್ರೀತಿಸಿ ವಿವಾಹವಾಗಿದ್ದು, ಈ ಸಂಬಂಧ ಸೂಕ್ತ ಭದ್ರತೆ ಒದಗಿಸುವಂತೆ ನಗರ ಪೊಲೀಸರಿಗೆ ತಮಿಳುನಾಡಿನ ಸಚಿವರ ಪುತ್ರಿಯೊಬ್ಬರು ಮನವಿ ಮಾಡಿದ್ದಾರೆ.
ಸೋಮವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಆಪ್ತ ಎನ್ನಲಾದ ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯಕಲ್ಯಾಣಿ ಅವರು ಪತಿಯೊಂದಿಗೆ ಭೇಟಿ ನೀಡಿ, ತಮಗೆ ರಕ್ಷಣೆ ನೀಡುವಂತೆ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಕಲ್ಯಾಣಿ, ಹಲವು ವರ್ಷಗಳಿಂದ ಸತೀಶ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದೇನೆ. ಆದರೆ, ನಮ್ಮ ಪ್ರೀತಿಗೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ತಿಂಗಳ ಹಿಂದೆ ಮದುವೆ ಮಾಡಿಕೊಳ್ಳಲು ಮುಂದಾದಾಗ ಸತೀಶ್ ಅವರನ್ನು ಅಕ್ರಮವಾಗಿ ಎರಡು ತಿಂಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ದೂರಿದರು.
ಇದರ ಹಿಂದೆ ನಮ್ಮ ತಂದೆಯವರ ಕೈವಾಡವಿದೆ. ಸ್ವಇಚ್ಛೆಯಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ತಮಿಳುನಾಡಿಗೆ ಹೋದರೆ ನಮ್ಮ ಪ್ರಾಣವನ್ನು ತೆಗೆಯಬಹುದು ಹೀಗಾಗಿ ನಮಗೆ ರಕ್ಷಣೆ ನೀಡಬೇಕೆಂದು ಕರ್ನಾಟಕ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.





