ಒಂದು ವರ್ಷದಲ್ಲಿ 30 ಸಾವಿರ ಮಹಿಳಾ ಉದ್ಯಮಿಗಳಿಗೆ ಮನ್ನಣೆ: ಸಚಿವ ಡಾ. ಅಶ್ವತ್ಥನಾರಾಯಣ
ಚೌಡಯ್ಯ ಭವನದಲ್ಲಿ ಮಹಿಳಾ ದಿನಾಚರಣೆ

ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮುಂದಿನ ಒಂದು ವರ್ಷದಲ್ಲಿ ತಲಾ 1 ಸಾವಿರ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಜೀವನೋಪಾಯ ಸಂವರ್ಧನೆ ಇಲಾಖೆಯು ತೀರ್ಮಾನಿಸಿದೆ. ಈ ಮೂಲಕ 30 ಸಾವಿರ ಸಾಧಕಿಯರನ್ನು ಗುರುತಿಸಿ, ಮುನ್ನೆಲೆಗೆ ತರಲಾಗುವುದು ಎಂದು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು ಉತ್ತರ ಜಿಲ್ಲಾ ಘಟಕವು ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಸ್ತೀ ಉದ್ಯಮಿಗಳಿಗೆ ಯಾವುದೇ ಖಾತ್ರಿ ಇಲ್ಲದೆ 1 ಕೋಟಿ ರೂ.ವರೆಗೂ ಬ್ಯಾಂಕ್ ಸಾಲ ಕೊಡಲಾಗುತ್ತಿದೆ. ಜೊತೆಗೆ, ಮಹಿಳೆಯರೇ ತಯಾರಿಸುತ್ತಿರುವ ಉತ್ಪನ್ನಗಳಿಗೆ ಸರಕಾರವೇ ಇ-ಕಾಮರ್ಸ್ ವೇದಿಕೆಯನ್ನು ಒದಗಿಸಲಿದೆ. ಅಲ್ಲದೆ, ಅಮೆಝಾನ್ ಮತ್ತು ಫ್ಲಿಪ್ ಕಾರ್ಟ್ ತರಹದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಡಿಜಿಟಲೀಕರಣದ ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್ ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿತು. ಮಹಿಳೆಯರ ಸಬಲೀಕರಣದಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ನಿರ್ಣಾಯಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದ ಆಧಾರಸ್ತಂಭವಾಗಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮನೆಮನೆಗೂ 24x7 ಕುಡಿಯುವ ನೀರನ್ನು ಜಲಜೀವನ್ ಮಿಷನ್ ಮತ್ತು `ಮನೆಮನೆಗೆ ಗಂಗೆ’ ಯೋಜನೆಗಳಡಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಸಚಿವರು ನುಡಿದರು.
ಮಹಿಳೆಯರು ತಾಯಿ, ಪತ್ನಿ, ಮಗಳು, ಅಜ್ಜಿ ಇತ್ಯಾದಿ ಪಾತ್ರಗಳನ್ನು ಸಮರ್ಥವಾಗಿ ಕುಟುಂಬದಲ್ಲಿ ನಿರ್ವಹಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಸಮಾಜದ ಆರ್ಥಿಕ ಬೆಳವಣಿಗೆಯಲ್ಲೂ ಇವರ ಪಾತ್ರ ಶೇ. 50ರಷ್ಟಾಗಬೇಕು. ಇದಕ್ಕಾಗಿ ಸಾಕಷ್ಟು ಶಾಸನಗಳನ್ನು ರೂಪಿಸಲಾಗಿದ್ದು, ಮಹಿಳೆಯರಿಗೆ ಕಾನೂನಿನ ರಕ್ಷಣೆಯನ್ನೂ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ನಿಜವಾದ ಮೀಸಲಾತಿ ಸೌಲಭ್ಯವನ್ನು ಮಹಿಳೆಯರಿಗೆ ಕೊಡಬೇಕಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಿಂದ ನಾವು ಹಂತಹಂತವಾಗಿ ಮಹಿಳಾ ಪ್ರಧಾನ ಸಮಾಜವಾಗಿ ಬದಲಾಗುತ್ತಿದ್ದೇವೆ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡೂ ಇಂದಿನ ಮಹಿಳೆಯರಿಗೆ ಸಿಕ್ಕಿರುವ ಎರಡು ದೊಡ್ಡ ವರದಾನಗಳಾಗಿವೆ ಎಂದು ಅಶ್ವತ್ಥನಾರಾಯಣ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಮುಖಂಡರಾದ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಗಿರೀಶ್ ಮತ್ತು ಚನ್ನೇಗೌಡ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕಿಯರಿಗೆ ಸಚಿವರು ಪುರಸ್ಕಾರ ಪ್ರದಾನ ಮಾಡಿದರು.







