ಕಾರ್ಕಳ ಉತ್ಸವಕ್ಕಾಗಿ ವಿಶೇಷ ಮೊಬೈಲ್ ಟವರ್
ಕಾರ್ಕಳ : ಮಾರ್ಚ್ 10ರಿಂದ 20ರವರೆಗೆ ನಡೆಯಲಿರುವ ಕಾರ್ಕಳ ಉತ್ಸವದಲ್ಲಿ ಜನ ಒಗ್ಗೂಡುವ ಸಂದರ್ಭದಲ್ಲಿ ಉಂಟಾಗುವ ಮೊಬೈಲ್ ಒತ್ತಡವನ್ನು ನಿಯಂತ್ರಿಸುವ ಸಲುವಾಗಿ 2 ಮೊಬೈಲ್ ಟವರ್ ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ.
ಜಿಯೋ ಹಾಗೂ ಏರ್ಟೆಲ್ ಟವರ್ಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದ್ದು, ಜೊತೆಗೆ ಇತರ ಟವರ್ಗಳ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಮಾರ್ಚ್ 9ರಂದು ವಿಶೇಷ ಅಂಚೆ ಕವರ್ ಬಿಡುಗಡೆ
ಕಾರ್ಕಳ ಉತ್ಸವದ ಅಂಗವಾಗಿ ಮಾರ್ಚ್ 9ರಂದು ಸಂಜೆ ನಾಲ್ಕು ಗಂಟೆಗೆ ಗಾಂಧಿ ಮೈದಾನದಲ್ಲಿ ಜಸ್ಟಿಸ್ ಕೆ. ಎಸ್ ಹೆಗ್ಡೆ, ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ, ಶಿಲ್ಪಿ ಶ್ಯಾಮರಾಯ ಆಚಾರ್ಯ ಸ್ಮರಣಾರ್ಥ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾರ್ಕಳ ಉತ್ಸವಕ್ಕೆ ಹೆಚ್ಚುವರಿ ವೈದ್ಯಕೀಯ ಸೌಲಭ್ಯ
ಕಾರ್ಕಳ ಉತ್ಸವದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯಕೀಯ ಸೌಲಭ್ಯದ ಜೊತೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ವೈಧ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಹೆಲಿಕಾಪ್ಟರ್ ನಿಲ್ಲುವ ಹೆಲಿಪ್ಯಾಡ್ನಲ್ಲಿ ಮಾರ್ಚ್ 10 ರಿಂದ 14ರವರೆಗೆ ಬೆಳಿಗ್ಗೆ 9ಗಂಟೆಯಿಂದ ಸಂಜೆ 6ರ ವರೆಗೆ, ಕಾರ್ಕಳ ಗಾಂಧಿಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಸಂದರ್ಭದಲ್ಲಿ ಮಾರ್ಚ್ 10ರಿಂದ 17ರವರೆಗೆ ಸಂಜೆ 6ರಿಂದ 10ರವರೆಗೆ, ವಸ್ತು ಪ್ರದರ್ಶನ ಮಳಿಗೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 11ರವರೆಗೆ ವೈದ್ಯರು ಹಾಗೂ ನರ್ಸ್ಗಳನ್ನು ಒಳಗೊಂಡ ಆಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಸರಕಾರಿ ವೈದ್ಯರ ಜೊತೆಗೆ ಆಯುಷ್ ವೈದ್ಯರು ಕೂಡಾ ಸೇವೆಯ್ಲಲಿರುತ್ತಾರೆ. ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಗಳನ್ನು ಉಪಯೋಗಿಸಿ ಕೊಳ್ಳಲಾಗುವುದು. ಮಾರ್ಚ್ 14ರಿಂದ ವಸ್ತು ಪ್ರದರ್ಶನ ಮಳಿಗೆಯ ಬಳಿ ಹಾಗೂ ಸ್ವರಾಜ್ ಮೈದಾನದಲ್ಲಿ ಪ್ರತ್ಯೇಕ ೨ ಕ್ಲಿನಿಕ್ಗಳನ್ನು ತೆರೆಯಲಾಗುವುದು. ಮಾರ್ಚ್ 10ರಿಂದ ಗಾಂಧಿ ಮೈದಾನದಲ್ಲಿ ಆರೋಗ್ಯ ಕ್ಲಿನಿಕ್ ಲಭ್ಯವಿದೆ.
ಉತ್ಸವದ ಕೊನೆಯ 3 ದಿನ ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆ ವೈದ್ಯರು ಲಭ್ಯರಿರುತ್ತಾರೆ. ಈ ಎಲ್ಲಾ ಕಾರ್ಯದಲ್ಲಿ 50 ವೈದ್ಯರು ಸೇರಿದಂತೆ ಸುಮಾರು 150 ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.